ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ವಿಶೇಷಗಳೇನು? ಸಾಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿ ಅವರ ಚರಕವನ್ನು ದೃಷ್ಟಿಸಿದ ಟ್ರಂಪ್, ಅಲ್ಲಿದ್ದ ಪುಸ್ತಕದಲ್ಲಿ ತಮ್ಮ ಅಭಿಪ್ರಾಯ ಬರೆಯುವಾಗ ಮಹಾತ್ಮನ ಹೆಸರನ್ನೇ ಉಲ್ಲೇಖಿಸಲಿಲ್ಲ. ಅವರು ಮಾಡಿದ ದೀರ್ಘ ಭಾಷಣದಲ್ಲಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಅವರುಗಳನ್ನು ಉಲ್ಲೇಖಿಸಿದರಲ್ಲದೆ, ನರೇಂದ್ರ ಮೋದಿಯವರ ಗುಣಗಾನ ಮಾಡಿದರು. ಆದರೆ 70 ವರ್ಷಗಳಲ್ಲಿ ಭಾರತವು ವಿಶ್ವದಲ್ಲಿ ಪ್ರಮುಖ ರಾಷ್ಟ್ರವಾಗುವಲ್ಲಿ ಕೊಡುಗೆ ನೀಡಿದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಗಾಂಧಿಯವರನ್ನು ನೆನೆಯಲೇ ಇಲ್ಲ. ಮೋದಿಯವರನ್ನು ಮುಕ್ತಕಂಠದಿಂದ ಹೊಗಳಿದ ಮಾತ್ರಕ್ಕೆ ಇತಿಹಾಸವನ್ನು ಮರೆಯಲು ಸಾಧ್ಯವೇ?
ಅಮೆರಿಕವು ಭಾರತಕ್ಕೆ ಕೊಡಲಿರುವ ರಕ್ಷಣಾ ಸಾಧನಗಳನ್ನು ಮುಂದಿನ ದಿನಗಳಲ್ಲಿ ಅವರು ಪಾಕಿಸ್ತಾನಕ್ಕೆ ಕೊಡುವುದಿಲ್ಲವೆಂದೇನು ಖಾತರಿ? ಅಂತೂ ಟ್ರಂಪ್ ಅವರ ಭಾರತ ಯಾತ್ರೆಯಲ್ಲಿ ಭಾರತ ಗಳಿಸಿದ್ದು ಬಹಳ ಕಡಿಮೆ. ಇದಕ್ಕಾದ ಖರ್ಚು ಅಪಾರ. ಯಾವ ದೇಶದಲ್ಲಿ ಬಡತನ, ರೋಗ ರುಜಿನಗಳಿಲ್ಲ? ಅಲ್ಲದೆ, ಅಹಮದಾಬಾದ್ನಲ್ಲಿ ಟ್ರಂಪ್ ಅವರಿಗೆ ಕೊಳೆಗೇರಿ ಕಾಣಿಸದಿರಲೆಂದು ಗೋಡೆ ಕಟ್ಟಿದ್ದನ್ನು ಮಾಧ್ಯಮಗಳು ಪ್ರಚಾರ ಮಾಡಲಿಲ್ಲವೇ? ಇದಕ್ಕಾಗಿ ಸರ್ಕಾರ ಮಾಡಿದ ಕೋಟ್ಯಂತರ ರೂಪಾಯಿ ವೆಚ್ಚವನ್ನು ಆ ಕೊಳೆಗೇರಿಯ ಅಭಿವೃದ್ಧಿಗಾಗಿ ಬಳಸಿದ್ದರೆ ಅರ್ಥಪೂರ್ಣ ಎನಿಸುತ್ತಿತ್ತು.
ಕೆ.ಎನ್.ಭಗವಾನ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.