ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚೆಗೆ ಮಂಡಿಸಿದ ಬಜೆಟ್ಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಇವೆಲ್ಲ ಸ್ವಾಗತಾರ್ಹ ವಿಚಾರಗಳೇ. ಆದರೆ, ಎಲ್ಲೂ ಆಯುರ್ವೇದ ಮತ್ತು ನಿಸರ್ಗ ಚಿಕಿತ್ಸೆಗೆ ಸಂಬಂಧಿಸಿದಂತೆ ಹೊಸ ಯೋಜನೆಗಳು, ಹೊಸ ಕಾರ್ಯಕ್ರಮಗಳ ಪ್ರಸ್ತಾಪ ಇಲ್ಲದಿರುವುದು ಆಶ್ಚರ್ಯಕರ. ಈ ಪದ್ಧತಿಗಳು ಈಗಾಗಲೇ ಜನಪ್ರಿಯವಾಗಿವೆ. ಇವುಗಳಿಂದ ಪರಿಣಾಮಕಾರಿ ಚಿಕಿತ್ಸೆಗಳೂ ಲಭ್ಯವಾಗಿವೆ. ರೋಗ ಬಂದ ಬಳಿಕ ಚಿಕಿತ್ಸೆಗೊಳಪಡುವ ಬದಲು, ಮೊದಲೇ ಆರೋಗ್ಯಕರ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳುವಲ್ಲೂ ನಿಸರ್ಗ ಚಿಕಿತ್ಸೆ ಪರಿಣಾಮಕಾರಿ. ಹೀಗಿದ್ದೂ ಸರ್ಕಾರಗಳು ಇವೆರಡೂ ಕ್ಷೇತ್ರಗಳನ್ನು ಉತ್ತೇಜಿಸದಿರುವುದು ವಿಷಾದನೀಯ.
ಈಗಂತೂ ಆಯುರ್ವೇದ ಮತ್ತು ನಿಸರ್ಗ ಚಿಕಿತ್ಸೆ ಎಂದಾಕ್ಷಣ ರಾಜ್ಯದಲ್ಲಿ ಖಾಸಗಿ ವಲಯವೇ ಕಣ್ಮುಂದೆ ಬರುತ್ತದೆ. ಜನ ಅನಿವಾರ್ಯವಾಗಿ ಇವನ್ನೇ ಅವಲಂಬಿಸಬೇಕಾಗಿದೆ. ನಿಸರ್ಗ ಚಿಕಿತ್ಸೆಯಂತೂ ದುಬಾರಿಯಾಗಿದ್ದು, ಬಡವರಿಗೆ ಕೈಗೆಟುಕದು. ಆದ್ದರಿಂದ ರಾಜ್ಯದಾದ್ಯಂತಇರುವ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಬೇಕು. ಹೊಸ ಕಾರ್ಯಕ್ರಮಗಳನ್ನು ಪ್ರಚುರಪಡಿಸಬೇಕು. ಜೊತೆಗೆ ಸರ್ಕಾರವೇ ನಿಸರ್ಗ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿ, ಬಡವರಿಗೂ ಪರ್ಯಾಯ ಚಿಕಿತ್ಸೆಗಳು ಕಡಿಮೆ ದರದಲ್ಲಿ ದೊರೆಯುವಂತೆ ಮಾಡಬೇಕು.
–ಆರ್.ಎಸ್.ಅಯ್ಯರ್, ತುಮಕೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.