ಎಷ್ಟೆಷ್ಟೋ ಶತಮಾನಗಳಿಂದ ಅಬಾಧಿತವಾಗಿ ಉಳಿದುಕೊಂಡು ಬಂದಿರುವ ಬೆಟ್ಟಗುಡ್ಡಗಳನ್ನು ನಿರ್ದಾಕ್ಷಿಣ್ಯವಾಗಿ ಆಕ್ರಮಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಇದು ಹೆಚ್ಚಾಗುತ್ತಿದ್ದು ಇಂಥ ಮೂರ್ಖ ಅತಿಕ್ರಮಣಕಾರರನ್ನು ನಿಯಂತ್ರಿಸುವವರೇ ಇಲ್ಲವಾಗಿದೆ. ಈ ಬಗ್ಗೆ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದು ಕಂಡು ಬಂದಿಲ್ಲ. ಇದೊಂದು ಕ್ಷಮಿಸಲಾಗದ ಲೋಪ.
ಶತಶತಮಾನಗಳಿಂದಲೂ ಭೂಭಾಗವಾಗಿ ಉಳಿದುಕೊಂಡು ಬಂದಿರುವ ಇಂಥ ಅಮೂಲ್ಯ ಶಿಲಾನಿಧಿಯು ನಿರ್ಗತಿಕರ ಪಾಲಿಗೆ ವಸತಿಯಾಗಿ, ಶ್ರೀಮಂತರ ಪಾಲಿಗೆ ವೈಯಕ್ತಿಕ ಮೋಜಿನ ತಾಣವಾಗಿ ಬದಲಾಗುತ್ತಿರುವುದು ದೌರ್ಭಾಗ್ಯ. ಹಣವಿದೆ ಎನ್ನುವ ಒಂದೇ ಕಾರಣಕ್ಕಾಗಿ ಎಕರೆಗಟ್ಟಲೆ ಶಿಲಾನಿಧಿಯನ್ನು ಲಪಟಾಯಿಸಿರುವುದನ್ನು ಸರ್ಕಾರವು ಇನ್ನಾದರೂ ತಡೆಗಟ್ಟಬೇಕು.
ಕೆರೆಗಳು, ರಾಜಕಾಲುವೆಗಳ ರಕ್ಷಣೆಗೆ ಇರುವಂತಹ ಕಾನೂನುಗಳನ್ನು ಬೆಟ್ಟಗುಡ್ಡಗಳಿಗೂ ಬಂಡೆಗಳಿಗೂ ಅನ್ವಯಿಸುವ ರೀತಿಯಲ್ಲಿ ರೂಪಿಸಿ ಜಾರಿಗೊಳಿಸಬೇಕು. ಅತಿಕ್ರಮಣಗಳ ಬಗ್ಗೆ ಸ್ಥಳೀಯ ಜನರಿಂದಲೇ ಮಾಹಿತಿ ಸಂಗ್ರಹಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
ಅರಣ್ಯ ವಲಯದ ಅಂಚುಗಳಲ್ಲಿ, ಬೆಟ್ಟಗುಡ್ಡಗಳ ಬುಡಗಳಲ್ಲಿ ಜನರು ಯಾವುದೇ ಎಗ್ಗಿಲ್ಲದೆ ಅತಿಕ್ರಮಣ ಮಾಡುತ್ತಿರುವುದನ್ನು ಕಣ್ಣಾರೆ ಕಂಡರೂ ಅಸಹಾಯಕವಾಗಿ ಸುಮ್ಮನಿರುವಂಥ ಸ್ಥಿತಿ ಬಂದಿದೆ. ಇಂತಹ ಅತಿಕ್ರಮಣಗಳು ದಿನೇ ದಿನೇ ಕೈಮೀರಿ ಹೋಗುತ್ತಿವೆ. ಶಿಲಾ ಸಂಪತ್ತನ್ನು ಸಂರಕ್ಷಿಸುವ ಹೊಣೆ ಸರ್ಕಾರಕ್ಕೆ ಇದೆ. ಅದನ್ನು ಮನಗಾಣಬೇಕು.
-ಎಂ. ವಿಶ್ವನಾಥ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.