ADVERTISEMENT

ವಾಚಕರ ವಾಣಿ | ಕಸಾಪ: ಶೈಕ್ಷಣಿಕ ಮಾನದಂಡದ ಔಚಿತ್ಯವೇನು?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಫೆಬ್ರುವರಿ 2022, 19:45 IST
Last Updated 16 ಫೆಬ್ರುವರಿ 2022, 19:45 IST

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆಯಲು ಶೈಕ್ಷಣಿಕ ಅರ್ಹತೆ ನಿಗದಿಪಡಿಸುವ ವಿಚಾರ ತಿಳಿದು ಆಶ್ಚರ್ಯವಾಯಿತು. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕಸಾಪ ಸದಸ್ಯತ್ವ ಪಡೆಯಲು ಈ ಮಾನದಂಡವನ್ನು ಅನುಸರಿಸಲು ಹೊರಟಿರುವುದು ಅಪ್ರಬುದ್ಧವಾದುದು. ಕನ್ನಡ ಓದು ಬರಹ ಬಲ್ಲವರೆಲ್ಲರೂ ಸದಸ್ಯತ್ವ ಪಡೆಯಬಹುದು ಎಂಬುದು ಹಿಂದಿನ ಬೈಲಾದಲ್ಲಿ ಇದೆ. ಆದರೆ ಈಗ ಈ ಉಪನಿಯಮಕ್ಕೆ ತಿದ್ದುಪಡಿ ತಂದು ಶೈಕ್ಷಣಿಕ ಮಾನದಂಡ ನಿಗದಿ ಮಾಡಲು ಮುಂದಾಗಿರುವುದರ ಔಚಿತ್ಯವೇನು?

ಕನ್ನಡದ ಮೇರುನಟ ಡಾ. ರಾಜ್‍ಕುಮಾರ್ ಅವರು ಓದಿದ್ದು ಮೂರನೆಯ ತರಗತಿಯವರೆಗೆ ಮಾತ್ರ. ಅವರು ಗೋಕಾಕ್ ಚಳವಳಿಯ ಮುಖಾಂತರ ಕನ್ನಡಕ್ಕೆ ಕನ್ನಡತ್ವವನ್ನು ದಕ್ಕಿಸಿಕೊಟ್ಟರು. ಎಸ್‌ಎಸ್‌ಎಲ್‌ಸಿಯನ್ನೋ ಅಥವಾ ಏಳನೇ ತರಗತಿಯನ್ನೋ ಕನಿಷ್ಠ ಅರ್ಹತೆ ಎಂದು ಪರಿಗಣಿಸಿದರೆ ಡಾ. ರಾಜ್‍ಕುಮಾರ್ ಅವರಂಥ ಪ್ರತಿಭಾಶಾಲಿಗಳಿಗೆ ಅವಮಾನ ಮಾಡಿದಂತಾಗುತ್ತದೆ. ತೆಲುಗಿನ ಖ್ಯಾತನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರೂ ಹೆಚ್ಚು ಶಿಕ್ಷಣ ಪಡೆದವರಲ್ಲದಿದ್ದರೂ ಪ್ರತಿಭಾವಂತರಾಗಿ ಅವರ ಭಾಷೆಗೆ ಬೆಲೆ ತಂದುಕೊಟ್ಟಿದ್ದರು.

ಹಾಗೆಯೇ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕಾಮರಾಜ ನಾಡರ್ ಪ್ರಾಥಮಿಕ ಶಾಲೆಯನ್ನೂ ಪೂರೈಸಿರಲಿಲ್ಲ. ಆದರೆ ರಾಷ್ಟ್ರಮಟ್ಟದಲ್ಲಿ ಜನಪರ ಕೆಲಸಗಳಿಂದ ಪ್ರಸಿದ್ಧಿಯನ್ನು ಪಡೆದಂತಹವರು. ಪ್ರತಿಭೆಗೆ, ಜ್ಞಾನಕ್ಕೆ ಅಕ್ಷರ ಪ್ರಮಾಣವನ್ನು ಮಾನದಂಡ ಮಾಡುತ್ತಿರುವ ಕಸಾಪ ಅಧ್ಯಕ್ಷರ ನಡೆ ಅತ್ಯಂತ ದುರದೃಷ್ಟಕರ. ಇಂತಹ ಅಪರಿಪಕ್ವ ತಿದ್ದುಪಡಿಗಳನ್ನು ವಿರೋಧಿಸಬೇಕು.ಡಾ. ನಾಗಭೂಷಣ ಬಗ್ಗನಡು,ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT