ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 23:10 IST
Last Updated 29 ಜೂನ್ 2025, 23:10 IST
   

ರೈಲು ಸೇವೆ ವಿಸ್ತರಿಸಿ

ವಿಜಯಪುರದಿಂದ ಮಂಗಳೂರಿಗೆ ಚಲಿಸುವ ವಿಶೇಷ ರೈಲು ಇನ್ನು ಮುಂದೆ ಸಾಮಾನ್ಯ ರೈಲು ಆಗಿ ಪರಿವರ್ತಿತವಾಗಲಿದೆ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಹಳಷ್ಟು ರೈಲುಗಳಿವೆ. ಆದರೆ, ಕರಾವಳಿಗೆ ನೇರ ರೈಲು ಸೌಲಭ್ಯ ಇಲ್ಲ. ಮಂಗಳೂರಿನಿಂದ ಮಧ್ಯಾಹ್ನ 2.30ಗಂಟೆಗೆ ಹೊರಡುವ ರೈಲು ವಿಜಯಪುರಕ್ಕೆ ಮರುದಿನ ಬೆಳಿಗ್ಗೆ 9ಗಂಟೆಗೆ ತಲುಪುತ್ತದೆ. ಮತ್ತೆ ಅದು ಮಂಗಳೂರಿಗೆ ಹೊರಡುವುದು ಮಧ್ಯಾಹ್ನ 3 ಗಂಟೆಗೆ. ಬೆಳಿಗ್ಗೆ 9ಕ್ಕೆ ವಿಜಯಪುರಕ್ಕೆ ಬರುವ ರೈಲನ್ನು ಕಲಬುರಗಿವರೆಗೆ ವಿಸ್ತರಿಸಿದರೆ ಅದು ಮಧ್ಯಾಹ್ನ 2ರ ವೇಳೆಗೆ ತಲುಪುತ್ತದೆ. ಅಲ್ಲದೆ, ಅಲ್ಲಿಂದ ಸಂಜೆ ಹೊತ್ತಿಗೆ ಅದು ಹೊರಟರೂ ಮಧ್ಯಾಹ್ನ 2ರ ವೇಳೆಗೆ ಮಂಗಳೂರು ತಲುಪುತ್ತದೆ.

ಕಲಬುರಗಿಯಿಂದ ಸೊಲ್ಲಾಪುರದತ್ತ (ಹುಟಗಿ) ತಿರುಗಿಸಿದರೆ ರೈಲಿಗೆ ಒಂದೆರಡು ಗಂಟೆ ಉಳಿಯಲಿದೆ. ಹೈದರಾಬಾದಿನಿಂದ ಹುಬ್ಬಳ್ಳಿಗೆ ಹೋಗುವ ರೈಲು ತುಂಬಾ ಜನಜಂಗುಳಿಯಿಂದ ಕೂಡಿರುತ್ತದೆ. ಸೊಲ್ಲಾಪುರದಿಂದ ಹುಬ್ಬಳ್ಳಿಗೆ ಹಲವು ರೈಲುಗಳಿದ್ದು, ಇದರಿಂದ ಗೋಲ್‌ಗುಂಬಜ್ ರೈಲಿನ ಒತ್ತಡವನ್ನಾದರೂ ಕಡಿಮೆ ಮಾಡಬಹುದು. ಮಂಗಳೂರು–ವಿಜಯಪುರ ರೈಲನ್ನು ಕಲಬುರಗಿಗೆ, ಸಾಧ್ಯವಾದರೆ ಬೀದರ್‌ವರೆಗೆ ವಿಸ್ತರಿಸಿ ಸಾಮಾನ್ಯ ಮತ್ತು ಹೆಚ್ಚುವರಿಯಾಗಿ ಸ್ಲೀಪರ್ ಬೋಗಿ ಜೋಡಿಸಬೇಕಿದೆ.

ADVERTISEMENT

⇒ತಿರುಪತಿ ನಾಯಕ್, ಕಲಬುರಗಿ

ಖಾಸಗಿ ಬಸ್‌ ಮೇಲೆ ಕ್ರಮ ಏಕಿಲ್ಲ?

ಆಟೊ ಚಾಲಕರು ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವುದು ಹಾಗೂ ನಿರ್ದಿಷ್ಟ ಸ್ಥಳಗಳಿಗೆ ಹೋಗಲು ನಿರಾಕರಿಸುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿರುವುದು ಶ್ಲಾಘನೀಯ. ಈ ಕ್ರಮವು ಖಾಸಗಿ ಬಸ್‌ಗಳಿಗೆ ಅನ್ವಯಿಸುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ವಾರಾಂತ್ಯ, ಹಬ್ಬ ಹಾಗೂ ರಜೆ ದಿನಗಳಲ್ಲಿ ಖಾಸಗಿ ಬಸ್‌ ಮಾಲೀಕರು ಬೇಕಾಬಿಟ್ಟಿಯಾಗಿ ಟಿಕೆಟ್‌ ದರ ಏರಿಸುವ ಪರಿಪಾಟ ಇದೆ. ಆ ಮೂಲಕ ಪ್ರಯಾಣಿಕರನ್ನು ಆರ್ಥಿಕವಾಗಿ ಶೋಷಿಸುತ್ತಿದ್ದಾರೆ. ಖಾಸಗಿ ಬಸ್‌ ಮಾಲೀಕರ ಮೇಲೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ⇒

⇒ಜಿ. ನಾಗೇಂದ್ರ ಕಾವೂರು, ಸಂಡೂರು 

ಅಸ್ಪೃಶ್ಯತೆಯ ಕರಿನೆರಳು

ರವೀಂದ್ರ ಭಟ್ಟ ಅವರ ರಟ್ಟಾದ ‘ಒಳ’ಗುಟ್ಟು ಲೇಖನವು (ಪ್ರ.ವಾ., ಜೂನ್‌ 28) ಓದುಗರನ್ನು ಚಿಂತನೆಗೆ ಹಚ್ಚಿತು. ಅಸ್ಪೃಶ್ಯತೆ ನಿರ್ಮೂಲನೆಗೆ ಅಂಬೇಡ್ಕರ್ ತಮ್ಮ ಜೀವಮಾನವೆಲ್ಲಾ ಹೋರಾಡಿದರು. ಈಗ ಒಳಮೀಸಲಾತಿ ಸಮೀಕ್ಷೆ ಸಂದರ್ಭದಲ್ಲಿ ಅಸ್ಪೃಶ್ಯತೆಯ ಕರಿನೆರಳಿನಲ್ಲಿ ದಲಿತರು ನರಳುತ್ತಿರುವುದು ದುರಂತ.

ಅಸ್ಪೃಶ್ಯತೆ ತೊಲಗಬೇಕೆಂದರೆ ‘ನಾವೇ ಮೇಲು ಜಾತಿಯವರು’ ಎಂಬ ಭ್ರಮೆಯಲ್ಲಿ ಮುಳುಗಿರುವ ಜಾತಿವಾದಿಗಳನ್ನು ಆ ಭ್ರಮೆಯಿಂದ ಹೊರತರುವ ಕೆಲಸ ಆಗಬೇಕಿದೆ. ಈ ಕೆಲಸ ಅಷ್ಟು ಸುಲಭವೂ ಅಲ್ಲ. ಮೇಲು ವರ್ಗದವರು ಎಂದು ಭ್ರಮಿಸಿಕೊಂಡವರನ್ನು ಎಚ್ಚರಿಸಲು ಅಂಬೇಡ್ಕರ್ ಅವರಂತಹ ನೂರು ಮಹನೀಯರು ಬರಬೇಕೇನೋ ಎನ್ನುವ ಮಾತು ನೂರರಷ್ಟು ಸತ್ಯ. 

⇒ಗಣಪತಿ ಗೋ ಚಲವಾದಿ, ವಿಜಯಪುರ  

ಶಾಲೆ ಕೊಠಡಿ ನಿರ್ಮಾಣಕ್ಕೆ ಹಣವಿಲ್ಲ

‘ಸೋರುವ ಕೊಠಡಿಯಲ್ಲೇ ಕಲಿಕೆ!’ ವರದಿಯು (ಪ್ರ.ವಾ., ಜೂನ್ 29) ಸಕಾಲಿಕವಾಗಿದೆ. ಜಾತ್ರೆ, ರಥೋತ್ಸವ, ಹೊಸ ದೇವಸ್ಥಾನ, ಸನ್ಮಾನ ಕಾರ್ಯಕ್ರಮಗಳಿಗೆ ಸರ್ಕಾರವು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಆದರೆ, ಮಕ್ಕಳ ಭವಿಷ್ಯ ಕಟ್ಟಿಕೊಡುವ ದಿಸೆಯಲ್ಲಿ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸಿಕೊಡಲು ಮನಸ್ಸು ಬರುವುದೇ ಇಲ್ಲ. ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದುವ ಮಕ್ಕಳ ಸ್ಥಿತಿ ತೀರಾ ಶೋಚನೀಯ. ಶಿಕ್ಷಕರು ಮಕ್ಕಳಿಗೆ ಬೋಧಿಸುವುದನ್ನು ಬಿಟ್ಟು ಬೇರೆ ಎಲ್ಲಾ ಕೆಲಸವನ್ನೂ ಮಾಡಬೇಕಾಗಿದೆ. ಕಳಪೆ ಫಲಿತಾಂಶಕ್ಕೆ ಜವಾಬ್ದಾರಿಯನ್ನೂ ಹೊರಬೇಕಾಗಿರುವುದು ವಿಪರ್ಯಾಸ. 

⇒‌ಶಾಂತವೀರ ಎಸ್., ಚಿತ್ರದುರ್ಗ 

ಹೃ‌ದಯಾಘಾತ: ಸಂಶೋಧನೆಯಾಗಲಿ

ಭಾರತೀಯ ಹೃದಯ ವಿಜ್ಞಾನ ಸೊಸೈಟಿಯ ಮೈಸೂರು ಶಾಖೆಯು 40 ವರ್ಷಕ್ಕಿಂತ ಕಡಿಮೆ ವಯೋಮಾನದವರು ಹೃದಯಾಘಾತಕ್ಕೆ ಒಳಗಾಗುತ್ತಿರುವ ಬಗ್ಗೆ ಕಾರಣಗಳನ್ನು ಪತ್ತೆಹಚ್ಚಿ ವಿಶ್ಲೇಷಣೆ ಮಾಡಲು ವಿಶೇಷ ಯೋಜನೆ ರೂಪಿಸಿರುವುದು ಉತ್ತಮ ನಿರ್ಧಾರ. ಆರೋಗ್ಯವಂತ ಮತ್ತು ಯಾವುದೇ ದುಶ್ಚಟ ಇಲ್ಲದವರು ಹೃದಯಾಘಾತಕ್ಕೆ ಬಲಿ ಆಗುತ್ತಿರುವುದು ದುರದೃಷ್ಟಕರ. ಆರೋಗ್ಯ ವಿಜ್ಞಾನಕ್ಕೂ ಸವಾಲಾಗಿದೆ. ತಜ್ಞರು ಈ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಬೇಕಿದೆ.

⇒ವಿ. ತಿಪ್ಪೇಸ್ವಾಮಿ, ಹಿರಿಯೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.