ಕೇರಳದಲ್ಲಿ ಶಬರಿಮಲೆ ವಿಚಾರದಲ್ಲಿ ಬಿಜೆಪಿ ಎರಡನೇ ಹಂತದ ಹೋರಾಟ ಶುರು ಮಾಡಿದೆ (ಪ್ರ.ವಾ., ಡಿ.4). ಅಲ್ಲಿನ ಸಚಿವಾಲಯದ ಎದುರು ಆ ಪಕ್ಷದ ಕೆಲವು ನಾಯಕರು ಅನಿರ್ದಿಷ್ಟಾವಧಿ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಕೇರಳ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ಸಾಮಾನ್ಯವಾಗಿ ಕೋರ್ಟುಗಳು ನೀಡುವ ತೀರ್ಪನ್ನೋ ಅಥವಾ ಸಂವಿಧಾನವು ಜನರಿಗೆ ನೀಡಿರುವ ಹಕ್ಕುಗಳನ್ನೋ ಅನುಷ್ಠಾನಗೊಳಿಸಲು ಸರ್ಕಾರಗಳು ವಿಫಲವಾಗಿರುವುದನ್ನು ವಿರೋಧಿಸಿ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು ಸತ್ಯಾಗ್ರಹ ನಡೆಸುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲಿ ಕೋರ್ಟು ತೀರ್ಪನ್ನು ಜಾರಿಗೊಳಿಸಲು ಮುಂದಾಗಿರುವುದನ್ನೇ ವಿರೋಧಿಸಲಾಗುತ್ತಿದೆ. ಇದು ನಿಜಕ್ಕೂ ವಿಪರ್ಯಾಸ. ಕೋರ್ಟಿನ ತೀರ್ಪು ಯಾರಿಗಾದರೂ ಸಮಂಜಸವಲ್ಲ ಎನಿಸಿದರೆ ಮತ್ತೆ ಕೋರ್ಟ್ ಮೊರೆ ಹೋಗಲು ಅವಕಾಶ ಇದೆ. ಆದರೆರಾಷ್ಟ್ರದ ಅಧಿಕಾರದ ಚುಕ್ಕಾಣಿ ಹಿಡಿದ ಪಕ್ಷವೊಂದು ಕೋರ್ಟ್ ತೀರ್ಪನ್ನು ಜಾರಿಗೊಳಿಸುವ ಪ್ರಯತ್ನವನ್ನು ವಿರೋಧಿಸಿ ಸತ್ಯಾಗ್ರಹ ನಡೆಸುವ ಮೂಲಕ ಮುಂದೆ ಸಾರ್ವತ್ರಿಕ ಚುನಾವಣೆಗಳನ್ನು ಮುಂದಿಟ್ಟುಕೊಂಡು ಏನನ್ನು ಪ್ರತಿಪಾದಿಸಹೊರಟಿದೆ. ಸಂವಿಧಾನ ಮತ್ತು ಕೋರ್ಟುಗಳು ನೀಡುವ ತೀರ್ಪುಗಳಿಗೆ ನಾವು ಬದ್ಧರಾಗಿರುವುದಿಲ್ಲ ಎಂಬುದನ್ನೇ?
–ಹೊಸಮನೆ ವೆಂಕಟೇಶ,ಟಿ. ನರಸೀಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.