ವಿದ್ಯುತ್ ಸಮಸ್ಯೆ ನಿವಾರಿಸುವ ಸಲುವಾಗಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸೌರ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಸರ್ಕಾರ ನಿರ್ಧರಿಸಿರುವುದು (ಪ್ರ.ವಾ., ಫೆ. 17) ಸರಿಯಾಗಿದೆ.
ರಾಜ್ಯದಲ್ಲಿರುವ ಸಾವಿರಾರು ಕೆರೆಗಳು ಹೂಳು ತುಂಬಿ ನಿರುಪಯುಕ್ತವಾಗಿವೆ. ಈ ಕೆರೆಗಳನ್ನು ಬಳಸಿಕೊಂಡು ಸೌರ ವಿದ್ಯುತ್ ಮತ್ತು ಕುಡಿಯುವ ನೀರಿನಂತಹ ಬಹೂಪಯೋಗಿ ಯೋಜನೆಗಳ ಮೂಲಕ ಗ್ರಾಮಗಳ ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬಹುದಾಗಿದೆ. ಹಾಲಿ ಇರುವ ಕೆರೆಗಳ ನೀರು ನಿಲ್ಲುವ ಪ್ರದೇಶದಲ್ಲಿ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡಬಹುದು. ಸೌರ ಫಲಕದ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಿ ಕುಡಿಯುವ ನೀರಿಗೆ ಬಳಸಬಹುದು.
ಹಳ್ಳಿಗಳಲ್ಲಿ ರಾಜಕಾಲುವೆ ನಿರ್ಮಿಸಿ, ಹರಿದು ಬರುವ ಮಳೆ ನೀರನ್ನು ಕೆರೆಯಲ್ಲಿ ಸಂಗ್ರಹಿಸಿ, ಕೆರೆನೀರು ಆವಿಯಾಗದಂತೆ ಸಂರಕ್ಷಿಸಬಹುದು. ಇದರಿಂದ ಕೃಷಿಗೆ, ದನ ಕರುಗಳಿಗೆ ನೀರು ದೊರೆಯುತ್ತದೆ (ಕೆರೆಗಳಿಂದ ಕೋಟ್ಯಂತರ ಲೀಟರ್ ನೀರು ಆವಿಯಾಗಿ ನಷ್ಟವಾಗುತ್ತಿದೆ). ಕೆರೆಗಳಲ್ಲಿ ಮೀನು ಸಾಕಣೆ ಮಾಡಿ ಲಾಭ ಗಳಿಸಬಹುದು. ಕೆರೆಗಳ ಸುತ್ತಲೂ ಮರ ಬೆಳೆಸಿ, ಈ ಜೀವಂತ ಬೇಲಿಗಳ ಮೂಲಕ ಕೆರೆ ನೀರು ಆವಿಯಾಗದಂತೆ ಸಂರಕ್ಷಿಸಬಹುದು.
-ಡಾ. ಎಚ್.ಆರ್.ಪ್ರಕಾಶ್, ಮಂಡ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.