ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಶಾಲೆಯಲ್ಲಿ ನಿವೃತ್ತರಾದ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು, ಸಂಘ ಸಂಸ್ಥೆಗಳು, ಹಳೆಯ ವಿದ್ಯಾರ್ಥಿಗಳು ಸೇರಿ ಭರ್ಜರಿ ಉಡುಗೊರೆಗಳು, ಲಕ್ಷಾಂತರ ರೂಪಾಯಿ ಕಾಣಿಕೆಯೊಂದಿಗೆ ಊರಿನಲ್ಲಿ ಭವ್ಯ ಮೆರವಣಿಗೆ ಮಾಡಿ, ಬಹಳ ಭಾವನಾತ್ಮಕವಾಗಿ ಬೀಳ್ಕೊಟ್ಟಿದ್ದಾರೆ. ಇದನ್ನು ಮೂರು–ನಾಲ್ಕು ಬಾರಿ ಓದಿದೆ. ಕಣ್ಣಾಲಿಗಳುಸಂತೋಷದಿಂದ ತೇವಗೊಂಡವು.
ತನ್ನ ಜೀವಿತಾವಧಿಯಲ್ಲಿ ಈ ಶಿಕ್ಷಕ ಎಷ್ಟು ಮಂದಿ ವಿದ್ಯಾರ್ಥಿಗಳ ಸುಂದರ ಭವಿಷ್ಯವನ್ನು ರೂಪಿಸಿದ್ದಾರೆ ಎಂಬುದನ್ನು ಇದರಿಂದ ಕಲ್ಪಿಸಿಕೊಳ್ಳಬಹುದು. ಶಿಕ್ಷಕ ವೃತ್ತಿ ಎನ್ನುವುದು ಎಂತಹ ಅಮೂಲ್ಯ ಸೇವೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಇಂತಹ ಶಿಕ್ಷಕರು ಲಕ್ಷಕ್ಕೆ ಒಬ್ಬರು, ಇಬ್ಬರು ಇರಬಹುದು. ಈಗಂತೂ ಗುರು– ಶಿಷ್ಯರ ನಡುವೆ ಅನ್ಯೋನ್ಯ ಸಂಬಂಧ ಇಲ್ಲವೇ ಇಲ್ಲವೆಂಬಂತೆ ಆಗಿದೆ. ವಿದ್ಯಾರ್ಥಿಗಳಿಗೆ ಬರೀ ಅಂಕ ಗಳಿಕೆಯ ತವಕ, ಶಿಕ್ಷಕರಿಗೆ ಪಾಠ ಮಾಡುವುದನ್ನು ಬಿಟ್ಟು ಸಂಘ, ವೇತನ, ಚೀಟಿ, ಸ್ಕೀಮು, ರಾಜಕೀಯದ ಚಿಂತೆ. ಇದರ ಮಧ್ಯೆ ಸರ್ಕಾರಿ ಶಾಲೆಗಳ ಬಗ್ಗೆ ಆಳುವವರ ನಿರ್ಲಕ್ಷ್ಯ. ಇಂತಹ ಪರಿಸ್ಥಿತಿಯಲ್ಲಿ ಗುರು–ಶಿಷ್ಯರ ನಡುವೆ ಭಾವನಾತ್ಮಕ ಸಂಬಂಧವನ್ನು ನಿರೀಕ್ಷಿಸಬಹುದೇ?
-ವಿ.ತಿಪ್ಪೇಸ್ವಾಮಿ, ಹಿರಿಯೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.