ವೈದ್ಯರ ಮೇಲೆ ಹೆಚ್ಚಾಗಿರುವ ಒತ್ತಡದ ಕುರಿತ ಚರ್ಚೆ ಈಗ ಮುನ್ನೆಲೆಗೆ ಬಂದಿದೆ. ವೈದ್ಯರ ಮೇಲೆ ಒತ್ತಡವಿರುತ್ತದೆ ಎನ್ನುವುದೇನೋ ನಿಜ. ಈ ಒತ್ತಡವು ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಹೋಗಬೇಕು ಎಂದು ವಿದ್ಯಾರ್ಥಿ ಅಥವಾ ಅವರ ಪೋಷಕರು ಅಂದುಕೊಂಡ ದಿನದಿಂದಲೇ ಪ್ರಾರಂಭವಾಗುತ್ತದೆ! ಆಗಿನಿಂದಲೇ ಅವರಿಗೆ ಸಾಮಾನ್ಯ ಬಾಲ್ಯ ಕಳೆದುಹೋಗುತ್ತದೆ. ಮುಂದಿನ ವಿದ್ಯಾರ್ಥಿ ಜೀವನದಲ್ಲಿ ವೈದ್ಯಕೀಯ ಓದುವ ಗುರಿ ಹೊಂದಿರುವವರು ಮಾತ್ರ ಅವರಿಗೆ ಸ್ನೇಹಿತರಾಗಬಲ್ಲರು. ಹತ್ತು ವರ್ಷಗಳ ಒತ್ತಡದ ಓದು ಮತ್ತು ವೃತ್ತಿಯ ನಡುವೆ ಹೆಚ್ಚಿನವರು ಜನಸಾಮಾನ್ಯರೊಡನೆ ವೈದ್ಯಕೀಯಕ್ಕೆ ಹೊರತಾದ ಸ್ನೇಹಸಂಬಂಧಗಳ ಸಾಧ್ಯತೆಗಳನ್ನು ಮರೆತಿರುತ್ತಾರೆ. ಜನಸಾಮಾನ್ಯರು ಕೂಡ ವೈದ್ಯರನ್ನು ಹೆಸರಿನಿಂದ ಸಂಬೋಧಿಸುವ ದಾರ್ಷ್ಟ್ಯ (ಆತ್ಮೀಯತೆ?) ತೋರಿಸುವುದಿಲ್ಲ! ಮತ್ತು ಅವರಿಂದ ಕಂಡಲ್ಲೆಲ್ಲಾ ಸಲಹೆಗಳನ್ನು ನಿರೀಕ್ಷಿಸುತ್ತಾರೆ. ಕೆಲವು ವೈದ್ಯರು ತಾವು ಸಮಾಜದ ವಿಶಿಷ್ಟವಾದ ಮೇಲ್ವರ್ಗದವರು ಎಂದು ತಮ್ಮನ್ನೇ ಮೇಲಕ್ಕೇರಿಸಿಕೊಂಡಿರುತ್ತಾರೆ.
ಇಷ್ಟಾಗಿಯೂ ನಮ್ಮಲ್ಲಿ ಹೆಚ್ಚಿನ ವೈದ್ಯರು ಸಹೃದಯರು. ಅವರ ವೃತ್ತಿ ಎಷ್ಟೇ ಅಮೂಲ್ಯವಾಗಿದ್ದರೂ ಮನುಷ್ಯ ಸಹಜವಾದ ತಪ್ಪುಗಳನ್ನು ಅವರು ಮಾಡಲೇಬಾರದು ಎಂದು ನೀರೀಕ್ಷಿಸುವಂತಿಲ್ಲ ಎನ್ನುವ ಅರಿವು ನಮ್ಮೆಲ್ಲರಿಗೆ ಇರಲೇಬೇಕು.
-ನಡಹಳ್ಳಿ ವಸಂತ್,ಶಿವಮೊಗ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.