ಭಾರತದಲ್ಲಿ ಮದ್ಯಸೇವನೆಯು ಕೇವಲ 7 ವರ್ಷಗಳಲ್ಲಿ (2010-2017) ಶೇ 38ರಷ್ಟು ಹೆಚ್ಚಾಗಿರುವುದು (ಪ್ರ.ವಾ., ಮೇ 9) ಆಘಾತಕಾರಿಯಾದ ವಿಷಯ. ಭಾರತ ಈ ನಿಟ್ಟಿನಲ್ಲಿ, ಅಮೆರಿಕದಂತಹ ಮುಂದುವರಿದ ದೇಶಗಳಿಗಿಂತಲೂ ಶರವೇಗದಲ್ಲಿ ಮುನ್ನುಗ್ಗುತ್ತಿರುವುದು ಕಳವಳಕಾರಿ. ಇಂದಿನ ಬಹುಪಾಲು ಸಾಮಾಜಿಕ ಸಮಸ್ಯೆಗಳಿಗೆ ಕುಡಿತವು ಪ್ರತ್ಯಕ್ಷ ಹಾಗೂ ಪರೋಕ್ಷ ಕಾರಣವಾಗಿದೆ. ನಮ್ಮಲ್ಲಿನ ಸಾವಿರಾರು ಹಳ್ಳಿಗಳಿಗೆ ಇಂದಿಗೂ ಕುಡಿಯಲು ಸ್ವಚ್ಛ ನೀರು ಕೊಡಲು ವಿಫಲವಾಗಿರುವ ಸರ್ಕಾರ, ‘ಊರಿಗೊಂದು ಬಾರು’ ಎಂಬ ಧೋರಣೆಯನ್ನು ಹೊಂದಿದಂತಿದೆ.
ಅಕ್ರಮ ಮದ್ಯದ ಅಂಗಡಿಗಳನ್ನಾದರೂ ಮುಚ್ಚಿಸದೆ, ಸಕ್ರಮ ಅಂಗಡಿಗಳಿಗೆ ‘ಟಾರ್ಗೆಟ್’ ನೀಡಿ ಹಳ್ಳಿಗಳನ್ನು ‘ಮದ್ಯ ಗ್ರಾಮ’ಗಳನ್ನಾಗಿ ಮಾಡುತ್ತಿದೆ. ಈ ಮೂಲಕ ದೇಶವನ್ನು ‘ಮದ್ಯ ಭಾರತ’ವನ್ನಾಗಿಸುವಲ್ಲಿ ಯಶಸ್ವಿಯಾಗುತ್ತಿದೆ. ಇದು, ಸರ್ಕಾರಕ್ಕೆ ಸಮಸ್ಯೆಯ ಬಗೆಗೆ ಇರುವ ಸಂವೇದನೆಯ ಕೊರತೆಯನ್ನು ತೋರಿಸುತ್ತದೆ. ಸರ್ಕಾರ ದಿಟ್ಟಕ್ರಮಗಳಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ, ನಾಗರಿಕರು ಎಚ್ಚೆತ್ತುಕೊಳ್ಳದಿದ್ದರೆ ದೇಶ ‘ರೋಗಿಷ್ಟ ಭಾರತ’ ಆಗುವುದರಲ್ಲಿ ಅನುಮಾನವಿಲ್ಲ.
ಆನಂದ ಎನ್.ಎಲ್., ಅಜ್ಜಂಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.