ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 27 ನವೆಂಬರ್ 2025, 19:10 IST
Last Updated 27 ನವೆಂಬರ್ 2025, 19:10 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಮಠಗಳಿಗೆ ರಾಜಕೀಯ ಗೊಡವೆ ಬೇಕೆ?

ಮುಖ್ಯಮಂತ್ರಿ ಹುದ್ದೆಯು ಯಾವುದೇ ನಿರ್ದಿಷ್ಟ ಜಾತಿಯ ಸ್ವತ್ತಲ್ಲ. ಬಲಾಢ್ಯ ಸಮುದಾಯವು ಪಕ್ಷವೊಂದರ ಪರವಾಗಿ ನಿಂತ ತಕ್ಷಣವೇ ಆ ಪಕ್ಷ ಅಧಿಕಾರ ಹಿಡಿಯಲು ಸಾಧ್ಯವಾಗುವುದಿಲ್ಲ. ಈ ಕುರಿತಂತೆ ಮಠಾಧೀಶರ ಮಾತುಗಳು ಅಪ್ರಬುದ್ಧ. ಸಮುದಾಯದ ನಾಯಕನಿಗೆ ರಾಜಕೀಯ ಹುದ್ದೆ ಕೊಡಿಸುವುದು ಮಠಾಧೀಶರ ಕೆಲಸವಲ್ಲ. ಮಠಗಳು ಸಮಾಜದ ಅಂಕುಡೊಂಕು ತಿದ್ದಿ ಸಾಮಾಜಿಕ ಸಾಮರಸ್ಯ ಬೆಸೆಯುವ ಕೆಲಸ ಮಾಡಬೇಕು. ಜೊತೆಗೆ, ರಾಜಕಾರಣದಿಂದ ಅಂತರ ಕಾಪಾಡಿಕೊಳ್ಳಬೇಕು. ಸಮಾಜಮುಖಿಯಾದ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ನಾಯಕರ ಸಾಮರ್ಥ್ಯ, ಶ್ರಮ, ದಕ್ಷತೆ, ನಿಷ್ಠೆಯನ್ನು ಶಾಸಕರು ಮತ್ತು ಆಯಾ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಸ್ವಾಮೀಜಿಗಳಿಗೆ ರಾಜಕೀಯದ ಉಸಾಬರಿ ಶೋಭೆ ತರುವುದಿಲ್ಲ.

ADVERTISEMENT

ಆರ್. ಕುಮಾರ್, ಬೆಂಗಳೂರು

ಅಂಚೆ ಕಚೇರಿ: ಠೇವಣಿಗಳಿಗೆ ಭದ್ರತೆ ಬೇಕು

ಮೈಸೂರು ಜಿಲ್ಲೆಯ ಸರಗೂರು ಪಟ್ಟಣದ ಅಂಚೆ ಕಚೇರಿಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಕೋಟ್ಯಂತರ ರೂಪಾಯಿ ದುರುಪಯೋಗವಾಗಿದೆ. ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ. ನ್ಯಾಯಯುತವಾಗಿ ತನಿಖೆ ನಡೆದರೆ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಬಹುದು. ಆದರೆ, ಠೇವಣಿ ಹಣ ಗ್ರಾಹಕರ ಕೈ ಸೇರುವುದು ಯಾವಾಗ? ಈ ಪ್ರಕರಣದಲ್ಲಿ ಮೇಲಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆ ಇದೆ. ಇಂದಿಗೂ ಗ್ರಾಮೀಣರಲ್ಲಿ ಅಂಚೆ ಇಲಾಖೆಯ ಮೇಲೆ ನಂಬಿಕೆ ಮತ್ತು ಭರವಸೆ ಹೆಚ್ಚಿದೆ. ಕಡುಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು ಕಷ್ಟಪಟ್ಟು ದುಡಿದ ಹಣವನ್ನು ಅಂಚೆ ಕಚೇರಿಯಲ್ಲಿ ಇಡುತ್ತಾರೆ. ಅದರ ದುರುಪಯೋಗ ಆಗದಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಹೊಣೆ.

ಬೂಕನಕೆರೆ ವಿಜೇಂದ್ರ, ಮೈಸೂರು‌

ವಿಧಾನಸಭೆ ವಿಸರ್ಜನೆ ಹುಡುಗಾಟವಲ್ಲ

‘ನಾಯಕತ್ವದ ಗೊಂದಲ ಬಗೆಹರಿಯಬೇಕಾದರೆ ವಿಧಾನಸಭೆ ವಿಸರ್ಜಿಸಿ, ಡಿ.ಕೆ. ಶಿವಕುಮಾರ್ ನೇತೃತ್ವದಲ್ಲೇ ಚುನಾವಣೆ ಎದುರಿಸೋಣ’ ಎಂದು ಶಾಸಕ ಕೆ.ಎನ್. ರಾಜಣ್ಣ ಸಲಹೆ ನೀಡಿದ್ದಾರೆ. ವಿಧಾನಸಭೆಯ ವಿಸರ್ಜನೆ ಎಂದರೆ ಹುಡುಗಾಟವೇ? ಮತ್ತೆ ಚುನಾವಣೆ ನಡೆದರೆ ಜನರ ತೆರಿಗೆ ಹಣದ ಅಪವ್ಯಯವಾಗುತ್ತದೆ. ಕಾಂಗ್ರೆಸ್‌ ಪಕ್ಷದಲ್ಲಿ ಸಮಸ್ಯೆಗಳಿದ್ದರೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ವಿಸರ್ಜನೆ ಎನ್ನುವುದು ಸ್ಪಷ್ಟ ಬಹುಮತ ನೀಡಿ ಆರಿಸಿದ ಮತದಾರರಿಗೆ ಮಾಡುವ ಅಪಮಾನವೂ ಹೌದು. ಇಂತಹ ಬುದ್ಧಿಗೇಡಿ ಸಲಹೆ ಅಪ್ರಸ್ತುತ. ಚುನಾವಣೆ ಅನಿವಾರ್ಯ ಎನ್ನುವುದಾದರೆ, ಜನರ ತೆರಿಗೆ ಹಣ ಬಳಸದೆ ಪಕ್ಷವೇ ಚುನಾವಣಾ ಖರ್ಚುಗಳನ್ನೂ ಭರಿಸಲಿ.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಉನ್ನತ ಶಿಕ್ಷಣ: ಅರಾಜಕತೆಯತ್ತ ನಡಿಗೆ

ರಾಜ್ಯದಲ್ಲಿ ಹಣ ಪಡೆದು ನಕಲಿ ಪದವಿ ಪ್ರಮಾಣಪತ್ರ ನೀಡುವ ದೊಡ್ಡ ಜಾಲ ಸಕ್ರಿಯವಾಗಿದೆ. ಹಣ ಇದ್ದವರಿಗೆ ಶಿಕ್ಷಣ ಇಲ್ಲದಿದ್ದರೂ ಪದವಿ ಪ್ರಮಾಣಪತ್ರಗಳು ಸುಲಭವಾಗಿ ಸಿಗುವುದು ವ್ಯವಸ್ಥೆಯ ವ್ಯಂಗ್ಯವೇ ಸರಿ. ಕೆಳ ಮತ್ತು ಮಧ್ಯಮವರ್ಗದ ವಿದ್ಯಾರ್ಥಿಗಳು ಕಷ್ಟಪಟ್ಟು ಉನ್ನತ ಶಿಕ್ಷಣದ ಪದವಿ ಪಡೆದರೂ ಉದ್ಯೋಗಾವಕಾಶ ಇಲ್ಲದೆ ಅಲೆದಾಡುವುದು ತಪ್ಪಿಲ್ಲ.

ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಸಂವಿಧಾನ ಹೇಳುತ್ತದೆ. ಆದರೆ, ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಹಣ ಕೊಟ್ಟು ಪದವಿ ಪಡೆಯುವ ವರ್ಗ ಹಾಗೂ ಕಷ್ಟ
ಪಟ್ಟು ಪದವಿ ಪಡೆದುಕೊಳ್ಳುವ ವರ್ಗವೂ ಇರುವಾಗ ಸಮಾನರೆಂಬ ಆಶಯಕ್ಕೆ ಅರ್ಥವಾದರೂ ಎಲ್ಲಿದೆ? ನಕಲಿ ಪದವಿ ಪ್ರಮಾಣಪತ್ರ ವಿತರಣೆ ಜಾಲದ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಲಿ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಕೊಳಕನ್ನು ತೊಳೆಯುವ ಕೆಲಸ ತ್ವರಿತವಾಗಿ ಆಗಬೇಕಿದೆ.

ವಿನಾಯಕ್ ಕರಿಬಿಲ್ಕರ್, ಮಾನವಿ

ಇನ್ನೂ ಜಮೆಯಾಗದ ಸಮೀಕ್ಷೆಯ ಹಣ

ರಾಜ್ಯ ಸರ್ಕಾರ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಸ್ವಸಹಾಯ ಸಂಘಗಳ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಅವರ ಸೂಚನೆ ಮೇರೆಗೆ ಈ ಕಾರ್ಯ ನಿರ್ವಹಿಸಲಾಗಿದೆ. ಪ್ರತಿ ಮನೆ ಭೇಟಿಗೆ ₹4 ನೀಡುವುದಾಗಿ ಸರ್ಕಾರ ಪ್ರಕಟಿಸಿತ್ತು. ಸದ್ಯ ಸಮೀಕ್ಷೆದಾರರಿಗೆ ಹಣ ಪಾವತಿಯಾಗುತ್ತಿದೆ. ಸಂಪನ್ಮೂಲ ವ್ಯಕ್ತಿಗಳಿಗೆ ಇನ್ನೂ ಗೌರವಧನ ಪಾವತಿಯಾಗಿಲ್ಲ. ಕಳೆದ ವರ್ಷ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಶಾಲೆ ಬಿಟ್ಟ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಿತ್ತು. ಇದರಲ್ಲಿ ಪಾಲ್ಗೊಂಡ ಸಂಪನ್ಮೂಲ ವ್ಯಕ್ತಿಗಳಿಗೆ ಪ್ರತಿ ಮನೆಗೆ ₹7 ನೀಡುವುದಾಗಿ ತಿಳಿಸಿತ್ತು. ಈ ಗೌರವಧನ ವರ್ಷ ಕಳೆದರೂ ಬಿಡುಗಡೆ ಆಗಿಲ್ಲ. ಸರ್ಕಾರ ಶೀಘ್ರವೇ ಹಣ ಬಿಡುಗಡೆ ಮಾಡಬೇಕಿದೆ.

ಸುಮತಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.