ಕವಿ ಕಾಳಿದಾಸ ಅದೆಲ್ಲಿಗೋ ಹೋದಾಗ ಅದ್ಯಾರೋ ರಾಜ ಅವನಿಗೆ ಒಗಟಿನ ರೂಪದಲ್ಲಿ ಅರ್ಧ ಪದ್ಯವೊಂದನ್ನು ಕೊಟ್ಟು, ಆ ಪದ್ಯವನ್ನು ಪೂರ್ತಿ ಮಾಡಲು ಹೇಳಿದನಂತೆ.
`ಕಮಲೇ ಕಮಲೋತ್ಪತ್ತಿಃ
ಶ್ರೂಯತೇ ನ ತು ದೃಶ್ಯತೇ~
(ಕಮಲದೊಳಗೆ ಕಮಲ ಇದೆಯೆಂದು ಕೇಳಿದ್ದೇನೆ, ಆದರೆ ಕಂಡಿಲ್ಲ).
ಇದು ರಾಜ ಕೊಟ್ಟ ಅರ್ಧ ಪದ್ಯ. ಕಾಳಿದಾಸ ಅದನ್ನು ಈ ರೀತಿ ಪೂರ್ತಿ ಮಾಡಿದನಂತೆ.
`ಬಾಲೇ, ತವ ಮುಖಾಂಭೋಜೇ
ದೃಶ್ಯದ್ವೇ ಇಂದೀವರದ್ವಯಂ~
(ಬಾಲಿಕೆಯೇ, ನಿನ್ನ ಮುಖಕಮಲದಲ್ಲಿ ಕಣ್ಣುಗಳೆಂಬ ಎರಡು ಕಮಲಗಳು ಕಾಣಿಸುತ್ತಿವೆ).
ರಾಜಾ ಖುಷ್ ಹುವಾ. ಆದರೆ ಯಡ್ಯೂರಪ್ಪಾ ಖುಷ್ ನಹೀ ಹುವಾ.
ಕಮಲದೊಳಗಿದ್ದುಕೊಂಡೇ ಸೈಕಲ್ ಸವಾರಿ ಮಾಡಲಾರಂಭಿಸಿರುವ ಬೂಸಿಯ ಅವರದು ಬಿಜೆಪಿಯೊಳಗೊಂದು ಕೆಜೆಪಿಯಾಗಿರುವುದರಿಂದ ಇದೂ ಒಂಥರಾ `ಕಮಲೇ ಕಮಲೋತ್ಪತ್ತಿ~ಯೇ. ಬೇಕಾದರೆ ಇದನ್ನು `ಕಮಲೇ ಕಮಾಲೋತ್ಪತ್ತಿ~ ಎನ್ನಬಹುದು.
ಈ ರೀತಿ `ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ~ ಎಂಬ ಮಾಯಾಜಾಲದಲ್ಲಿ ಸಿಲುಕಿರುವ ಬಿಎಸ್ವೈ ಅವರಾಗಲೀ, `ಬಯಲು ಆಲಯದೊಳಗೊ, ಆಲಯವು ಬಯಲೊಳಗೊ~ ಎಂದು ತಿಳಿಯದಂತಾಗಿರುವ ಕೇಸೀಶ್ವರಪ್ಪ ಅವರಾಗಲೀ ಈಚಿನ ದಿನಗಳಲ್ಲಿ ಸರ್ವಥಾ ಸವಿನಿದ್ದೆ ಮಾಡಿರಲಿಕ್ಕಿಲ್ಲ.
ಶೆಟ್ಟರಂತೂ, `ಜಗದೀಶನನ್ನಾಡಿಸುವಾ ಜಗಳವೇ ನಾಟಕರಂಗ~ ಎಂದು ಸ್ವಯಂರೂಪಾಂತರಿತ ಕನ್ನಡ ಶ್ಲೋಕ ಅಥವಾ ಗೀತೆ ಅಥವಾ ಕನ್ನಡ ಶೋಕಗೀತೆ ಹಾಡುತ್ತ, `ಇನ್ನೂ ಯಾಕ ಬರಲಿಲ್ಲಾವ~ ಎಂದು ಆಪದ್ಬಾಂಧವ-ಅನಾಥ (ಪ್ರಜ್ಞೆ ಹೊಂದಿದವನ) ರಕ್ಷಕ ಭಗವಂತನನ್ನು ನೆನೆಯುತ್ತ ಥೇಟ್ `ಹುಬ್ಬಳ್ಳಿಯಾಂವ~ ಆಗಿ (ಕಮಲದ)ಹೂ ಹಿಡಿದು ನಿಂತಿದ್ದಾರೆ (ಭಗವಂತ ಬಂದರೆ ಏರಿಸಲು).
ಇಂತಹ ವಿಚಿತ್ರ-ವಿಷಯ- ವಿಕಟ-ವಿಕ್ಷಿಪ್ತ-ವಿಭ್ರಾಂತ ಸನ್ನಿವೇಶದಲ್ಲಿ ಡೋಹಣಗೇರಿ ಪಟ್ಟಣದ ರಾಜಕೀಯೇತರ ಸಂಘಟನೆಯೊಂದು ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಕೆಳಗಿನ ಪ್ರಶ್ನೆಗಳಿಗೆ ತಲಾ ನಾಲ್ಕು ಉತ್ತರಗಳಿದ್ದು ಸ್ಪರ್ಧಿಯು ಸರಿ ಉತ್ತರವನ್ನು ಬರೆಯಬೇಕಾಗಿತ್ತು. `ಕರೋಡ್ಪತಿ, ಕೋಟ್ಯಾಧಿಪತಿ~ ಕಾರ್ಯಕ್ರಮಗಳಲ್ಲಿರುವಂತೆ ಯಾವ ಲೈಫ್ಲೈನೂ ಇಲ್ಲಿ ಇರಲಿಲ್ಲ. ಸ್ಪರ್ಧಿಗಳನ್ನು ಲೈನಾಗಿ ಕೂರಿಸಿ, ಲೈನ್ ಹಾಕಿದ ಖಾಲಿಹಾಳೆಯನ್ನು ಅವರ ಕೈಗೆ ಕೊಡಲಾಗಿತ್ತು, ಅಷ್ಟೆ. ಪ್ರಶ್ನೆಗಳೂ ಉತ್ತರಗಳೂ ಹೀಗಿದ್ದವು.
* ಬಿಜೆಪಿಯೊಳಗೆ ಕೆಜೆಪಿ. ಇದು ಸರಿಯೇ? ನ್ಯಾಯಬದ್ಧವೇ?
1. ಹೌದು.
2. ಅಲ್ಲ.
3. ಭಾಗಶಃ ಹೌದು.
4. ನಿಮ್ಮದೇ ಉತ್ತರ ಬರೆಯಿರಿ.
* ಯಡಿಯೂರಪ್ಪನವರ ಮೇಲೆ ಇನ್ನೂ ಶಿಸ್ತುಕ್ರಮ ಕೈಗೊಳ್ಳದಿರುವುದು ಶಿಸ್ತಿನ ಪಕ್ಷ ತಾನೆಂದು ಹೇಳಿಕೊಳ್ಳುತ್ತಿರುವ ಬಿಜೆಪಿಗೆ ಅಂಟಿದ ಕಳಂಕವಲ್ಲವೆ?
1. ಹೌದು.
2. ಅಲ್ಲ.
3. ಭಾಗಶಃ ಹೌದು.
4. ನಿಮ್ಮದೇ ಉತ್ತರ ಬರೆಯಿರಿ.
* ಕೆಜೆಪಿ ಸ್ಥಾಪನೆ ಕುರಿತು ಸಮಾಲೋಚಿಸಲು ಬಿಎಸ್ವೈ ಕರೆದ ಮೀಟಿಂಗ್ಗೆ ಬಿಜೆಪಿಯ ಕೆಲವು ಮಂತ್ರಿಗಳು ಹೋಗಿದ್ದಾಗ್ಯೂ ಅವರ ವಿರುದ್ಧ ಬಿಜೆಪಿಯು ಕ್ರಮ ಕೈಗೊಳ್ಳದಿರುವುದು ತಪ್ಪಲ್ಲವೆ?
1. ಹೌದು.
2. ಅಲ್ಲ.
3. ಭಾಗಶಃ ಹೌದು.
4. ನಿಮ್ಮದೇ ಉತ್ತರ ಬರೆಯಿರಿ.
* ಸೈಕಲ್ಲು ಕಮಲವನ್ನು ಹೊಸಕಿಹಾಕುತ್ತದೆ. ಸೈಕಲ್ ಸವಾರನ ಕಿವಿಗೆ (ಕಮಲದ) ಹೂ ಇಡಲಾಗುತ್ತದೆ. ಸೈಕಲ್ಲು, ಕಮಲ ಎರಡೂ ಮಣ್ಣು ಮುಕ್ಕುತ್ತವೆ.
1. ಮೊದಲನೇ ಹೇಳಿಕೆ ನಿಜವಾಗುತ್ತದೆ.
2. ಎರಡನೇ ಹೇಳಿಕೆ ನಿಜವಾಗುತ್ತದೆ.
3. ಮೂರನೇ ಹೇಳಿಕೆ ನಿಜವಾಗುತ್ತದೆ.
4. ನಿಮ್ಮದೇ ಉತ್ತರ ಬರೆಯಿರಿ.
* ಇಬ್ಬರ ಜಗಳ, ಮೂರನೆಯವನಿಗೆ ಲಾಭ. ಇಬ್ಬರ ಜಗಳ, ಮೂರನೆಯವನಿಗೆ ನಷ್ಟ. ಇಬ್ಬರ ಜಗಳ, ಮೂರನೆಯವನಿಗೂ ನಷ್ಟ (ಹೀಗಾದರೆ ಕಷ್ಟ).
1.ಮೊದಲನೇ ಗಾದೆ ನಿಜವಾಗುತ್ತದೆ.
2. ಎರಡನೇ ಗಾದೆ ನಿಜವಾಗುತ್ತದೆ.
3. ಮೂರನೇ ಗಾದೆ ನಿಜವಾಗುತ್ತದೆ.
4. ನಿಮ್ಮದೇ ಉತ್ತರ ಬರೆಯಿರಿ.
ಈ ಪಂಚ ಪ್ರಶ್ನೆಗಳಿಗೆ ಪಾಂಚ್ ಸೌ ಮಂದಿ ಉತ್ತರಿಸಿದ್ದರು. ಬಹುಮಾನ ಬಂದದ್ದು ಏಕಮೇವಾದ್ವಿತೀಯ ಉತ್ತರಭೂಪನಾದಂಥ ತೆಪರನಿಗೆ. (ಸ್ಪರ್ಧೆಯ ದಿನ `ಫುಲ್~ ಫಾರ್ಮ್ನಲ್ಲಿದ್ದ ತೆಪರನ ಫುಲ್ಫಾರ್ಮ್, ತೆರದೂರು ಪರಪ್ಪ ರವಣಪ್ಪ). ತೆಪರನು ಅವನದೇ ಉತ್ತರ ಬರೆದಿದ್ದ. ವಿಶೇಷವೆಂದರೆ, ಐದೂ ಪ್ರಶ್ನೆಗಳಿಗೂ ಒಂದೇ ಉತ್ತರ ಬರೆದಿದ್ದ! ಅದು ಹೀಗಿತ್ತು.
`ಯಲಕ್ಷನ್ ಬರ್ಲಿ, ಯಲ್ಲ ಗೊತ್ತಾಕ್ಕತಿ~.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.