ADVERTISEMENT

`ರಂಗಮಂಟಪ'ದ ಎರಡು ನಾಟಕ

​ಪ್ರಜಾವಾಣಿ ವಾರ್ತೆ
Published 11 ಜನವರಿ 2013, 19:59 IST
Last Updated 11 ಜನವರಿ 2013, 19:59 IST
`ಅನಭಿಜ್ಞ ಶಾಕುಂತಲ' ನಾಟಕದ ದೃಶ್ಯ
`ಅನಭಿಜ್ಞ ಶಾಕುಂತಲ' ನಾಟಕದ ದೃಶ್ಯ   

ರಂಗಮಂಟಪ ತಂಡ ನಡೆಸುತ್ತಿರುವ ನಾಟಕವರ್ಷ ಉತ್ಸವದಲ್ಲಿ ಶನಿವಾರ ಮತ್ತು ಭಾನುವಾರ ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ. ಮಕ್ಕಳಿಗಾಗಿ ನಾಟಕಗಳನ್ನು ತಯಾರಿಸುವುದರ ಜತೆಗೆ ಬೆಂಗಳೂರಿನಲ್ಲಿ ರಾಷ್ಟ್ರೀಯ ನಾಟಕೋತ್ಸವವನ್ನು ಏರ್ಪಡಿಸುವ ಕನಸನ್ನು ತಂಡ ಇರಿಸಿಕೊಂಡಿದೆ.

ರಂಗಮಂಟಪ ನಾಟಕ ಮಾತ್ರವಲ್ಲದೆ ರಂಗಾಭಿರುಚಿ ಬೆಳೆಸುವ ಕಮ್ಮಟಗಳನ್ನು ನಡೆಸುವ ಉದ್ದೇಶವನ್ನೂ ಹೊಂದಿದೆ. ಇಂತಹ ವಿಶಿಷ್ಟ ಕಾರ್ಯಕ್ರಮಗಳಲ್ಲಿ ಒಂದು `ನಾಟಕವರ್ಷ' ಎನ್ನುವ ಹೆಸರಿನ ರಂಗ ಸಂಭ್ರಮ. ಈ ರಂಗೋತ್ಸವವನ್ನು ಪ್ರತಿವರ್ಷವೂ ನಡೆಸುವ ಬದ್ಧತೆಯಿಂದ ಆರಂಭಿಸಲಾಗಿದೆ ಎಂಬುದು ತಂಡದ ಹೇಳಿಕೆ. ಈ ವರ್ಷದ ಉತ್ಸವದ ಅನುಭವವನ್ನು ಆಧರಿಸಿ ರಂಗಮಂಟಪದ ನಾಟಕಗಳಲ್ಲದೇ ವರ್ಷದ ಉತ್ತಮ ನಾಟಕಗಳನ್ನು ಪ್ರಾಯೋಜಿಸುವ ಆಸೆಯನ್ನು ತಂಡ ಹೊಂದಿದೆ. ರಂಗಭೂಮಿ ಜೀವ ಪಡೆಯುವುದೇ ಇಂತಹ ಚಟುವಟಿಕೆಗಳಿಂದ ಎಂಬ ನಮ್ರ ವಿನಯವೇ ತಂಡದ ಆಶಯ. ಐವತ್ತಕ್ಕೂ ಮಿಗಿಲು ನಟನಟಿಯರ ದಂಡು ರಂಗಮಂಟಪದ ಬಲ.

ಸಮಾಜದಲ್ಲಿನ ಸಂಬಂಧಗಳ ಅರ್ಥವಂತಿಕೆಯನ್ನು ಮನವರಿಕೆ ಮಾಡಿಕೊಡುವ ಕೆಲಸವನ್ನು ಕಲೆಗಳು ಮಾಡಬೇಕು ಎನ್ನುವ ಆಶಯವನ್ನಿರಿಸಿಕೊಂಡ ಹಲವು ಕನಸುಗಾರ ಸಮೂಹದಿಂದ ರೂಪುಗೊಂಡಿದ್ದು ರಂಗಮಂಟಪ ತಂಡ. ಬದುಕನ್ನು ತೀವ್ರವಾಗಿ ಪ್ರೀತಿಸುವುದನ್ನು ಕಲಿಸುವುದು ರಂಗಭೂಮಿಯೇ ಎಂಬುದು ಇವರ ಅನುಭವ ನುಡಿ. ಇಂಥದ್ದೊಂದು ಸದಾಶಯವನ್ನು ಇರಿಸಿಕೊಂಡು ಮೂರು ವರ್ಷಗಳ ಹಿಂದೆ ಆಸ್ತಿತ್ವಕ್ಕೆ ಬಂದ ತಂಡವೇ ರಂಗಮಂಟಪ.

ನಮ್ಮ ಸುತ್ತಲಿನ ಸಮುದಾಯಗಳು ಮಾನವೀಯತೆಯ ಸ್ಪರ್ಶದಿಂದ ದೂರ ಸರಿಯುತ್ತಿರುವ ಆತಂಕವನ್ನು ಅನುಭವಿಸುತ್ತಿದೆ. ವರ್ತಮಾನವನ್ನು ಮುಖಾಮುಖಿಯಾಗಲು ರಂಗಮಂಟಪ ಎಚ್.ನಾಗವೇಣಿ ಅವರ ಕಾದಂಬರಿಯನ್ನು `ಗಾಂಧಿ ಬಂದ' ನಾಟಕವಾಗಿಸುವ ಮೂಲಕ ಜನರ ಅಂತರಂಗದಲ್ಲಿ ಸಂವಾದವೊಂದನ್ನು ಹುಟ್ಟು ಹಾಕಲು ಸಜ್ಜಾಗಿದೆ. ಈ ಹಿಂದೆ ಪ್ರದರ್ಶನಗೊಂಡಿದ್ದ `ಗಾಂಧಿ ಬಂದ' ನಾಟಕ ನಾಡಿನ ಒಳ ಹೊರಗೂ ಪ್ರಸಿದ್ಧಿಯನ್ನು ಪಡೆದಿತ್ತು. ರಂಗಮಂಟಪದ ಗೆಳೆಯರು ರಂಗಗೀತೆಗಳ ತಂಡವನ್ನು ರೂಪಿಸಿಕೊಂಡಿದ್ದು ಇದುವರೆಗೂ ಹತ್ತು ಹಲವು ರಂಗ ಸಂಜೆಗಳನ್ನು ನಡೆಸಿದ ಅಗ್ಗಳಿಕೆ ಹೊಂದಿದೆ.

ಮೊದಲ ವರ್ಷದ ಉತ್ಸವ ರಂಗಶಂಕರದಲ್ಲಿ ನಡೆಯಲಿದೆ. ಜನವರಿ 12, ಸಂಜೆ 7.30ಕ್ಕೆ ಪ್ರಸಂಗ ತಂಡದಿಂದ `ಅನಭಿಜ್ಞ ಶಾಕುಂತಲ' ಹಾಗೂ ಜ.13ರಂದು ಮಧ್ಯಾಹ್ನ 3.30 ಹಾಗೂ ಸಂಜೆ 7.30ಕ್ಕೆ ರಂಗಮಂಟಪದ `ಗಾಂಧಿ ಬಂದ' ನಾಟಕಗಳು ಪ್ರದರ್ಶನಗೊಳ್ಳಲಿವೆ.  ್ಢ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.