ADVERTISEMENT

‘ಮೇ ಮಾಸದಾಗ ಕಾವ ಇಳಿಸೋಣ...’

ಡಿ.ಬಿ, ನಾಗರಾಜ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST

ವಿಜಯಪುರ: ‘ರೊಕ್ಕ ಕೊಟ್ಟು ಜನರನ್ನು ಸೇರಿಸೋರು ನಾವಲ್ಲ. ಒಂದ್ ಮಾತ್ ಹೇಳಿದ್ದಕ್ಕ ಇಷ್ಟೊಂದ್ ಮಂದಿ ನೆರೆದಾರಾ... ನಮ್ದು ಶಕ್ತಿ ಪ್ರದರ್ಶನವಲ್ಲ; ಭಕ್ತಿ ಪ್ರದರ್ಶನ ಎಂಬುದು ನೆನಪಿರಲಿ...

ಇದುವರೆಗೂ ಎಲ್ಲವನ್ನೂ ಸಹಿಸಿಕೊಂಡೀವಿ. ಯಾಕಂದ್ರಾ ನೀವೇನು ಪಾಕಿಸ್ತಾನದವ್ರಲ್ಲ. ನಮ್ಮ ಶಿಷ್ಯಂದಿರೇ ಇದ್ದೀರಿ. ನಾಳೆಗಾದ್ರೂ ಬದಲಾಗ್ತೀರಿ ಅಂತಾ ಕಾದೀವಿ. ನೀವೂ ಬದಲಾಗದ ಹಿಂಗ ಮುಂದುವರೆದ್ರಾ ನಮ್ದು ಏನು ಎಂಬೋದನ್ನು ತೋರುಸ್ತೀವಿ. ನಾವು ಅಖಾಡಕ್ಕಿಳಿದ್ವೀ ಅಂದ್ರೆ ನಿಮ್ಗ ಬಲು ಕಷ್ಟ ಆಗುತ್ತೆ...’

ಈ ಖಡಕ್‌ ನುಡಿಗಳು ರಾಜಕಾರಣಿಯ ಬಾಯಿಯಿಂದ ಬಂದವುಗಳಲ್ಲ. ಲಿಂಗಾಯತ ಚಳವಳಿಯ ಮುಂಚೂಣಿ ನಾಯಕ ಎಂ.ಬಿ. ಪಾಟೀಲರಿಗೆ ಬಬಲೇಶ್ವರದ ಬೃಹನ್ಮಠದ ಆವರಣದಲ್ಲಿ ಈಚೆಗೆ ನಡೆದ ವೀರಶೈವ ಲಿಂಗಾಯತ ಸಮನ್ವಯ ಜನಜಾಗೃತಿ ಸಮಾವೇಶದಲ್ಲಿ, ವೀರಶೈವ ಲಿಂಗಾಯತ ಪರವಿರುವ ಶಹಾಪುರದ ಸೂಗೂರೇಶ್ವರ ಸ್ವಾಮೀಜಿ ನೀಡಿದ ಎಚ್ಚರಿಕೆ.

ADVERTISEMENT

‘ನಿಮಗೆ ಹಣ, ತೋಳ್ಬಲ, ಕುರ್ಚಿ, ಅಧಿಕಾರದ ಕಾವು ಹೆಚ್ಚಾಗೈತಿ. ಇನ್ಮುಂದೆ ಬಿಸಿಲ ಝಳವೂ ವಿಪರೀತ ಆಗತೈತಿ. ಮುಂಬರುವ ಮೇ ಮಾಸದಾಗ ಹೆಂಗ ಸಹಜವಾಗಿ ಕಾವು ಇಳೀತೈತಿ ಹಂಗ, ನಿಮ್ಮ ಕಾವನ್ನು ಇಳಿಸಲು ನಾವುಸಿದ್ಧರಾಗಿದ್ದೇವೆ’ ಎಂದು ಸೂಗೂರೇಶ್ವರ ಸ್ವಾಮೀಜಿ ವೇದಿಕೆಯಲ್ಲಿ ಗುಡುಗುತ್ತಿದ್ದಂತೆ, ಮುಂಭಾಗದಲ್ಲಿದ್ದ ಭಕ್ತ ಸಮೂಹ ಹರ್ಷೋದ್ಗಾರ ಮಾಡಿತು.

ಅದೇ ಸಂದರ್ಭದಲ್ಲಿ ಅನತಿ ದೂರದಲ್ಲೇ ಸಚಿವ ಎಂ.ಬಿ.ಪಾಟೀಲ ಸಾರಥ್ಯದಲ್ಲಿ ನಡೆದಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಪಟಾಕಿ ಸಿಡಿತದ ಶಬ್ದ ವೀರಶೈವ ಲಿಂಗಾಯತರ ಸಭೆಯವರೆಗೂ ಕೇಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.