ADVERTISEMENT

ವಕೀಲರಿಂದಲೇ ವಕೀಲರಿಗೆ ಪಂಗನಾಮ..!

ಬಿ.ಎಸ್.ಷಣ್ಮುಖಪ್ಪ
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST

ಬೆಂಗಳೂರು ವಕೀಲರ ಸಂಘ ಎಂದರೆ 22 ಸಾವಿರ ಸದಸ್ಯರಿರುವ ಏಷ್ಯಾದಲ್ಲೇ ದೊಡ್ಡ ವಕೀಲರ ಸಂಘ ಎನ್ನುವ ಅಗ್ಗಳಿಕೆ ಹೊಂದಿದೆ. ಇದರ ವ್ಯಾಪ್ತಿಗೆ ಸಿಟಿ ಸಿವಿಲ್‌ ಕೋರ್ಟ್, ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮತ್ತು ಮೇಯೊ ಹಾಲ್‌ ಕೋರ್ಟ್‌ಗಳೂ ಒಳಪಡುತ್ತವೆ. ಇಂತಹ ದೊಡ್ಡ ಸಂಘಕ್ಕೆ ಕಳೆದ ಭಾನುವಾರ (ಜ.22) ಪದಾಧಿಕಾರಿಗಳ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳೂ ಭರಾಟೆಯ ಪ್ರಚಾರ ನಡೆಸಿದರು. ‘ಚುನಾವಣೆ ಇದೆ ಎನ್ನುವುದಕ್ಕೂ ಹತ್ತು ದಿನಗಳ ಮುಂಚೆಯೇ ಹಣದ ಆಮಿಷವೂ ಸೇರಿದಂತೆ ಭರಪೂರ ಬಾಡೂಟ, ಅರಮನೆ ಮೈದಾನದ ಆವರಣದಲ್ಲಿ ಗುಂಡು–ತುಂಡಿನ ಪಾರ್ಟಿಗಳು, ಆಯ್ದ ವ್ಯಕ್ತಿಗಳಿಗೆ ಪ್ರವಾಸ,  ಪುರುಷರಿಗೆ ಬೆಳ್ಳಿ ನಾಣ್ಯ ಹಾಗೂ ಮಹಿಳಾ ವಕೀಲರಿಗೆ ಬೆಳ್ಳಿ ಕುಂಕುಮದ ಬಟ್ಟಲು ಹಾಗೂ ವಾಚ್‌ಗಳನ್ನೂ ನೀಡಲಾಗಿದೆ. ಮತ್ತೂ ಕೆಲವು ಮಹಿಳಾ ವಕೀಲರಿಗೆ ಒಂದು– ಒಂದೂವರೆ ಸಾವಿರ ರೂಪಾಯಿ ಮೌಲ್ಯದ ಸೀರೆಗಳನ್ನು ಗಿಫ್ಟ್‌ ಪ್ಯಾಕ್‌ಗಳಲ್ಲಿ ಕೊಡಲಾಗಿದೆ’ ಎಂಬ ಆರೋಪ ಕೇಳಿಬಂದಿತ್ತು.

ಆಮಿಷ ಪಡೆದವರೆಲ್ಲಾ ಚುನಾವಣೆಯವರೆಗೂ ತಾವು ಪಡೆದುಕೊಂಡಿದ್ದ ವಸ್ತುಗಳ ಬಗ್ಗೆ ಹೆಚ್ಚು ಕಣ್ಣಾಡಿಸಿದಂತಿರಲಿಲ್ಲವೇನೋ. ಆದರೆ, ಚುನಾವಣೆ ಫಲಿತಾಂಶ ಬಂದ ಮೇಲೆ ಕೆಲವು ಮಹಿಳಾ ವಕೀಲರು ಬೆಳ್ಳಿ ಕುಂಕುಮದ ಬಟ್ಟಲುಗಳನ್ನು ಸರಿಯಾಗಿ ಗಮನಿಸಿದಾಗ ಮೋಸ ಹೋಗಿದ್ದು ಪತ್ತೆಯಾಗಿದೆ.

ADVERTISEMENT

‘ನಮಗೆ ಕೊಟ್ಟಿರುವ ಬೆಳ್ಳಿ ಬಟ್ಟಲುಗಳಿಗೆ ವೈಟ್‌ ಮೆಟಲ್‌ ಪೇಂಟ್‌ ಹಚ್ಚಿ ಕೊಡಲಾಗಿದೆ’ ಎಂದು ಅವರೆಲ್ಲ ಈಗ ಕೋರ್ಟ್‌ ಕಾರಿಡಾರು, ಆವರಣಗಳಲ್ಲಿ ಗೊಣಗಿಕೊಂಡು ಅಡ್ಡಾಡುತ್ತಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.