ಬಾಲಿವುಡ್ನ ಜಾಲಿ ನಿರ್ದೇಶಕ ಕರಣ್ ಜೋಹರ್ಗೆ ಸಮಯ ಸರಿಯಿದ್ದಂತಿಲ್ಲ. ಇಷ್ಟು ಕಾಲ ವಿವಾದಗಳಿಂದ ದೂರವೇ ಉಳಿದಿದ್ದ ಕರಣ್ ಈಗ ಇದ್ದಕ್ಕಿಂದ್ದಂತೆ ಒಂದಾದ ಮೇಲೆ ಒಂದರಂತೆ ವಿವಾದ, ಮೂದಲಿಕೆಗಳನ್ನು ಎದುರಿಸುತ್ತಿದ್ದಾರೆ.
ಮೊದಲಿಗೆ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ಬಿಡುಗಡೆ ವಿವಾದ, ಆ ಬಳಿಕ ಅಜಯ್ ದೇವಗನ್ ಜೊತೆಗೆ ವಿರಸ, ಕಾಫಿ ವಿತ್ ಕರಣ್ ಬಗ್ಗೆ ಸೋನಮ್ ಕಪೂರ್ ಹೇಳಿಕೆ ನಂತರ ಇದೀಗ ನಾಯಕ ನಟ ಗೋವಿಂದ್ ಕರಣ್ ಬಗ್ಗೆ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ.
‘ಎಲ್ಲರ ಮುಂದೆ ಕರುಣಾಮಯಿಯಂತೆ ಪೋಸು ನೀಡುವ ಕರಣ್ ಅತ್ಯಂತ ಅಪಾಯಕಾರಿ ಮನುಷ್ಯ’ ಎಂದು ಗೋವಿಂದ ಖುಲ್ಲಂ ಖುಲ್ಲಾ ಹೇಳಿಕೆ ನೀಡಿದ್ದಾರೆ. ಆನ್ಲೈನ್ ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.
‘ನಿನ್ನೆ ಮೊನ್ನೆ ಚಿತ್ರರಂಗಕ್ಕೆ ಬಂದವರನ್ನೆಲ್ಲಾ ತನ್ನ ಶೋಗೆ ಆಹ್ವಾನಿಸುವ ಕರಣ್ ಒಮ್ಮೆಯೂ ನನಗೆ ಕರೆ ಮಾಡಿಲ್ಲ. ಇಷ್ಟೆ ಅಲ್ಲದೆ ನನ್ನ ಚಿತ್ರ ಬಿಡುಗಡೆಯಾಗುವ ಮುಂದಿನ ವಾರವೇ ತನ್ನ ನಿರ್ಮಾಣದ ವರುಣ್ ಧವನ್ ನಟಿಸಿರುವ ಚಿತ್ರ ಬಿಡುಗಡೆ ಮಾಡುತ್ತಿದ್ದಾನೆ, ಈ ಮೂಲಕ ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರಚಿಸಿದ್ದಾನೆ’ ಎಂಬುದು ಗೋವಿಂದ ಅವರ ದೂರು.
ಸಾಕಷ್ಟು ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಗೋವಿಂದ ಈಗ ‘ಆ ಗಯಾ ಹೀರೊ’ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲು ಯತ್ನಿಸುತ್ತಿದ್ದಾರೆ. ಈ ಚಿತ್ರ ಮಾರ್ಚ್ ಮೂರಕ್ಕೆ ಬಿಡುಗಡೆಯಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.