ADVERTISEMENT

ದೀಪಾವಳಿಗೆ ‘ತಲಪತಿ 62’

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 14:23 IST
Last Updated 23 ಜನವರಿ 2018, 14:23 IST
ದೀಪಾವಳಿಗೆ ‘ತಲಪತಿ 62’
ದೀಪಾವಳಿಗೆ ‘ತಲಪತಿ 62’   

ಹಿಟ್ ಮೇಲೆ ಹಿಟ್ ಚಿತ್ರಗಳನ್ನು ಕೊಟ್ಟವರು ನಿರ್ದೇಶಕ ಮುರುಗದಾಸ್. ವಿಶಿಷ್ಟ ಮ್ಯಾನರಿಸಂ ಜೊತೆಗೆ ಸಾಮಾಜಿಕ ಕಾಳಜಿಯ ಒಂದೆಳೆ ಮೆಸೇಜ್ ಸೇರಿಸುವುದು ತಮಿಳು ಸೂಪರ್‌ಸ್ಟಾರ್ ವಿಜಯ್‌ ವೈಖರಿ. ಇವರಿಬ್ಬರ ಪರಿಶ್ರಮದಿಂದ ತೆರೆ ಕಂಡಿದ್ದ ‘ತುಪಾಕಿ’, ‘ಕತ್ತಿ’ ಸಿನಿಮಾಗಳು ಸೂಪರ್‌ಹಿಟ್ ಆಗಿದ್ದವು.

ಈಗ ‘ತಲಪತಿ 62’ರ ಮೂಲಕ ಈ ಜೋಡಿ ಮತ್ತೊಮ್ಮೆ ಒಂದಾಗಿದೆ. ದೀಪಾವಳಿ ವೇಳೆಗೆ ತೆರೆಕಾಣಲಿರುವ ಈ ಚಿತ್ರದ ಶೂಟಿಂಗ್ ಶುಕ್ರವಾರದಿಂದ (ಜ.19) ಆರಂಭವಾಯಿತು. ವಿಭಿನ್ನ ಕಥಾವಸ್ತು, ‌‌‌ವೇಗದ ನಿರೂಪಣೆ ಮತ್ತು ತಿರುವುಗಳ ಕಾರಣಕ್ಕೆ ‘ತುಪಾಕಿ’, ‘ಕತ್ತಿ’ ಮೆಚ್ಚಿಕೊಂಡಿದ್ದ ಜನರು ‘ತಲಪತಿ’ಯ ಬಗ್ಗೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಉತ್ಸಾಹದಿಂದ ಚರ್ಚಿಸುತ್ತಿದ್ದಾರೆ.

‘ತಲಪತಿ 62’ಗೆ ನಾಯಕಿಯಾಗಿ ಮುದ್ದು ಮೊಗದ ನಟಿ ಕೀರ್ತಿ ಸುರೇಶ್ ಆಯ್ಕೆಯಾಗಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ‘ಮರ್ಸೆಲ್’ ಚಿತ್ರದ ಬೆನ್ನಲ್ಲೆ ಸೆಟ್ಟೇರಿರುವ ಈ ಮಹತ್ವಾಕಾಂಕ್ಷಿ ಚಿತ್ರದ ಬಗ್ಗೆ ಸಹಜವಾಗಿಯೇ ಸಾಕಷ್ಟು ನಿರೀಕ್ಷೆಗಳು ವ್ಯಕ್ತವಾಗಿವೆ.

ADVERTISEMENT

ವಿಜಯ್ ಅಭಿನಯದ ಮುಂದಿನ ಚಿತ್ರಗಳ ಬಗ್ಗೆಯೂ ಅಭಿಮಾನಿಗಳು ಚರ್ಚೆ ಆರಂಭಿಸಿದ್ದಾರೆ. ಕಾರ್ತಿ ಅಭಿನಯದ ‘ತೀರನ್ ಅಧಿಕಾರಂ ಉಂಡ್ರು’ ಚಿತ್ರದ ನಿರ್ದೇಶಕ ವಿನೋದ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ವಿಜಯ್ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ. ಆದರೆ ವಿನೋದ್ ಅಥವಾ ವಿಜಯ್ ಈ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.

‘ತಲಪತಿ’ ಬಿಡುಗಡೆಯಾದ ನಂತರ ಅಟ್ಲಿ ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ವಿಜಯ್‌ ತೊಡಗಿಸಿಕೊಳ್ಳಬೇಕಾಗಿದೆ. ಹೀಗಾಗಿ ವಿಜಯ್– ವಿನೋದ್ ಜೋಡಿಯ ಮೋಡಿಗಾಗಿ ಅಭಿಮಾನಿಗಳು ಸಾಕಷ್ಟು ಅವಧಿ ಕಾಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.