ನಾನು ಹಾಸನದ ಸಂತ ಫಿಲೋಮಿನಾ ಶಾಲೆಯಲ್ಲಿ ಓದಿದ್ದು. ಅಲ್ಲಿ ರಾಧಾಮಣಿ ಟೀಚರ್ ಕನ್ನಡ ಮತ್ತು ಹಿಂದಿ ಬೋಧಿಸುತ್ತಿದ್ದರು. ಅವರು ಹಳಗನ್ನಡದ ಪದ್ಯಗಳನ್ನು ರಸವತ್ತಾಗಿ ಬಣ್ಣಿಸಿ ಅರ್ಥೈಸುತ್ತಿದ್ದರು.
ಅವರ ತರಗತಿಯಲ್ಲಿ ಸಮಯ ಹೋದುದೇ ತಿಳಿಯುತ್ತಿರಲಿಲ್ಲ. ಒಂಬತ್ತನೇ ತರಗತಿಯಲ್ಲಿ ಕವಿ ಸೀತಾರಾಮಯ್ಯನವರ ‘ಮುಗಿಲುಗಳು’ ಪಾಠ ಮಾಡುವಾಗ ಕವಿಯ ಕಲ್ಪನೆಯನ್ನು ಸುಂದರವಾಗಿ ಬಣ್ಣಿಸಿದ್ದರು. ತರಗತಿಯ ಎಲ್ಲ ವಿದ್ಯಾರ್ಥಿನಿಯರಿಗೂ ಮರುದಿನ ಮುಗಿಲುಗಳ ಕುರಿತು ತಮ್ಮದೇ ಕಲ್ಪನೆಯ ಕವಿತೆ ರಚಿಸಿ ತರಲು ಹೇಳಿದರು. ಅಂದು ನಾನು ‘ನಾ ಕಂಡ ಮುಗಿಲು’ ಎಂಬ ಕವಿತೆ ಬರೆದೆ. ಅದುವೇ ನಾ ಬರೆದ ಚೊಚ್ಚಿಲ ಕವಿತೆ ನನ್ನಲ್ಲಿದ್ದ ಕವಿ ಹೃದಯವನ್ನು ತೆರೆಸಿದವರು ಅವರೇ.
ಮೊದಲೇ ಸಾಹಿತ್ಯದಲ್ಲಿ ಆಸಕ್ತಿಯಿದ್ದ ನಾನು ಕವಯಿತ್ರಿಯಾಗಲು ನಾಂದಿಯಾದ, ಸ್ಫೂರ್ತಿಯಾದ ನನ್ನ ನೆಚ್ಚಿನ ಗುರುಗಳನ್ನು ಮರೆಯಲು ಸಾಧ್ಯವೇ ಇಲ್ಲ. ಅಂದು ನಾನು ಬರೆದ ‘ನಾ ಕಂಡ ಮುಗಿಲು’ ನನ್ನ ಕವನ ಸಂಕಲನದಲ್ಲಿ ಅಚ್ಚಾಗಿದ್ದು ಅವರನ್ನೇ ನೆನಪಿಸುತ್ತದೆ, ಇಂದಿಗೂ ಎಂದೆಂದಿಗೂ.
–ರಾಜೇಶ್ವರಿ ಹುಲ್ಲೇನಹಳ್ಳಿ, ಹಾಸನ ಡೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.