ಕೆ. ಎಲ್.ರಾಹುಲ್ ಕ್ರಿಕೆಟ್ ಜೀವನ ಆರಂಭವಾಗಿದ್ದು ಮಂಗಳೂರಿನಲ್ಲಿ. ಆಗ ಅವರಿಗೆ 11 ವರ್ಷ ವಯಸ್ಸು. ಇವರ ತಂದೆ ಲೋಕೇಶ್ ಸುರತ್ಕಲ್ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್. ತಾಯಿ ರಾಜೇಶ್ವರಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್. ಸುನಿಲ್ ಗಾವಸ್ಕರ್ ಅಭಿಮಾನಿಯಾಗಿರುವ ಲೋಕೇಶ್ಗೆ ತಮ್ಮ ಪುತ್ರ ಕೂಡ ಅತ್ಯುತ್ತಮ ಕ್ರಿಕೆಟಿಗನಾಗಬೇಕೆಂಬ ಕನಸು.
ಗಾವಸ್ಕರ್ ಪುತ್ರನ ಹೆಸರು ರಾಹುಲ್ ಎಂದುಕೊಂಡ ಲೋಕೇಶ್, ತಮ್ಮ ಪುತ್ರನಿಗೂ ರಾಹುಲ್ ಎಂದು ಹೆಸರಿಟ್ಟಿದ್ದರಂತೆ. ಆದರೆ ಗಾವಸ್ಕರ್ ಪುತ್ರನ ಹೆಸರು ರೋಹನ್ ಎಂದು ಆಮೇಲೆ ಗೊತ್ತಾಯಿತಂತೆ. ಆದರೇನಂತೆ ರಣಜಿ ಆಟಗಾರ ರಾಹುಲ್ ಅವರನ್ನು ಕ್ರಿಕೆಟ್ ವಲಯ ‘ಜೂನಿಯರ್ ರಾಹುಲ್ ದ್ರಾವಿಡ್’ ಎಂದೇ ಗುರುತಿಸುತ್ತಿದೆ. ಅವರೊಂದಿಗಿನ ಪುಟ್ಟ ಹರಟೆ ಇಲ್ಲಿದೆ...
* ಯಾವ ವಿಷಯಕ್ಕೆ ತುಂಬಾ ಭಯ ಪಡುತ್ತೀರಿ?
ಎಲ್ಲಿ ರಿಲ್ಯಾಕ್ಸ್ ಆಗಿಬಿಡುತ್ತೇನೊ ಎಂಬ ಭಯ. ಏಕೆಂದರೆ ಈ ಸ್ಪರ್ಧಾತ್ಮಕ ಯುಗದಲ್ಲಿ ಬದ್ಧತೆ ಕಾಪಾಡಿಕೊಂಡು ಹೋಗಬೇಕು. ಕೊಂಚ ರಿಲ್ಯಾಕ್ಸ್ ಆಗಿಬಿಟ್ಟರೂ ನಮ್ಮ ಸ್ಥಾನಕ್ಕೆ ಮತ್ತೊಬ್ಬರು ಬಂದುಬಿಡುತ್ತಾರೆ.
* ನೀವು ಮರೆಯಬೇಕೆಂದಿರುವ ಕೆಟ್ಟ ಗಳಿಗೆ?
19 ವರ್ಷದೊಳಗಿನವರ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ಎದುರು ಸೊನ್ನೆ ಸುತ್ತಿದ್ದು. ಅದು ಪದೇಪದೇ ನೆನಪಾಗುತ್ತಿರುತ್ತದೆ. ಇನ್ನು ಮರೆಯುವುದೆಲ್ಲಿ? ನೀವು ಪ್ರಶ್ನೆ ಕೇಳಿದ ಮೇಲೆ ಮತ್ತೊಮ್ಮೆ ನೆನಪಾಯಿತು.
*ನಿಮಗೆ ಬೋರು ಹೊಡೆಸಿರುವ ಪತ್ರಕರ್ತರ ಪ್ರಶ್ನೆ ಯಾವುದು?
ನನ್ನ ಆಟವನ್ನು ದ್ರಾವಿಡ್ ಶೈಲಿಗೆ ಹೋಲಿಸುವುದು, ಪದೇಪದೇ ಇದಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳೋದು.
*ಯಾವ ವ್ಯಕ್ತಿಯಿಂದ ನೀವು ತುಂಬಾ ವಿಷಯ ಕಲಿತಿದ್ದೀರಿ?
ಹಲವು ಮಂದಿಯಿಂದ ಹಲವು ವಿಷಯ ಕಲಿತಿದ್ದೇನೆ. ಎಲ್ಲರಲ್ಲೂ ಒಳ್ಳೆಯ ಹಾಗೂ ಕೆಟ್ಟ ಗುಣಗಳಿರುತ್ತವೆ. ಅದರಲ್ಲಿ ನನಗೆ ಬೇಕಾದ ವಿಷಯಗಳನ್ನು ಮಾತ್ರ ಆರಿಸಿಕೊಳ್ಳುತ್ತೇನೆ ಅಷ್ಟೆ.
*ಯಾರನ್ನು ಭೋಜನಕ್ಕೆ ಆಹ್ವಾನಿಸಲು ಇಷ್ಟಪಡುತ್ತೀರಿ? ಏಕೆ?
ಸಚಿನ್ ತೆಂಡೂಲ್ಕರ್. ಬರುವ ಸಾಧ್ಯತೆ ಕಡಿಮೆ ಅದಕ್ಕೆ!
*ನಿಮ್ಮಲ್ಲಿನ ಒಂದು ಮೂಢನಂಬಿಕೆ?
ಎಡಗಾಲಿಗೆ ಮೊದಲು ಪ್ಯಾಡ್ ಕಟ್ಟುವುದು. ಇದನ್ನು ಮೂಢನಂಬಿಕೆ ಎಂದು ನಾನು ಹೇಳುವುದಿಲ್ಲ. ಬದಲಾಗಿ ರೂಢಿ ಅಷ್ಟೆ.
*ಜೀವಿಸಲು ಇನ್ನು ಕೇವಲ 24 ಗಂಟೆ ಇದೆ ಎಂದಾಗ?
ಆ ಪ್ರತಿ ನಿಮಿಷಗಳನ್ನು ಅಪ್ಪ-ಅಮ್ಮನೊಂದಿಗೆ ಕಳೆಯಲು ಇಷ್ಟಪಡುತ್ತೇನೆ...
*ಕ್ರಿಕೆಟ್ ಶಿಬಿರಗಳಲ್ಲಿ ಚೇಷ್ಟೆ ಮಾಡಿ ಬೈಸಿಕೊಂಡಿದ್ದೀರಾ?
ನಾನು ಹೇಳಲು ಶುರು ಮಾಡಿದರೆ ನಿಮ್ಮ ಮೊಬೈಲ್ ಕರೆನ್ಸಿ ಮುಗಿದು ಹೋಗಬಹುದು. ಈ ಹರಟೆಯ ಸಂದರ್ಶನ ನಿಮ್ಮ ಪತ್ರಿಕೆಯ ಜಾಗವನ್ನು ಹೆಚ್ಚು ಆಕ್ರಮಿಸಿಕೊಳ್ಳಬಹುದು. ಬೈಸಿಕೊಂಡಿದ್ದಕ್ಕೆ ಲೆಕ್ಕವೇ ಇಲ್ಲ ಬಿಡಿ. ದಿನಕ್ಕೆ ಎರಡು ಮೂರು ಬಾರಿ ಬೈಗುಳ ಗ್ಯಾರಂಟಿ. ಮೊದಲೇ ನಾನು ಲಾಸ್ಟ್ ಬೆಂಚ್ ಸ್ಟೂಡೆಂಟ್.
*ಕ್ರೀಡಾಪಟುವನ್ನೇ ಮದುವೆಯಾಗಬೇಕು ಎಂದುಕೊಂಡಿದ್ದೀರಾ?
ಅಯ್ಯೋ ನನಗೆ ಇನ್ನೂ 21 ವರ್ಷ. ಮದುವೆ ವಿಚಾರದ ಬಗ್ಗೆಯೇ ಯೋಚಿಸಿಲ್ಲ. ಇನ್ನೆಲ್ಲಿ ಕ್ರೀಡಾಪಟುವನ್ನೇ ಮದುವೆಯಾಗುವುದು? ನೋಡೋಣ ಮುಂದೆ ಏನಾಗುತ್ತೆ...
*ನಿಮ್ಮನ್ನು ಯಾರಾದರೂ ಪ್ರಪೋಸ್ ಮಾಡಿದ್ದಾರಾ?
ಯಾರೂ ಮಾಡಿಲ್ಲ. ಏಕೆ ಮಾಡಿಲ್ಲ ಎಂದು ನನಗೆ ಗೊತ್ತಿಲ್ಲ.
*ಯಶಸ್ಸು ಸಿಕ್ಕಾಗ ಕ್ರಿಕೆಟಿಗರಿಗೆ ಕೊಂಬು ಬರುತ್ತದೆ ಅಂತಾರೆ. ನಿಜನಾ?
ಅದು ಪತ್ರಕರ್ತರ ತಪ್ಪು ಗ್ರಹಿಕೆ. ಯಶಸ್ಸು ಸಿಕ್ಕಾಗ ನಾವು ಮತ್ತೊಂದು ವಿಷಯಕ್ಕೆ ಕಮಿಟ್ ಆಗಿರುತ್ತೇವೆ. ಆ ಸಮಯದಲ್ಲಿ ಯಾರಾದರೂ ಫೋನ್ ಮಾಡಿದರೆ ರಿಸೀವ್ ಮಾಡಿರುವುದಿಲ್ಲ. ಅದನ್ನೇ ತಪ್ಪಾಗಿ ಗ್ರಹಿಸಿ ಈ ಕ್ರೀಡಾಪಟುವಿಗೆ ಕೊಂಬು ಬಂದಿದೆ ಎಂದು ಬರೆದುಬಿಡುತ್ತಾರೆ.
*ಮತ್ತೊಬ್ಬ ಆಟಗಾರನ ಮೇಲೆ ಹೊಟ್ಟೆಕಿಚ್ಚು ಆಗಿದ್ದಿದೆಯಾ?
ಹೊಟ್ಟೆಕಿಚ್ಚು ಅಂತ ಹೇಳುವುದಿಲ್ಲ. ಬದಲಾಗಿ ಮತ್ತೊಬ್ಬ ಆಟಗಾರನನ್ನು ಮೀರಿ ನಿಲ್ಲುವ ಪ್ರಯತ್ನ. ಕೊಹ್ಲಿಗಿಂತ ಚೆನ್ನಾಗಿ ಆಡಬೇಕು, ಡಿವಿಲಿಯರ್ಸ್ ರೀತಿ ಬ್ಯಾಟ್ ಮಾಡಬೇಕು ಅನಿಸುತ್ತೆ ಅಷ್ಟೆ.
*ಸಿಟ್ಟು ಬಂದಾಗ ಏನು ಮಾಡುತ್ತೀರಿ?
ಜಿಮ್ಗೆ ಹೋಗಿ ಸಿಕ್ಕಾಪಟ್ಟೆ ಕಸರತ್ತು ನಡೆಸುತ್ತೇನೆ. ಕ್ರೀಡಾಂಗಣದಲ್ಲಿ ಹೆಚ್ಚು ಹೊತ್ತು ಓಡುತ್ತೇನೆ.
*ತಂದೆ-ತಾಯಿಗೆ ನೀಡಿದ ಪ್ರೀತಿಯ ಉಡುಗೊರೆ ಏನು?
ನಾನು ಚೆನ್ನಾಗಿ ಆಡುವುದೇ ಅವರಿಗೆ ನಾನು ನೀಡುವ ಅತ್ಯುತ್ತಮ ಉಡುಗೊರೆ. ಅವರು ನಿರೀಕ್ಷಿಸುವುದು ಕೂಡ ಇದನ್ನೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.