ADVERTISEMENT

ಸಾಹಿತ್ಯದ ಶಕ್ತಿ

ಪಶ್ಚಿಮದ ಅರಿವು /ಹಾರಿತಾನಂದ
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST

ಸಾಹಿತ್ಯವನ್ನು ಏಕೆ ಓದಬೇಕು? ಈ ಪ್ರಶ್ನೆ ಆಗಾಗ ಕಾಡುವುದುಂಟು. ಇಂದು ನಾವು ಎಷ್ಟು ಕಳೆದುಹೋಗಿದ್ದೇವೆ ಎಂದರೆ ನಮ್ಮ ಅಕ್ಕಪಕ್ಕದವರನ್ನು ನೋಡಲು ಕೂಡ ನಮಗೆ ಸಮಯವಿಲ್ಲವಾಗಿದೆ. ಮನುಷ್ಯರೊಡನೆ, ಮನುಷ್ಯರಾಗಿಯೇ ನಾವು ಈ ಜಗತ್ತಿನಲ್ಲಿ ವ್ಯವಹರಿಸಬೇಕಾಗಿರುವುದರಿಂದ ಮನುಷ್ಯಸ್ವಭಾವಗಳ ಪರಿಚಯ ನಮಗೆ ಬೇಕಷ್ಟೆ! ಆದರೆ ನಮಗೆ ಮನುಷ್ಯಸಂಪರ್ಕ ಇದ್ದೂ ಇಲ್ಲದಂಥ ಸ್ಥಿತಿ ಒದಗಿದೆ. ಇಂಥ ವಿಚಿತ್ರಸಂದರ್ಭದಲ್ಲಿ ನಮಗೆ ಒದಗುವಂಥದ್ದು ಸಾಹಿತ್ಯ. ಏಕೆಂದರೆ ಮನುಷ್ಯನ ಎಲ್ಲ ಭಾವಗಳ ಹಿಂದಿರುವ ಸೌಂದರ್ಯವನ್ನು ನಮಗೆ ತೋರಿಸುವುದೇ ಸಾಹಿತ್ಯ. ಸೌಂದರ್ಯ ಎಂದರೇನು? ಡಿವಿಜಿಯವರು ನೀಡಿರುವ ವಿವರಣೆಯನ್ನು ಇಲ್ಲಿ ಮೆಲುಕು ಹಾಕಬಹುದು:

‘ಕಾವ್ಯಜ್ಞರ (ಮತ್ತು ಇತರ ಎಲ್ಲ ಕಲೋಪಾಸಕರ) ಪರಿಭಾಷೆಯಲ್ಲಿ ಸೌಂದರ್ಯವೆಂದರೆ ಮಾನವಹೃದಯವನ್ನು ಕದಲಿಸುವ ಸುಖಶಕ್ತಿ. ಯಾವ ಯಾವುದು ನಮ್ಮ ಮನಸ್ಸನ್ನು ಹಿಡಿದು, ತಡೆದು, ಕೆಣಕಿ, ಕುಲುಕಿ, ಹಾಗೆ ನಮ್ಮ ಜೀವನದ ಮೇಲೆ ಎಷ್ಟುಮಟ್ಟಿಗಾದರೂ ಒಂದು ಇಷ್ಟಪರಿಣಾಮವನ್ನುಂಟುಮಾಡಬಲ್ಲುದೋ, ಅದೆಲ್ಲವೂ ಸೌಂದರ್ಯಸಾಮಗ್ರಿಯೇ. ಸೌಂದರ್ಯಗಳು ಸೃಷ್ಟಿ ಸನ್ನಿವೇಶಗಳಾಗಿರಬಹುದು, ಕಲಾಚಮತ್ಕೃತಿಗಳಾಗಿರಬಹುದು, ಮನುಷ್ಯಸ್ವಭಾವದ್ದಾಗಿರಬಹುದು, ರೂಪದ್ದಾಗಿರಬಹುದು, ಭಾವದ್ದಾಗಿರಬಹುದು, ಗುಣದ್ದಾಗಿರಬಹುದು, ಶೀಲದ್ದಾಗಿರಬಹುದು. ಕಲಾರಸಗಳಲ್ಲಿ ಶೃಂಗಾರ, ಅದ್ಭುತ, ವೀರ – ಇವು ಮಾತ್ರವೇ ಸೌಂದರ್ಯವಲ್ಲ; ಕರುಣರಸಕ್ಕೆ ತಾಯಾದ ಶೋಕವೂ, ಭೀಭತ್ಸಕ್ಕೆ ತಾಐಆದ ಜುಗುಪ್ಸೆಯೂ ಸಹ ಸೌಂದರ್ಯದ ಅವತಾರಗಳೇ; ಏಕೆಂದರೆ ಇವು ಕೂಡ ನಮ್ಮ ಗಮನವನ್ನು ಹಿಡಿದಿರಿಸಿಕೊಳ್ಳಬಲ್ಲವು; ಇಂಥವೂ ನಮ್ಮ ನೆನಪಿಗೆ ಬಾರಿಬಾರಿಗೂ ಬಂದೂ, ನಮ್ಮಿಂದ ‘ಅಯ್ಯೋ!’ ಎಂದೆನಿಸುತ್ತವೆ. ಕೌತುಕಗೊಳಿಸುವ, ರಮಣೀಯವೆನಿಸುವ, ಹೃದಯವೇಧಕವಾದ, ಚಿತ್ತಚಾಲಕವಾದ, ಬಾಷ್ಪಕಾರಕವಾದ ಪ್ರತಿಯೊಂದು ಸಂದರ್ಭವೂ ಒಂದು ಸೌಂದರ್ಯವೇ. ಕವಿಯು (ಹಾಗೆಯೇ ಚಿತ್ರಶಿಲ್ಪಯು) ಇಂಥ ಸಂದರ್ಭಗಳನ್ನು ಲೋಕಾನುಭವದಿಂದ ಕಂಡುಕೊಂಡೋ, ಸ್ವಪ್ರತಿಭೆಯಿಂದ ಕಲ್ಪಿಸಿಕೊಂಡೋ ತನ್ನ ವಾಕ್ಸಂಹಿತೆಯಲ್ಲಿ ರೂಪಗೊಳಿಸುತ್ತಾನೆ.’

ನಾವು ಸಂವೇದನಶೂನ್ಯರಾಗುತ್ತಿದ್ದೇವೆ. ಯಾವ ಘಟನೆಯೂ ಒದ್ದೆ ಮಾಡದಂಥ ಕಲ್ಲಾಗಿದೆ ನಮ್ಮ ಮನಸ್ಸು. ನಮ್ಮ ಜೀವನದ ಹೋರಾಟದಲ್ಲಿ ಮುಳುಗಿರುವ ನಾವು ಬೇರೊಬ್ಬರ ಜೀವನದ ಬಗ್ಗೆ, ಅವರ ಭಾವನೆಗಳ ಬಗ್ಗೆ, ಸಂವೇದನಗಳ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ವ್ಯವಧಾನವೇ ನಮಗೆ ಇಲ್ಲವಾಗಿದೆ. ಹೀಗಾಗಿ ಸಹಜ ಸೌಂದರ್ಯವನ್ನು ಸವಿಯುವ ಗುಣವೇ ನಮ್ಮಿಂದ ಮಾಯವಾಗಿದೆ. ನಮ್ಮ ಮನಸ್ಸನ್ನು ಮೆದುಗೊಳಿಸುವ, ಸಂವೇದನಶೀಲವನ್ನಾಗಿಸುವ ಶಕ್ತಿ ಇರುವುದೇ ಸಾಹಿತ್ಯಕ್ಕೆ. ಆದುದರಿಂದ ನಾವು ‘ನಾವಾಗಲು’ ಎಂದರೆ ಮನುಷ್ಯರಾಗಲು ನಮಗೆ ಸಾಹಿತ್ಯಸಂಸ್ಕಾರ ಬೇಕಾಗುತ್ತದೆ.

ADVERTISEMENT

ಏಕೆಂದರೆ: ‘ಕಾವ್ಯವೆಂಬುದು ಒಬ್ಬ ಪ್ರತಿಭಾಶಾಲಿಯು ಜಗತ್ತಿನೊಡನೆ ನಡಸುವ ಸಲ್ಲಾಪ: ಅದರ ಕೂಗಿಗೆ ಅವನ ಮರುಕೂಗು. ಅದರ ಸಂತಾಪಕ್ಕೆ ಅವನ ಅನುತಾಪ; ಅದರ ಸಂತೋಷಕ್ಕೆ ಅವನ ಪರಿತೋಷ; ಅದರ ಪ್ರಶ್ನೆಗೆ ಅವನ ಸಮಾಧಾನ; ಅದರ ಆಯಾಸಕ್ಕೆ ಅವನ ಉಪಚಾರ; ಅದರ ಬೇಸರಕ್ಕೆ ಅವನ ವಿಕೋಟವಿನೋದ; ಅದರ ಕಾಲಯಾಪನೆಗೆ ಅವನ ಒಗಟು ಹರಟೆ; ಅವನ ಕುತೂಹಲಕ್ಕೆ ಅವನ ಆಕಾಶಪುರಾಣ; ಅದರ ಅಕಾಲನಿದ್ರೆಗೆ ಅವನ ಭೇರೀಧ್ವಾನ – ಇತ್ಯಾದಿ. ಅವನ ಕಣ್ಣಿಗೆ, ಕಿವಿಗೆ, ಅನುಭವಕ್ಕೆ, ಊಹೆಗೆ – ಸುಖವೆಂದು, ಸೊಬಗೆಂದು, ವಿಚಿತ್ರವೆಂದು – ತೋರುವುದನ್ನೆಲ್ಲ ಕುರಿತು ಮಾತನಾಡುವುದು ಅವನ ಸ್ವಭಾವ.’

ಡಿವಿಜಿಯವರ ಮೇಲಣ ಮಾತುಗಳು ಸಾಹಿತ್ಯದ ಲಕ್ಷಣವನ್ನು ನಿರೂಪಿಸುತ್ತವೆ.

ನಮಗೆ ಅಧ್ಯಾತ್ಮದಲ್ಲಿ ಆಸಕ್ತಿ ಉಂಟಾಗಲು ಮೊದಲು ಚೆನ್ನಾಗಿ ಲೋಕವನ್ನು ಪರೀಕ್ಷೆ ಮಾಡಬೇಕು ಎನ್ನುತ್ತದೆ, ಉಪನಿಷತ್ತು. ಲೋಕವನ್ನು ಪರೀಕ್ಷಿಸುವುದು ಎಂದರೆ ನಮ್ಮನ್ನು ನಾವು ಪರೀಕ್ಷಿಸಿಕೊಳ್ಳುವುದು ಮತ್ತು ಸುತ್ತಲಿನ ಜಗತ್ತನ್ನು ಪರೀಕ್ಷಿಸುವುದು. ಆದರೆ ಇವೆರಡೂ ಇಂದು ನಮ್ಮಿಂದ ನಡೆಯುತ್ತಿಲ್ಲ. ಏಕೆಂದರೆ ನಮ್ಮ ಯಾಂತ್ರಿಕ ಜೀವನವಿಧಾನದಲ್ಲಿ ಸಂವೇದನಗಳಿಗೆ ಎಡೆಯಿಲ್ಲದಂತಾಗಿದೆ. ಯಂತ್ರಗಳಿಗೆ ಸಂವೇದನೆಗಳು ಇರದು; ಅವು ಕೇವಲ ಶಕ್ತಿಯ ಸಹಾಯದಿಂದ ಅದರ ನಿರ್ದಿಷ್ಟ ಕೆಲಸಗಳನ್ನು ಮಾಡುತ್ತಹೋಗುತ್ತವೆಯಷ್ಟೆ! ನಾವೂ ಈಗ ಯಂತ್ರಗಳೇ ಆಗಿದ್ದೇವೆ. ನಮ್ಮನ್ನು ಮತ್ತೆ ಮನುಷ್ಯರನ್ನಾಗಿ ಬದಲಾಯಿಸುವ ಶಕ್ತಿ ಇರುವುದು ಸಾಹಿತ್ಯಕ್ಕೆ ಮಾತ್ರ. ಆದುದರಿಂದ ನಮ್ಮ ಶಿಕ್ಷಣವ್ಯವಸ್ಥೆಯಲ್ಲಿ ಸಾಹಿತ್ಯಕ್ಕೆ ವಿಶೇಷ ಸ್ಥಾನವನ್ನು ನೀಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.