ADVERTISEMENT

ಆತಿಥೇಯರಿಗೆ ಜಯದ ಗುರಿ

ಭಾರತಕ್ಕೆ ಕೊನೆಯ ಲೀಗ್ ಪಂದ್ಯದಲ್ಲಿ ಘಾನಾ ಸವಾಲು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
ಭಾರತದ ಪರ ಮೊದಲ ಗೋಲು ಗಳಿಸಿದ ಜೀಕ್ಸನ್‌ ಸಿಂಗ್‌ ಮೇಲೆ ಮೂರನೇ ಪಂದ್ಯದಲ್ಲಿ ಭರವಸೆ ಇರಿಸಿದೆ.
ಭಾರತದ ಪರ ಮೊದಲ ಗೋಲು ಗಳಿಸಿದ ಜೀಕ್ಸನ್‌ ಸಿಂಗ್‌ ಮೇಲೆ ಮೂರನೇ ಪಂದ್ಯದಲ್ಲಿ ಭರವಸೆ ಇರಿಸಿದೆ.   

ನವದೆಹಲಿ: ಮೊದಲ ಪಂದ್ಯದಲ್ಲಿ ಸೋಲು; ಎರಡನೇ ಪಂದ್ಯದಲ್ಲಿ ಮೊದಲ ಗೋಲು. ಇದೀಗ ಮೂರನೇ ಪಂದ್ಯದಲ್ಲಿ ಗೆಲುವಿನ ಗುರಿ. 17 ವರ್ಷದೊಳಗಿನವರ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಮೊದಲ ಬಾರಿ ಆಡಲು ಅವಕಾಶ ಪಡೆದಿರುವ ಭಾರತ ತಂಡ ಲೀಗ್ ಹಂತದ ಕೊನೆಯ ಪಂದ್ಯವನ್ನು ಗುರುವಾರ ಆಡಲಿದೆ. ಜಯದ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದೆ.

ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಘಾನಾ ತಂಡವನ್ನು ಆತಿಥೇಯರು ಎದುರಿಸಲಿದ್ದಾರೆ. ಮೊದಲ ಪಂದ್ಯದಲ್ಲಿ 0-3ರಿಂದ ಅಮೆರಿಕ ವಿರುದ್ಧ ಸೋತ ಭಾರತದ ಮೇಲೆ ಮುಂದಿನ ಪಂದ್ಯದಲ್ಲಿ ಎಲ್ಲರೂ ಭರವಸೆ ಕಳೆದುಕೊಂಡಿದ್ದರು.

ಆದರೆ ಅಮೋಘ ಆಟವಾಡಿದ ತಂಡ ಐತಿಹಾಸಿಕ ಮೊದಲ ಗೋಲು ಬಾರಿಸಿತ್ತು. ಅದರ ರೂವಾರಿಯಾಘಿದ್ದ ಜೀಕ್ಸನ್ ಸಿಂಗ್ ಮನೆಮಾತಾಗಿದ್ದರು. ಆಲ್ಲದೇ ಕೊಲಂಬಿಯಾ ತಂಡಕ್ಕೆ ದಿಟ್ಟ ಸವಾಲು ಒಡ್ಡಿತ್ತು. ಸೋತರೂ  ಆತ್ಮವಿಶ್ವಾಸ ವೃದ್ಧಿಸಿತ್ತು. ಇದರಿಂದಾಗಿ ಮೂರನೇ ಪಂದ್ಯದಲ್ಲಿ ಭಾರತ ತಂಡವು ವಿರೋಚಿತ ಹೋರಾಟ ನಡೆಸುವ ನಿರೀಕ್ಷೆ ಗರಿಗೆದರಿದೆ.

ADVERTISEMENT

ಆದರೆ ‘ಎ’ ಗುಂಪಿನಲ್ಲಿರುವ ಬಲಿಷ್ಠ ತಂಡ ಘಾನಾ. ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಈ ತಂಡ ಕೂಡ ಗುರುವಾರ ಗೆಲುವಿನ ಗುರಿಯೊಂದಿಗೇ ಅಂಗಣಕ್ಕೆ ಇಳಿಯಲಿದೆ. ಈ ಪಂದ್ಯದಲ್ಲಿ ಗೆದ್ದರೂ ಭಾರತಕ್ಕೆ 16ರ ಘಟ್ಟ ತಲುಪುವ ಅವಕಾಶ ಕಡಿಮೆ. ‘ಎ’ ಗುಂಪಿನಿಂದ ಅಮೆರಿಕ ಈಗಾಗಲೇ ಮುಂದಿನ ಸುತ್ತು ಪ್ರವೇಶಿಸಿದ್ದು ಘಾನಾ ಮತ್ತು ಕೊಲಂಬಿಯಾ ತಂಡಗಳು ತಲಾ ಮೂರು ಪಾಯಿಂಟ್‌ಗಳೊಂದಿಗೆ ಸ್ಪರ್ಧೆ ಯಲ್ಲಿವೆ.

ಎರಡು ಪಂದ್ಯಗಳಲ್ಲಿ ಒಟ್ಟು ಐದು ಗೋಲುಗಳನ್ನು ಬಿಟ್ಟುಕೊಟ್ಟಿರುವ ಆತಿಥೇಯರ ಬಗಲಿನಲ್ಲಿರುವುದು ಒಂದು ಗೋಲು ಮಾತ್ರ. ಗುಂಪು ಹಂತದಲ್ಲಿ ಎರಡು ತಂಡಗಳು ಸಮಾನ ಪಾಯಿಂಟ್ ಗಳಿಸಿದರೆ ಗೋಲು ಗಳಿಕೆಯ ಆಧಾರದಲ್ಲಿ ಸ್ಥಾನ ನಿರ್ಣಯಿಸಲಾಗುತ್ತದೆ. ಭಾರತಕ್ಕೆ ಈ ಅವಕಾಶ ಸಿಗಬೇಕಾದರೆ ಗುರುವಾರ ಗೋಲುಗಳ ಮಳೆ ಸುರಿಸಬೇಕಾದ ಅಗತ್ಯವಿದೆ.

ಏಳು ತಿಂಗಳಲ್ಲಿ ಯುವ ಪಡೆಯನ್ನು ಸಿದ್ಧಗೊಳಿಸಿರುವ ಕೋಚ್‌ ಲೂಯಿಸ್ ನಾರ್ಟನ್ ಡಿ ಮಾಟೋಸ್ ಅವರ ರಣತಂತ್ರ ಕೊಲಂಬಿಯಾ ವಿರುದ್ಧ ಬಹುತೇಕ ಸಫಲವಾಗಿತ್ತು. ಹೀಗಾಗಿ ನಿರ್ಣಾಯಕ ಪಂದ್ಯದಲ್ಲಿ ಅವರು ಯಾವ ತಂತ್ರಗಳಿಗೆ ಮೊರೆ ಹೋಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಧೀರಜ್‌, ಜೀಕ್ಸನ್ ಮೇಲೆ ಕಣ್ಣು: ಟೂರ್ನಿಯಲ್ಲಿ ಗೋಲ್ ಕೀಪರ್ ಧೀರಜ್‌ ಸಿಂಗ್ ಮತ್ತು ಜೀಕ್ಸನ್ ಸಿಂಗ್ ಮಿಂಚು ಹರಿಸಿದ್ದಾರೆ. ಆದ್ದರಿಂದ ಗುರುವಾರದ ಪಂದ್ಯದಲ್ಲೂ ಇವರಿಬ್ಬರ ಮೇಲೆ ಎಲ್ಲರ ಗಮನ ಹರಿಯಲಿದೆ.

ರಕ್ಷಣಾ ವಿಭಾಗದಲ್ಲಿ ಅನ್ವರ್‌ ಅಲಿ ಮತ್ತು ನಮಿತ್‌ ದೇಶಪಾಂಡೆ ಅವರು ತಂಡದ ಭರವಸೆಯಾಗಿದ್ದಾರೆ. ಅನ್ವರ್‌ ಅವರನ್ನು ಅಮೆರಿಕ ಮತ್ತು ಕೊಲಂಬಿಯಾ ತಂಡಗಳ ಕೋಚ್‌ಗಳು ಕೂಡ ಹೊಗಳಿರುವುದು ಗಮನಾರ್ಹ ಸಂಗತಿಯಾಗಿದೆ.

ಫುಲ್‌ ಬ್ಯಾಕ್‌ ಪ್ರದೇಶದಲ್ಲಿ ಆಡುವ ಕನ್ನಡಿಗ ಸಂಜೀವ ಸ್ಟಾಲಿನ್‌ ಹಾಗೂ ಅವರಿಗೆ ಉತ್ತಮ ಸಹಕಾರ ನೀಡುತ್ತಿರುವ ಬೋರಿಸ್ ಸಿಂಗ್‌ ಕೂಡ ಮಿಂಚಿದರೆ ಭಾರತಕ್ಕೆ ಗೋಲು ಗಳಿಸುವುದು ಕಷ್ಟಕರವಾಗಲಾರದು.

ಮಿಡ್‌ಫೀಲ್ಡ್ ವಿಭಾಗದಲ್ಲಿ ಆಟಗಾರರನ್ನು ಆಯ್ಕೆ ಮಾಡಲು ಕೋಚ್‌ಗೆ ಹೆಚ್ಚು ಶ್ರಮವಿಲ್ಲ. ಸಾಕಷ್ಟು ಪ್ರತಿಭೆಗಳು ಇರುವುದರಿಂದ ಘಾನಾ ತಂಡಕ್ಕೆ ಬಿಸಿ ಮುಟ್ಟಿಸುವುದು ಸುಲಭವಾಗಲಿದೆ. ಕೊಲಂಬಿಯಾವನ್ನು ಮಣಿಸಿ ಅಮೆರಿಕೆ ವಿರುದ್ಧ ಸೋಲುಂಡ ಘಾನಾ ಗುರುವಾರದ ಪಂದ್ಯ ಗೆದ್ದರೆ 16ರ ಘಟ್ಟಕ್ಕೆ ಸುಲಭವಾಗಿ ಪ್ರವೇಶ ಗಿಟ್ಟಿಸಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.