ADVERTISEMENT

ಆದಿಲ್‌ಗೆ ಗೆಲುವು

ಟೆನಿಸ್‌: ಪ್ರೀ ಕ್ವಾರ್ಟರ್‌ ಫೈನಲ್‌ಗೆ ನಿಕ್ಷೇಪ್‌

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 19:30 IST
Last Updated 10 ಡಿಸೆಂಬರ್ 2013, 19:30 IST

ಬೆಂಗಳೂರು: ಕರ್ನಾಟಕದ ಬಿ.ಆರ್‌. ನಿಕ್ಷೇಪ್‌ ಮತ್ತು ಆದಿಲ್‌ ಕಲ್ಯಾಣ್‌ಪುರ್‌ ಇಲ್ಲಿ ನಡೆಯುತ್ತಿರುವ ಆರ್‌.ಟಿ. ನಾರಾಯಣ್‌ ಸ್ಮಾರಕ ಎಐಟಿಎ ರಾಷ್ಟ್ರೀಯ ಜೂನಿಯರ್‌ ಟೆನಿಸ್‌ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಬಾಲಕರ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಅಗ್ರಶ್ರೇಯಾಂಕದ ನಿಕ್ಷೇಪ್‌ 6-2, 6-3 ರಲ್ಲಿ ಬಿ. ಅನಿರುದ್ಧ್‌ ಅವರನ್ನು ಮಣಿಸಿದರು.

ಟೂರ್ನಿಗೆ ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದ ಆದಿಲ್‌ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು. ಅವರು 6-2, 6-1 ರಲ್ಲಿ ಏಳನೇ ಶ್ರೇಯಾಂಕದ ಆಟಗಾರ ಮಯೂಕ್‌ ರಾವತ್‌ ವಿರುದ್ಧ  ಜಯ ಪಡೆದರು.

ಎರಡನೇ ಶ್ರೇಯಾಂಕದ ಆಟಗಾರ ಪಶ್ಚಿಮ ಬಂಗಾಳದ ಸನಿಲ್‌ ಜಗಿತಿಯಾನಿ 6-3, 6-1 ರಲ್ಲಿ ರಾಹುಲ್‌ ಶಂಕರ್‌ ಎದುರೂ, ಮೂರನೇ ಶ್ರೇಯಾಂಕದ ಆಟಗಾರ ಅಸ್ಸಾಂನ ಪರೀಕ್ಷಿತ್‌ ಸೊಮಾನಿ 6-4, 6-2 ರಲ್ಲಿ ಆದಿತ್ಯ ಮುತ್ತು ಸೆಲ್ವನ್‌ ಮೇಲೂ ಜಯ ಗಳಿಸಿದರು.

ಎಂಎಸ್‌ಎಸ್‌ ಕೋರ್ಟ್‌ನಲ್ಲಿ ನಡೆದ ಬಾಲಕಿಯರ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಮಹಾರಾಷ್ಟ್ರದ ಸ್ನೇಹಲ್‌ ಮಾನೆ 6-3, 6-3 ರಲ್ಲಿ ಕರ್ನಾಟಕದ ಶಿವಾನಿ ಮಂಜಣ್ಣ ಅವರನ್ನು ಮಣಿಸಿ 16ರ ಹಂತ ಪ್ರವೇಶಿಸಿದರು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ರಷ್ಮಿಕಾ ರಾಜನ್‌ 6-2, 6-2 ರಲ್ಲಿ ನಿಕಿತಾ ಪಿಂಟೊ ಎದುರೂ, ಲತಿಕಾ ಪ್ರೇಮ್‌ಕುಮಾರ್‌ 6-2, 6-7, 6-2 ರಲ್ಲಿ ಮುಸ್ಕಾನ್ ರಂಜನ್‌ ಮೇಲೂ ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.