ಬ್ಯಾಂಕಾಕ್: ಭಾರತದ ಜೂನಿಯರ್ ಸ್ಪರ್ಧಿಗಳು ಏಷ್ಯಾ ಕಪ್ ಆರ್ಚರಿ ಮೊದಲ ಹಂತದ ಟೂರ್ನಿಯಲ್ಲಿ ಮೂರು ಚಿನ್ನ ಹಾಗೂ ಎರಡು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಅಂತಿಮ ದಿನವಾದ ಗುರುವಾರ ಪ್ರೊಮಿಳಾ ದೈಮಂತ್ರಿ ಎರಡನೇ ವೈಯಕ್ತಿಕ ಚಿನ್ನದ ಪದಕ ಗೆದ್ದರು. ಮಹಿಳೆಯರ ರಿಕರ್ವ್ ವಿಭಾಗದ ಫೈನಲ್ನಲ್ಲಿ ಅವರು 7–3ರಲ್ಲಿ ರಷ್ಯಾದ ನತಾಲಿಯಾ ಎದುರು ಜಯಿಸಿದರು. ಇದೇ ವಿಭಾಗದಲ್ಲಿ ಭಾರತದ ಮಧು ವೇದವನ್ 6–5ರಲ್ಲಿ ಮಂಗೋಲಿಯಾದ ಎಂಕುತುವಾ ಅವರನ್ನು ಮಣಿಸಿ ಕಂಚು ಗೆದ್ದರು.
ಆಕಾಶ್, ಗೋರಾ ಹೊ ಮತ್ತು ಗೌರವ್ ಲಾಂಬೆ ಅವರನ್ನು ಒಳಗೊಂಡ ಭಾರತ ಪುರುಷರ ತಂಡ 27–26ರಲ್ಲಿ ಮಂಗೋಲಿಯಾ ತಂಡವನ್ನು ಮಣಿಸಿ ಚಿನ್ನಕ್ಕೆ ಕೊರಳೊಡ್ಡಿದರು.
ಮಹಿಳೆಯರ ಕಾಂಪೌಂಡ್ ವಿಭಾಗದಲ್ಲಿ ಮುಸ್ಕಾನ್ ಕಿರಾರ್ ಚಿನ್ನ ಗೆದ್ದರು. ಫೈನಲ್ನಲ್ಲಿ ಅವರು 139–136ರಲ್ಲಿ ಮಲೇಷ್ಯಾದ ನಾದಿರಾ ಎದುರು ಗೆದ್ದರು.
ತಂಡ ವಿಭಾಗದ ಪ್ಲೇ ಆಫ್ ಪಂದ್ಯದಲ್ಲಿ ಮುಸ್ಕಾನ್, ದಿವ್ಯಾ, ಮರಿನಲ್ ಅವರನ್ನು ಒಳಗೊಂಡ ಭಾರತ ತಂಡ 227–221ರಲ್ಲಿ ಇಂಡೊನೇಷ್ಯಾ ಎದುರು ಗೆದ್ದು ಕಂಚಿನ ಪದಕ ಗಳಿಸಿತು. ಸೆಮಿಫೈನಲ್ನಲ್ಲಿ ವಿಯೆಟ್ನಾಂ ಎದುರು ಸೋಲು ಅನುಭವಿಸಿತ್ತು.
ಪುರುಷರ ಕಾಂಪೌಂಡ್ ವಿಭಾಗದಲ್ಲಿ ಗುರ್ಜಿತ್ ಸಿಂಗ್, ಮಯಂಕ್ ರಾವತ್ ಮತ್ತು ಅಮನ್ ಸೈನಿ ಅವರನ್ನು ಒಳಗೊಂಡ ತಂಡ ಪ್ಲೇ ಆಫ್ ಪಂದ್ಯ ಸೋತಿತು. ಮಿಶ್ರ ತಂಡ ವಿಭಾಗದಲ್ಲಿಯೂ ಭಾರತ ಸೋಲು ಎದುರಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.