ADVERTISEMENT

ಇಂದು ಏಕದಿನ ತಂಡದ ಆಯ್ಕೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಚೆನ್ನೈ (ಪಿಟಿಐ): ವೇಗಿಗಳಾದ ಪ್ರವೀಣ್ ಕುಮಾರ್ ಹಾಗೂ ಇರ್ಫಾನ್ ಪಠಾಣ್ ಆಸ್ಟ್ರೇಲಿಯಾ ವಿರುದ್ಧದ ಎರಡು ಟ್ವೆಂಟಿ-20 ಪಂದ್ಯ ಹಾಗೂ ಆ ಬಳಿಕ ನಡೆಯುವ ಮೂರು ರಾಷ್ಟ್ರಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ರಾಷ್ಟ್ರೀಯ ಆಯ್ಕೆ ಸಮಿತಿ ಭಾನುವಾರ ಸಂಜೆ 4.00 ಗಂಟೆಗೆ ಚೆನ್ನೈನಲ್ಲಿ ಸಭೆ ಸೇರಿ ತಂಡವನ್ನು ಆಯ್ಕೆ ಮಾಡಲಿದೆ. ತ್ರಿಕೋನ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಆಡುವ ನಿರೀಕ್ಷೆ ಇದೆ. ಏಪ್ರಿಲ್‌ನಲ್ಲಿ ಕೊನೆಗೊಂಡ ವಿಶ್ವಕಪ್ ಬಳಿಕ ಸಚಿನ್ ಏಕದಿನ ಕ್ರಿಕೆಟ್ ಆಡಿಲ್ಲ. ಆದರೆ ಪೂರ್ಣವಾಗಿ ಚೇತರಿಸಿಕೊಳ್ಳದ ಯುವರಾಜ್ ಸಿಂಗ್ ಆಯ್ಕೆಗೆ ಲಭ್ಯರಾಗುತ್ತಿಲ್ಲ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೂರು ರಾಷ್ಟ್ರಗಳ ಏಕದಿನ ಸರಣಿಯಲ್ಲಿ ಭಾರತ ಮತ್ತು ಕಾಂಗರೂ ಪಡೆ ಜೊತೆ ಶ್ರೀಲಂಕಾ ತಂಡ ಪಾಲ್ಗೊಳ್ಳಲಿದೆ.  ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಜನವರಿ 28 ರಂದು ಕೊನೆಗೊಳ್ಳಲಿದೆ. ಆ ಬಳಿಕ ಫೆಬ್ರುವರಿ 1 ಹಾಗೂ 3 ರಂದು ಟ್ವೆಂಟಿ-20 ಪಂದ್ಯಗಳು ನಡೆಯಲಿವೆ.

ಮೂರು ರಾಷ್ಟ್ರಗಳ ಸರಣಿಯ ಮೊದಲ ಪಂದ್ಯ ಫೆ. 5 ರಂದು ಮೆಲ್ಬರ್ನ್‌ನಲ್ಲಿ ನಡೆಯಲಿದೆ. ಮೂರೂ ತಂಡಗಳು ಎದುರಾಳಿಗಳ ಜೊತೆ ನಾಲ್ಕು ಸಲ ಪೈಪೋಟಿ ನಡೆಸಲಿವೆ. ಆ ಬಳಿಕ ಎರಡು ತಂಡಗಳು `ಬೆಸ್ಟ್ ಆಫ್ ತ್ರೀ~ ಫೈನಲ್‌ನಲ್ಲಿ ಎದುರಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.