ADVERTISEMENT

ಎನ್‌ಒಸಿ ಪಡೆದ ವಾಂಖೆಡೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 18:25 IST
Last Updated 26 ಫೆಬ್ರುವರಿ 2011, 18:25 IST

ಮುಂಬೈ (ಪಿಟಿಐ): ಅಗ್ನಿ ಆಕಸ್ಮಿಕ ಸಂಭವಿಸಿದರೆ ರಕ್ಷಣೆಗೆ ತಕ್ಕ ಸುರಕ್ಷತಾ ವ್ಯವಸ್ಥೆ ಇಲ್ಲವೆಂದು ಆಕ್ಷೇಪ ಸಲ್ಲಿಸಿದ್ದ ಅಗ್ನಿಶಾಮಕ ದಳವು ಮರುಪರಿಶೀಲನೆ ನಂತರ ಅಂತಿಮವಾಗಿ ವಾಂಖೆಡೆ ಕ್ರೀಡಾಂಗಣಕ್ಕೆ ‘ಎನ್‌ಒಸಿ’ ನೀಡಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಅಗ್ನಿ ಅನಾಹುತ ತಪ್ಪಿಸಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಲಾಗಿಲ್ಲವೆಂದು ದೂರು ನೀಡಲಾಗಿತ್ತು. ಆನಂತರ ಎಲ್ಲೆಡೆ ಬೆಂಕಿ ನಂದಿಸಲು ಅಗತ್ಯವಾದ ಸಾಧನಗಳನ್ನು ಅಳವಡಿಸಲಾಗಿದೆ. ಆದ್ದರಿಂದ ನಿರಪೇಕ್ಷಣಾ ಪ್ರಮಾಣ ಪತ್ರ (ಎನ್‌ಒಸಿ) ಸಿಕ್ಕಿದೆ.

ಫೈನಲ್ ಸೇರಿದಂತೆ ವಿಶ್ವಕಪ್‌ನ ಒಟ್ಟು ಮೂರು ಪಂದ್ಯಗಳು ಇದೇ ಕ್ರೀಡಾಂಗಣದಲ್ಲಿ ನಡೆಯಲಿವೆ. ಇದೇ ಕಾರಣಕ್ಕಾಗಿ ಕ್ರೀಡಾಂಗಣವನ್ನು ನವೀಕರಿಸಲಾಗಿದೆ. ಆದರೆ ನವೀಕರಣದ ನಂತರ ಅಗ್ನಿ ದುರಂತ ತಪ್ಪಿಸಲು ತಕ್ಕ ಸುರಕ್ಷತಾ ವ್ಯವಸ್ಥೆಯನ್ನು ಮಾಡಿರಲಿಲ್ಲ. ಆದ್ದರಿಂದ ಅಗ್ನಿಶಾಮಕ ದಳವು ಅಸಮಾಧಾನ ವ್ಯಕ್ತಪಡಿಸಿತ್ತು.

‘ನಮ್ಮ ಆಕ್ಷೇಪದ ನಂತರ ಕ್ರೀಡಾಂಗಣದಲ್ಲಿ ಸಂಪೂರ್ಣವಾಗಿ ಅಗ್ನಿ ಸುರಕ್ಷತಾ ಸಾಧನಗಳನ್ನು ಅಳವಡಿಸುವ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ’ ಎಂದು ಅಗ್ನಿಶಾಮಕ ದಳದ ಉಪ ಪ್ರಧಾನ ಅಧಿಕಾರಿ ಎ.ಎನ್.ಶಿಂಧೆ ಅವರು ಸುದ್ದಿಗಾರರಿಗೆ ತಿಳಿಸಿದರು.

‘ನಿರಪೇಕ್ಷಣಾ ಪ್ರಮಾಣ ಪತ್ರವನ್ನು ಪಡೆದಿರುವುದರಿಂದ ಈಗ ವಿಶ್ವಕಪ್ ಪಂದ್ಯಗಳನ್ನು ಈ ಕ್ರೀಡಾಂಗಣದಲ್ಲಿ ನಡೆಸುವುದಕ್ಕೆ ಇನ್ನು ತೊಡಕಿಲ್ಲ’ ಎಂದು ಶಿಂಧೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.