ADVERTISEMENT

ಎಸ್‌ಬಿಎಂ, ಆಳ್ವಾಸ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST
ಎಸ್‌ಬಿಎಂ, ಆಳ್ವಾಸ್‌ಗೆ ಪ್ರಶಸ್ತಿ
ಎಸ್‌ಬಿಎಂ, ಆಳ್ವಾಸ್‌ಗೆ ಪ್ರಶಸ್ತಿ   

ಜಮಖಂಡಿ: ಬೆಂಗಳೂರಿನ ಎಸ್‌ಬಿಎಂ ಹಾಗೂ ಮೂಡಬಿದ್ರಿಯ ಆಳ್ವಾಸ್ ತಂಡಗಳು ತಾಲ್ಲೂಕಿನ ಕುಂಚನೂರ ಗ್ರಾಮದ ನ್ಯೂ ಮಹಾದೇವ ಯುವಕ ಮಂಡಳ ಆಶ್ರಯದಲ್ಲಿ ನಡೆದ ಅಂತರ ರಾಜ್ಯ ಕಬಡ್ಡಿ ಟೂರ್ನಿಯಲ್ಲಿ ಮಂಗಳವಾರ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದ ಪ್ರಶಸ್ತಿಯನ್ನು ಗೆದ್ದುಕೊಂಡವು.

ಪುರುಷರ ವಿಭಾಗದ ಟೂರ್ನಿಯ ಫೈನಲ್‌ನಲ್ಲಿ ಬೆಂಗಳೂರಿನ ಎಸ್‌ಬಿಎಂ ತಂಡ 24-11ರಿಂದ  ನಾಸಿಕ್‌ನ ಆರ್ಮಿ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಬಾಚಿಕೊಂಡಿತು. ಪಂದ್ಯದ ಪ್ರಥಮಾರ್ಧದಲ್ಲಿ 14-7ರಿಂದ ಮುನ್ನಡೆ ಸಾಧಿಸಿದ್ದ ಎಸ್‌ಬಿಎಂ ತಂಡ ಯಾವುದೇ ಹಂತದಲ್ಲಿ ಪಂದ್ಯದ ಮೇಲಿನ ಹಿಡಿತವನ್ನು ಸಡಿಲಗೊಳಿಸಲಿಲ್ಲ.

ಅರ್ಜುನ ಪ್ರಶಸ್ತಿ ವಿಜೇತ, ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ.ರಮೇಶ ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಮೂರ್ತಿ ಅವರ ಜಾಣ್ಮೆಯ ಆಟದಿಂದ ಎಸ್‌ಬಿಐ ಗೆಲುವು ಸುಲಭವಾಯಿತು.

ಮಹಿಳೆಯರ ವಿಭಾಗದಲ್ಲಿ ನೀರಸವಾಗಿದ್ದ ಫೈನಲ್ ಪಂದ್ಯದಲ್ಲಿ ಆಳ್ವಾಸ್ ತಂಡ 11-4ರಿಂದ   ಕಾರವಾರದ ಕಾತ್ಯಾಯಿನಿ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಪಂದ್ಯದ ಪ್ರಥಮಾರ್ಧದಲ್ಲಿ 7-1ರಿಂದ ಆಳ್ವಾಸ್ ಮುನ್ನಡೆ ಸಾಧಿಸಿತ್ತು. ಆಳ್ವಾಸ್ ತಂಡದ ನಾಯಕಿ ಹಾಗೂ ಜಪಾನ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿರುವ ವನಿತಾ ಕೆ.ಎಸ್ ಗೆಲುವಿನ ರೂವಾರಿ ಎನಿಸಿದರು.

ಪುರುಷರ ವಿಭಾಗದಲ್ಲಿ ಬೆಂಗಳೂರಿನ ಎಸ್‌ಬಿಎಂ ತಂಡದ ಗೋಪಾಲಪ್ಪ ಉತ್ತಮ ಆಟಗಾರ, ನಾಸಿಕ್‌ನ ಆರ್ಮಿ ತಂಡದ ಹರೀಶ ಉತ್ತಮ ಹಿಡಿತಗಾರ ಹಾಗೂ ಅದೇ ತಂಡದ ಸುದೇಶ ಸರ್ವೋತ್ತಮ ಆಟಗಾರ ಪ್ರಶಸ್ತಿಗೆ ಪಾತ್ರರಾದರು.

ಮಹಿಳೆಯರ ವಿಭಾಗದಲ್ಲಿ ಮೂಡಬಿದ್ರಿಯ ಆಳ್ವಾಸ್ ತಂಡದ ವನಿತಾ ಕೆ.ಎಸ್. ಸರ್ವೋತ್ತಮ ಆಟಗಾರ್ತಿ, ಪುತ್ತೂರಿನ ಸೇಂಟ್ ಫಿಲೋಮಿನಾ ತಂಡದ ನವ್ಯಶ್ರೀ ಉತ್ತಮ ಹಿಡಿತಗಾರ್ತಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.