ADVERTISEMENT

ಏಕಲವ್ಯ ಪ್ರಶಸ್ತಿ: ಸೋಮವಾರ ಪರಿಶೀಲನಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಏಕಲವ್ಯ ಪ್ರಶಸ್ತಿಗಾಗಿ ರೋಷನ್ ಫರಾರೋ (ಬಾಡಿ ಬಿಲ್ಡಿಂಗ್), ಎಸ್.ನವೀನ್ (ಕರಾಟೆ) ಹಾಗೂ ಪಿ.ಸೋಮಶೇಖರ್ (ಅಂಗವಿಕಲ ಕ್ರೀಡಾಪಟು) ಸಲ್ಲಿಸಿದ್ದ ದಾಖಲೆಗಳ ವಿವಾದ ಸಂಬಂಧ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಪರಿಶೀಲನಾ ಸಮಿತಿ ಸೋಮವಾರ ಸಭೆ ಸೇರಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ಈ ವಿಷಯವನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್.ಪೆರುಮಾಳ್ `ಪ್ರಜಾವಾಣಿ~ಗೆ ತಿಳಿಸಿದರು.
`ಈಗಾಗಲೇ ಈ ಕ್ರೀಡಾಪಟುಗಳನ್ನು ಕ್ರೀಡಾ ಇಲಾಖೆಯ ಇಬ್ಬರು ಸದಸ್ಯರ ಸಮಿತಿ ವಿಚಾರಣೆಗೆ ಒಳಪಡಿಸಿ ದಾಖಲೆ ಪರಿಶೀಲಿಸಿದೆ. ಈ ಮೂರೂ ಮಂದಿ ಜಂಟಿ ನಿರ್ದೇಶಕ ಹಾಗೂ ಉಪ ಕಾರ್ಯದರ್ಶಿ ಸಾರಥ್ಯದ ಸಮಿತಿ ಮುಂದೆ ಮಂಗಳವಾರ ಹಾಜರಾಗಿದ್ದರು. ಈ ಸಂಬಂಧದ ಸ್ವತಂತ್ರ ವರದಿಯನ್ನು ಪರಿಶೀಲನಾ ಸಮಿತಿಗೆ ಸಲ್ಲಿಸಲಿದ್ದಾರೆ. ಸೋಮವಾರ ಈ ಸಮಿತಿ ಸಭೆ ಸೇರಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ~ ಎಂದು ಅವರು ಹೇಳಿದರು.

`ಪರಿಶೀಲನಾ ಸಮಿತಿಯಲ್ಲಿ ಆರು ಮಂದಿ ಇದ್ದಾರೆ. ಅಗತ್ಯಬಿದ್ದರೆ ಈ ಸಭೆಗೆ ಜಂಟಿ ನಿರ್ದೇಶಕ ಹಾಗೂ ಉಪ ಕಾರ್ಯದರ್ಶಿಯನ್ನು ಆಹ್ವಾನಿಸಿ ಹೆಚ್ಚಿನ ಮಾಹಿತಿ ಪಡೆಯಲಾಗುವುದು~ ಎಂದು ಪೆರುಮಾಳ್ ನುಡಿದರು.

ಇಲಾಖೆಯು ಮೊದಲು ಪ್ರಕಟಿಸಿದ ಪ್ರಶಸ್ತಿ ಪಟ್ಟಿಯಲ್ಲಿದ್ದ ಈ ಮೂರು ಮಂದಿ ಕ್ರೀಡಾಪಟುಗಳು ಸಲ್ಲಿಸಿರುವ ದಾಖಲೆಗಳು ಅನುಮಾನಕ್ಕೆ ಕಾರಣವಾಗಿದ್ದರಿಂದ ತಡೆಹಿಡಿಯಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.