ADVERTISEMENT

ಏಷ್ಯಾಕಪ್‌ ಹಾಕಿ: ಭಾರತಕ್ಕೆ ಜಯದ ಜಪ

ಪಿಟಿಐ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST
ಏಷ್ಯಾಕಪ್‌ ಹಾಕಿ: ಭಾರತಕ್ಕೆ ಜಯದ ಜಪ
ಏಷ್ಯಾಕಪ್‌ ಹಾಕಿ: ಭಾರತಕ್ಕೆ ಜಯದ ಜಪ   

ಢಾಕಾ (ಪಿಟಿಐ): ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವಿನ ಸಿಹಿ ಸವಿದು ವಿಶ್ವಾಸದಿಂದ ಬೀಗುತ್ತಿರುವ ಭಾರತ ಪುರುಷರ ತಂಡದವರು ಈಗ ಮತ್ತೊಂದು ಸವಾಲಿಗೆ ಸನ್ನದ್ಧರಾಗಿದ್ದಾರೆ.

ಬುಧವಾರ ನಡೆಯುವ 10ನೇ ಏಷ್ಯಾಕಪ್‌ ಟೂರ್ನಿಯ ಸೂಪರ್‌ 4 ಹಂತದ ತನ್ನ ಮೊದಲ ಪಂದ್ಯದಲ್ಲಿ ಮನ್‌ಪ್ರೀತ್‌ ಸಿಂಗ್‌ ಬಳಗ ದಕ್ಷಿಣ ಕೊರಿಯಾ ವಿರುದ್ಧ ಆಡಲಿದೆ.

ಶೋರ್ಡ್‌ ಮ್ಯಾರಿಜ್‌, ಮುಖ್ಯ ಕೋಚ್‌ ಆಗಿ ನೇಮಕವಾದ ಬಳಿಕ ಆಡಿದ ಮೊದಲ ಮಹತ್ವದ ಟೂರ್ನಿಯಲ್ಲಿ ಮೋಡಿ ಮಾಡುತ್ತಿರುವ ಭಾರತ ತಂಡದವರು ಗೆಲುವಿನ ಓಟ ಮುಂದುವರಿಸುವ ವಿಶ್ವಾಸ ಹೊಂದಿದ್ದಾರೆ.

ADVERTISEMENT

ರಮಣದೀಪ್‌ ಸಿಂಗ್‌, ಆಕಾಶ್‌ದೀಪ್‌ ಸಿಂಗ್‌, ಲಲಿತ್‌ ಉಪಾಧ್ಯಾಯ ಮತ್ತು ಚಿಂಗ್ಲೆನ್ಸನಾ ಸಿಂಗ್‌ ಅವರು ಮುಂಚೂಣಿ ವಿಭಾಗದಲ್ಲಿ ಶ್ರೇಷ್ಠ ಸಾಮರ್ಥ್ಯ ತೋರುತ್ತಿರುವುದು ತಂಡಕ್ಕೆ ವರವಾಗಿ ಪರಿಣಮಿಸಿದೆ.

ಹಿಂದಿನ ಪಂದ್ಯಗಳಲ್ಲಿ ಕೈಚಳಕ ತೋರಿದ್ದ ಇವರು ಮನಮೋಹಕ ಫೀಲ್ಡ್‌ ಗೋಲುಗಳನ್ನು ದಾಖಲಿಸಿ ಅಭಿಮಾನಿಗಳನ್ನು ರಂಜಿಸಿದ್ದರು.

ಮಿಡ್‌ಫೀಲ್ಡ್‌ ವಿಭಾಗದಲ್ಲಿ ತಂಡಕ್ಕೆ ಅನುಭವಿ ಸರ್ದಾರ್‌ ಸಿಂಗ್‌ ಮತ್ತು ನಾಯಕ ಮನ್‌ಪ್ರೀತ್‌ ಅವರ ಬಲ ಇದೆ.

ಬ್ಯಾಕ್‌ಲೈನ್‌ನಲ್ಲಿ ಆಡುವ ಅಮಿತ್‌ ರೋಹಿದಾಸ್‌, ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ದಿಪ್ಸನ್‌ ಟರ್ಕಿ ಅವರೂ ಕೊರಿಯಾ ತಂಡಕ್ಕೆ ಸವಾಲಾಗಬಲ್ಲ ಸಮರ್ಥರಾಗಿದ್ದಾರೆ.

ಆದರೆ ತಂಡ ಹಿಂದಿನ ಪಂದ್ಯಗಳಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಲು ವಿಫಲವಾಗಿತ್ತು. ಇಂಥ ತಪ್ಪುಗಳು ಮರುಕಳಿಸದಂತೆ ತಂಡ ಎಚ್ಚರವಹಿಸಬೇಕಿದೆ.

ಭಾರತ ತಂಡ ಮೊದಲ ಮೂರು ಪಂದ್ಯಗಳಲ್ಲಿ ಜಪಾನ್‌, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ದೊಡ್ಡ ಅಂತರದಿಂದ ಗೆದ್ದಿತ್ತು. ಇದನ್ನು ಗಮನಿಸಿದರೆ ಕೊರಿಯಾ ತಂಡ ಕೂಡ ಮನ್‌ಪ್ರೀತ್‌ ಪಡೆಗೆ ಸುಲಭ ತುತ್ತಾಗುವ ಸಾಧ್ಯತೆ ಇದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತ 6ನೇ ಸ್ಥಾನದಲ್ಲಿದ್ದರೆ, ಕೊರಿಯಾ 13ನೇ ಸ್ಥಾನ ಹೊಂದಿದೆ. ಇದು ಮನ್‌ಪ್ರೀತ್ ಬಳಗದ ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ.

ಸೂರಜ್‌ ಕರ್ಕೇರ ಮತ್ತು ಆಕಾಶ್‌ ಚಿಕ್ಟೆ, ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದು ಅನುಭವಿ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಅನುಪಸ್ಥಿತಿ ಕಾಡದಂತೆ ನೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.