ಪಡುಬಿದ್ರಿ: ತೆಂಕ ಎರ್ಮಾಳು ಪಡು ಕಡಲಕಿನಾರೆ ಬಳಿ ಶುಕ್ರವಾರ ತಡರಾತ್ರಿ ರಿಕ್ಷಾ-ಬೈಕ್ ಅಪಘಾತದಲ್ಲಿ ಬಡಾ ಗ್ರಾಮದ ಭಾರತ್ ನಗರ ನಿವಾಸಿ ಮತ್ತು ಉದಯೋನ್ಮುಖ ಕಬಡ್ಡಿ ಆಟಗಾರ ಸುಜಿತ್ ಆರ್. ಮೆಂಡನ್ (21) ಮೃತಪಟ್ಟಿದ್ದಾರೆ.
ತೆಂಕ ಎರ್ಮಾಳು ಅಮೀನ್ ಮೂಲಸ್ಥಾನದ ಬಳಿ ಸುಜಿತ್ ಅವರು ತೆರಳುತ್ತಿದ್ದ ಬೈಕ್ಗೆ ಪಡುಬಿದ್ರಿಗೆ ಬರುತ್ತಿದ್ದ ರಿಕ್ಷಾ ಡಿಕ್ಕಿ ಹೊಡೆದಿತ್ತು. ಸುಜಿತ್ ಅವರು ಸಮುದ್ರ ಕಿನಾರೆಯ ಕಲ್ಲಿನ ಮೇಲೆ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿದ್ದವು. ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟರು. ಅವರು ಮೀನುಗಾರರಾದ ರಮೇಶ್ ಮೆಂಡನ್, ಯಶೋಧಾ ದಂಪತಿಯ ಪುತ್ರ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತಮ ಕಬಡ್ಡಿ ಆಟಗಾರ: ಶಾಲಾ ದಿನಗಳಲ್ಲಿಯೇ ಸುಜಿತ್ ಉತ್ತಮ ಕಬಡ್ಡಿ ಆಟಗಾರನಾಗಿದ್ದರು. ಉಡುಪಿ ತಂಡವನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದರು. ಪಂಜಾಬ್ನಲ್ಲಿ ನಡೆದ ಟೂರ್ನಿಯಲ್ಲಿಯೂ ಅವರು ಕರ್ನಾಟಕದ ತಂಡದಲ್ಲಿ ಆಡಿದ್ದರು. ಬಿಡುವಿನ ವೇಳೆಯಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದರು. ಸ್ಥಳೀಯ ಕಬಡ್ಡಿ ತಂಡಗಳ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದರು. ಹೊರ ಜಿಲ್ಲೆಗಳ ಆಹ್ವಾನಿತ ಕ್ಲಬ್ ತಂಡದಲ್ಲಿಯೂ ಪಾಲ್ಗೊಳ್ಳುತ್ತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.