ಬೆಂಗಳೂರು: ಅಂಧರ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ತಂಡಕ್ಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿನಂದನೆ ಸಲ್ಲಿಸಿ, ತಂಡದಲ್ಲಿದ್ದ ಕರ್ನಾಟಕದ ಮೂವರು ಆಟಗಾರರಿಗೆ ತಲಾ ಮೂರು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.
`ಕಾವೇರಿ'ಯಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಕರ್ನಾಟಕದ ಆಟಗಾರರಿಗೆ ಈ ಭರವಸೆ ನೀಡಿದರು. ಶೇಖರ್ ನಾಯ್ಕ, ಎಸ್. ರವಿ ಮತ್ತು ಪ್ರಕಾಶ್ ಜಯರಾಮಯ್ಯ ಅವರು ಭಾರತ ತಂಡದಲ್ಲಿರುವ ಕನ್ನಡಿಗರು.
ಧಾರವಾಡದಲ್ಲಿ ಅಕ್ಟೋಬರ್ನಲ್ಲಿ ನಡೆದ ಭಾರತ ತಂಡದ ಆಯ್ಕೆ ವೇಳೆ ರಾಜ್ಯದ ಆಟಗಾರರಿಗೆ ತಲಾ ಐದು ಲಕ್ಷ ರೂ. ನೀಡುವುದಾಗಿ ಅವರು ಭರವಸೆ ನೀಡಿದ್ದರು. ಆದರೆ, ಶುಕ್ರವಾರ ನಡೆದ ಸಮಾರಂಭದಲ್ಲಿ ತಲಾ ಮೂರು ಲಕ್ಷ ರೂ. ಕೊಡುವುದಾಗಿ ಭರವಸೆ ನೀಡಿದರು.
ಕ್ರೀಡಾಂಗಣ ನೀಡಿ:
`ಅಂಧರ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲು ಕ್ರೀಡಾಂಗಣದ ಕೊರತೆಯಿದೆ. ಆದ್ದರಿಂದ ಅಂಧರಿಗೆ ನೆರವಾಗುವ ಉದ್ದೇಶದಿಂದ ಕ್ರೀಡಾಂಗಣ ನಿರ್ಮಿಸಿಕೊಡಿ. ವಿಶ್ವಕಪ್ಗೆ ಚಿನ್ನಸ್ವಾಮಿ ಕ್ರೀಡಾಂಗಣವನ್ನು ನೀಡದ ಕಾರಣ ಸಾಕಷ್ಟು ಸಮಸ್ಯೆಯಾಯಿತು. ಆದ ಕಾರಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ವಿಶ್ವ ಅಂಧರ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷ ಜಿ.ಕೆ. ಮಹಾಂತೇಶ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.