ADVERTISEMENT

ಕರ್ನಾಟಕ ತಂಡಗಳಿಗೆ ನಿರಾಸೆ

ಫೆಡರೇಷನ್ ಕಪ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್; ದೆಹಲಿಗೆ ಜಯ

​ಪ್ರಜಾವಾಣಿ ವಾರ್ತೆ
Published 31 ಜನವರಿ 2013, 19:39 IST
Last Updated 31 ಜನವರಿ 2013, 19:39 IST
ಬೆಂಗಳೂರಿನಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಗುರುವಾರದ ಪಂದ್ಯದಲ್ಲಿ ಕರ್ನಾಟಕದ ವಿಜಯಾ ಬ್ಯಾಂಕ್ ತಂಡದ ಅರವಿಂದ್ ಹಿಡಿತದಲ್ಲಿದ್ದ ಚೆಂಡನ್ನು ಕಸಿದುಕೊಳ್ಳಲು ಇಂಡಿಯನ್ ಏರ್‌ಫೋರ್ಸ್ ಆಟಗಾರರು ಯತ್ನಿಸಿದರು	 -ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಗುರುವಾರದ ಪಂದ್ಯದಲ್ಲಿ ಕರ್ನಾಟಕದ ವಿಜಯಾ ಬ್ಯಾಂಕ್ ತಂಡದ ಅರವಿಂದ್ ಹಿಡಿತದಲ್ಲಿದ್ದ ಚೆಂಡನ್ನು ಕಸಿದುಕೊಳ್ಳಲು ಇಂಡಿಯನ್ ಏರ್‌ಫೋರ್ಸ್ ಆಟಗಾರರು ಯತ್ನಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರ್ನಾಟಕದ ಪುರುಷ ಹಾಗೂ ಮಹಿಳಾ ತಂಡಗಳು 27ನೇ ರಾಷ್ಟ್ರೀಯ ಫೆಡರೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಎರಡನೇ ಪಂದ್ಯದಲ್ಲಿ ಸೋಲು ಕಂಡವು.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಇಂಡಿಯನ್ ಏರ್‌ಫೋರ್ಸ್ (ಐಎಎಫ್) 85-76 ಪಾಯಿಂಟ್‌ಗಳಿಂದ ಆತಿಥೇಯ ವಿಜಯಾ ಬ್ಯಾಂಕ್ ತಂಡವನ್ನು ಸೋಲಿಸಿತು. ವಿಜಯಿ ತಂಡದ ನರೀಂದರ್ ಗ್ರೇವಾಲ್ ಹಾಗೂ ಜೋಗಿಂದರ್ ಸಿಂಗ್ ಕ್ರಮವಾಗಿ ತಲಾ 31 ಮತ್ತು 24 ಅಂಕಗಳನ್ನು ಕಲೆ ಹಾಕಿದರು.

ವಿಜಯಾ ಬ್ಯಾಂಕ್‌ನ ಶ್ರೀನಿವಾಸ್ ನಾಯ್ಕ (15), ಅರವಿಂದ್ (29) ಹಾಗೂ ಬಸವರಾಜ್ (12) ಪಾಯಿಂಟ್‌ಗಳನ್ನು ಗಳಿಸಿದರು. ಆದರೆ, ತಂಡವನ್ನು ಗೆಲುವಿನ        ಹಾದಿಗೆ ಮುಟ್ಟಿಸಲು ಸಾಧ್ಯವಾಗಲಿಲ್ಲ. ಐಎಎಫ್         ಪ್ರಥಮಾರ್ಧದ ಮುಕ್ತಾಯದ ವೇಳೆಗೆ 45-33ರಲ್ಲಿ ಮುನ್ನಡೆ ಹೊಂದಿತ್ತು.

ಪುರುಷರ ವಿಭಾಗದ ಇತರ ಪಂದ್ಯಗಳಲ್ಲಿ ಕಸ್ಟಮ್ಸ ಹಾಗೂ ಸೆಂಟ್ರಲ್ ಎಕ್ಸೈಜ್ ತಂಡ 88-63 ಪಾಯಿಂಟ್‌ಗಳಿಂದ ದೆಹಲಿಯ ಕ್ಯಾಪ್ಟನ್ಸ್ ಕ್ಲಬ್ ತಂಡದ ಮೇಲೂ, ಚೆನ್ನೈನ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ 80-45ರಲ್ಲಿ ಸೌತ್ ಸೆಂಟ್ರಲ್ ರೈಲ್ವೆ ವಿರುದ್ಧವೂ ಗೆಲುವು ಸಾಧಿಸಿದವು.

ಬುಧವಾರ ತಡರಾತ್ರಿ ನಡೆದ ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಐಎಎಫ್ 62-53 ಅಂಕಗಳಿಂದ ಪಂಜಾಬ್ ತಂಡವನ್ನು ಸೋಲಿಸಿತು. ವಿಜಯಿ ತಂಡ ದ್ವಿತೀಯಾರ್ಧದ ವೇಳೆಗೆ 32-25ರಲ್ಲಿ ಮುನ್ನಡೆ ಗಳಿಸಿತ್ತು.


ಮಹಿಳಾ ತಂಡಕ್ಕೂ ನಿರಾಸೆ: ಮೊದಲ ಪಂದ್ಯದಲ್ಲಿ ಕೇರಳದ ಎದುರು ಗೆಲುವು ಸಾಧಿಸಿ ಉತ್ತಮ ಆರಂಭ ಪಡೆದಿದ್ದ ಕರ್ನಾಟಕದ ಆಟಗಾರ್ತಿಯರು ಎರಡನೇ ಪಂದ್ಯದಲ್ಲಿ 77-82ರಲ್ಲಿ ದೆಹಲಿ ಎದುರು ಪರಾಭವಗೊಂಡರು. ಕರ್ನಾಟಕದ ನವನೀತಾ (23 ಪಾಯಿಂಟ್) ಸವಿತಾ (16) ಹಾಗೂ ರೋಷಿಣಿ (16) ಕಲೆ ಹಾಕಿ ಗಮನ ಸೆಳೆದರು. ದೆಹಲಿ ದ್ವಿತೀಯಾರ್ಧದ ವೇಳೆಗೆ ಎರಡು ಅಂಕಗಳಿಂದಷ್ಟೇ ಮುನ್ನಡೆಯಲ್ಲಿತ್ತು. ನಂತರ ಚುರುಕಿನ ಆಟವಾಡಿ ಗೆಲುವು ಪಡೆಯಿತಲ್ಲದೇ, ಗೆಲುವಿನ ಅಂತರ ಹೆಚ್ಚಿಸಿಕೊಂಡಿತು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಸೌತ್ ಸೆಂಟ್ರಲ್ ರೈಲ್ವೆ 79-68ರಲ್ಲಿ ಕೇರಳದ ಮೇಲೂ, ಮಹಾರಾಷ್ಟ್ರ 64-57ರಲ್ಲಿ ಆಂಧ್ರಪ್ರದೇಶ ವಿರುದ್ಧವೂ, ತಮಿಳುನಾಡು 64-57ರಲ್ಲಿ ಛತ್ತೀಸಗಡ ಎದುರೂ ಜಯ ಸಾಧಿಸಿತು. ಇನ್ನೊಂದು ಪಂದ್ಯದಲ್ಲಿ ಒಎನ್‌ಜಿಸಿ 96-59 ಜಿಂದ್ ಜಿಲ್ಲಾ ತಂಡವನ್ನು ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT