ಕೋಲ್ಕತ್ತ: ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡದ ನಾಯಕತ್ವವನ್ನು ದಿನೇಶ್ ಕಾರ್ತಿಕ್ ಅವರಿಗೆ ನೀಡಿರುವುದನ್ನು ಮಧ್ಯಮವೇಗಿ ಆರ್. ವಿನಯಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ.
‘ತಮಿಳುನಾಡು ತಂಡಕ್ಕೆ ಹೆಚ್ಚು ಕಾಲ ಕಾರ್ತಿಕ್ ಅವರು ನಾಯಕರಾಗಿರಲಿಲ್ಲ. ಆದರೆ ಅವರು ಕೆಕೆಆರ್ ತಂಡವನ್ನು ಮುನ್ನಡೆಸಲು ಅಸಮರ್ಥರೆಂದು ಹೇಳಲಾಗುವುದಿಲ್ಲ. ಅವರಲ್ಲಿ ನಾಯಕತ್ವದ ಗುಣಗಳು ಇವೆ. ಕಾರ್ತಿಕ್ ನೇತೃತ್ವದಲ್ಲಿ ನಮ್ಮ ತಂಡವು ಉತ್ತಮ ಸಾಧನೆ ಮಾಡುವುದು ಖಚಿತ’ ಎಂದು ಕರ್ನಾಟಕ ಕ್ರಿಕೆಟ್ ತಂಡದ ನಾಯಕರೂ ಆಗಿರುವ ವಿನಯ್ ಹೇಳಿದ್ದಾರೆ.
2009-10 ರಲ್ಲಿ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟ್ರೋಫಿ ಟೂರ್ನಿಯಲ್ಲಿ ಗೆದ್ದಿದ್ದ ತಮಿಳುನಾಡು ತಂಡವನ್ನು ಕಾರ್ತಿಕ್ ಮುನ್ನಡೆಸಿದ್ದರು. ಈಚೆಗೆ ಶ್ರೀಲಂಕಾದಲ್ಲಿ ನಡೆದಿದ್ದ ನಿದಾಸ್ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ನ ಕೊನೆಯ ಎಸೆತದಲ್ಲಿ ಸಿಕ್ಸರ್ ಹೊಡೆದು ತಂಡಕ್ಕೆ ಜಯದ ಕಾಣಿಕೆ ನೀಡಿದ್ದರು.
‘ದಿನೇಶ್ ಅವರು ಉತ್ತಮ ಆಟಗಾರನಷ್ಟೇ ಅಲ್ಲ. ಶ್ರೇಷ್ಠ ಗುಣಗಳಿರುವ ವ್ಯಕ್ತಿಯೂ ಹೌದು. ಅವರೊಂದಿಗೆ ಬಹಳಷ್ಟು ಪಂದ್ಯಗಳನ್ನು ಆಡಿದ್ದೇನೆ. ನಾವು ಒಳ್ಳೆಯ ಸ್ನೇಹಿತರು’ ಎಂದು ವಿನಯ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.