ADVERTISEMENT

ಕೊಟ್ಟಂಗಡಕ್ಕೆ ಒಲಿದ ಅದೃಷ್ಟ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST

ನಾಪೋಕ್ಲು (ಕೊಡಗು ಜಿಲ್ಲೆ): ಇಲ್ಲಿನ ಜನರಲ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ಕುಲ್ಲೇಟಿರ ಹಾಕಿ ಉತ್ಸವದಲ್ಲಿ ಗುರುವಾರ, ಪಾಲೆಯಡ ತಂಡದ ವಿರುದ್ಧ ಕಲ್ಮಾಡಂಡ ತಂಡವು 4–1 ಅಂತರದಲ್ಲಿ ಜಯಿಸಿತು. ಕಲ್ಮಾಡಂಡ ಪರವಾಗಿ ತರುಣ್‌ ತಿಮ್ಮಯ್ಯ, ಚಮನ್, ಸೊಮಣ್ಣ ಹಾಗೂ ಕವನ್ ತಲಾ ಒಂದೊಂದು ಗೋಲು ಗಳಿಸಿದರು.

ಕೈಬುಲಿರ ತಂಡದ ವಿರುದ್ಧ ಮಾಳೇಟಿರ (ಕುಕ್ಲೂರು) ತಂಡವು ಜಯ ಗಳಿಸಿತು. ಅಜ್ಜಿಕುಟ್ಟೀರ ವಿರುದ್ಧ ಕಂಗಂಡ ತಂಡವು 5–0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು. ಕಂಗಂಡ ಪರವಾಗಿ ಪುನೀತ್‌ ಮುತ್ತಪ್ಪ ಎರಡು, ಕವನ್ ಕಾಳಪ್ಪ, ಮಿಥುನ್‌ ಮುದ್ದಯ್ಯ, ರಂಜನ್‌ ಅಪ್ಪಚ್ಚು ತಲಾ ಒಂದೊಂದು ಗೋಲು ಹೊಡೆದು ತಂಡಕ್ಕೆ ನೆರವಾದರು.

ಅಪ್ಪಡೇರಂಡ ವಿರುದ್ಧ ಕಲ್ಯಾಟಂಡ ತಂಡವೂ, ಚೆರಿಮಂಡ ವಿರುದ್ಧ ಬೊಳ್ಳಂಡ ತಂಡವು ಜಯಿಸಿತು. ಕೊಟ್ಟಂಗಡ ಮತ್ತು ಮಾತ್ರಂಡ ತಂಡಗಳು ನಿಗದಿತ ಸಮಯದಲ್ಲಿ ಸಮಬಲದ ಹೋರಾಟ ನಡೆಸಿದವು. ಎರಡು ತಂಡಗಳು ಗೋಲು ದಾಖಲಿಸಲಿಲ್ಲ. ನಂತರ, ಟೈಬ್ರೇಕರ್‌ನಲ್ಲಿ ಕೊಟ್ಟಂಗಡ ತಂಡಕ್ಕೆ (6–4) ಅದೃಷ್ಟ ಒಲಿಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.