ಬೆಂಗಳೂರು: ಆರ್ಬಿಐ ಹಾಗೂ ರೈಲ್ವೆ ಗಾಲಿ ಕಾರ್ಖಾನೆ ತಂಡಗಳು ಬಿಇಎಲ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದ `ಕೊಡವ ಕಪ್~ 33ನೇ ವಾರ್ಷಿಕ ರಾಜ್ಯಮಟ್ಟದ ಹಾಕಿ ಟೂರ್ನಿ ಪಂದ್ಯದಲ್ಲಿ ಜಯಗಳಿಸಿ ಶುಭಾರಂಭ ಮಾಡಿದವು.
ಜಾಲಹಳ್ಳಿ ಬಿಇಎಲ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಟೂರ್ನಿ ಮೊದಲ ಪಂದ್ಯದಲ್ಲಿ ಆರ್ಬಿಐ ತಂಡ 6-3 ಗೋಲುಗಳಿಂದ ನವೀನ್ ಹಾಕಿ ಕ್ಲಬ್ ತಂಡವನ್ನು ಮಣಿಸಿತು.
ವಿರಾಮದ ವೇಳೆಗೆ ಉಭಯ ತಂಡದವರು ತಲಾ ಎರಡು ಗೋಲು ಗಳಿಸಿದ್ದರು. ವಿಜಯಿ ತಂಡದ ಬೆಳ್ಳಿಯಪ್ಪ, ಸಂತೋಷ್ (2), ತನು ನಂಜಪ್ಪ (2), ದರ್ಶನ್ ಹಾಗೂ ಎದುರಾಳಿ ತಂಡದ ಸುಜಿತ್, ಧನಂಜಯ್, ಪ್ರವೀಣ್ ಗೋಲು ತಂದಿತ್ತರು.
ಇನ್ನೊಂದು ಪಂದ್ಯದಲ್ಲಿ ರೈಲ್ವೆ ಗಾಲಿ ಕಾರ್ಖಾನೆ ತಂಡ 1-0 ಗೋಲಿನಿಂದ ವಿದ್ಯಾರಣ್ಯಪುರ ಹಾಕಿ ಕ್ಲಬ್ ತಂಡದ ವಿರುದ್ಧ ಪ್ರಯಾಸದ ವಿಜಯ ಸಾಧಿಸಿತು. ವಿಜಯದ ಗೋಲು 52ನೇ ನಿಮಿಷದಲ್ಲಿ ಪ್ರದೀಪ್ ಮೂಲಕ ಬಂತು.
ಭಾನುವಾರ ಮಧ್ಯಾಹ್ನ 2-30ಕ್ಕೆ ಬಿಇಎಲ್-ಬಿಸಿವೈಎ ಆನಂತರ 3-30ಕ್ಕೆ ಎಂಎಲ್ಐ-ಎಬಿಎಚ್ಎ ನಡುವೆ ಪಂದ್ಯ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.