ನವದೆಹಲಿ (ಐಎಎನ್ಎಸ್): ಭಾರತದ ಉದಯೋನ್ಮುಖ ಆಟಗಾರ್ತಿ ಪಿ.ವಿ. ಸಿಂಧು 2014ರ ಜನವರಿಯಲ್ಲಿ ನಡೆಯಲಿರುವ ಕೊರಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.
‘ನನ್ನ ತರಬೇತುದಾರರಾದ ಪುಲ್ಲೇಲ ಗೋಪಿಚಂದ್ ಅವರು ಟೂರ್ನಿಯಲ್ಲಿ ಭಾಗವಹಿಸದಂತೆ ತಿಳಿಸಿದ್ದಾರೆ. ಅವರ ಸಲಹೆಯಂತೆ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಆದರೆ ಮಲೇಷ್ಯಾ ಓಪನ್ ಮತ್ತು ಇಂಡಿಯಾ ಗ್ರ್ಯಾನ್ ಪ್ರಿ ಟೂರ್ನಿಗಳಲ್ಲಿ ಆಡಲಿದ್ದೇನೆ’ ಎಂದು ಹೇಳಿದ್ದಾರೆ.
ಇದರೊಂದಿಗೆ ಭಾರತದ ಪ್ರಮುಖ ಮೂರು ಸ್ಪರ್ಧಿಗಳು ಈ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದಂತಾಗಿದೆ. ಈ ಮೊದಲು ಸೈನಾ ನೆಹ್ವಾಲ್ ಅನಾರೋಗ್ಯದ ಕಾರಣ ಹಾಗೂ ಪರುಪಳ್ಳಿ ಕಶ್ಯಪ್ ಭುಜದ ನೋವಿನ ಕಾರಣ ಹಿಂದೆ ಸರಿದಿದ್ದರು. ಸೈನಾ ಇಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ ಷಿಪ್ನಲ್ಲಿಯೂ ಆಡಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.