ನವದೆಹಲಿ: ಉದ್ದೀಪನ ಔಷಧಿ ಸೇವನೆಗೆ ಸಂಬಂಧಿಸಿ ಕ್ರಿಕೆಟ್ ಆಟಗಾರರನ್ನು ಕೂಡ ಪರೀಕ್ಷೆಗೆ ಒಳಪಡಿಸಬೇಕು ಎಂದು ಕೇಂದ್ರ ಸರ್ಕಾರ ರಾಷ್ಟ್ರೀಯ ಉದ್ದೀಪನ ಔಷಧಿ ಪತ್ತೆ ಘಟಕಕ್ಕೆ ಸೂಚಿಸಿದೆ.
ಅಂತರರಾಷ್ಟ್ರೀಯ ಉದ್ದೀಪನ ಔಷಧಿ ನಿಷೇಧ ಘಟಕದ (ವಾಡಾ) ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೂಡ ನಾಡಾಗೆ ತಾಕೀತು ಮಾಡಿದೆ. ಉದ್ದೀಪನ ಮದ್ದು ಸೇವನೆಗೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಕಾರಣ ಈ ಕ್ರಮಕ್ಕೆ ಕ್ರೀಡಾ ಇಲಾಖೆ ಮುಂದಾಗಿದೆ.
ಉದ್ದೀಪನ ಮದ್ದು ನಿಷೇಧಕ್ಕೆ ಸಂಬಂಧಿಸಿ ವಾಡಾದಿಂದ ಪತ್ರ ಬಂದಿದೆ ಎಂದು ಕ್ರೀಡಾ ಸಚಿವಾಲಯದ ನೂತನ ಕಾರ್ಯದರ್ಶಿ ರಾಹುಲ್ ಭಟ್ನಾಗರ್ ತಿಳಿಸಿದ್ದು ಇದರ ಬೆನ್ನಲ್ಲೇ ನಾಡಾ ಬಿಸಿಸಿಐನ ಆಡಳಿತ ಸಮಿತಿಗೆ ಪತ್ರ ಬರೆದಿದೆ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.
ಉದ್ದೀಪನ ಔಷಧಿ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸಲು ವಿಫಲವಾದರೆ ಭಾರತದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಾಡಾಗೆ ವಾಡಾ ಎಚ್ಚರಿಕೆ ನೀಡಿದೆ ಎಂದೂ ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.