ADVERTISEMENT

ಕ್ರೀಡಾಕೂಟ: ಪಂದ್ಯದ ವೇಳೆ ಗುದ್ದಾಟ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 17:35 IST
Last Updated 22 ಫೆಬ್ರುವರಿ 2011, 17:35 IST
ಕ್ರೀಡಾಕೂಟ: ಪಂದ್ಯದ ವೇಳೆ ಗುದ್ದಾಟ
ಕ್ರೀಡಾಕೂಟ: ಪಂದ್ಯದ ವೇಳೆ ಗುದ್ದಾಟ   

ರಾಂಚಿ (ಐಎಎನ್‌ಎಸ್/ಪಿಟಿಐ): ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ನೆಟ್‌ಬಾಲ್ ಪಂದ್ಯ ನಡೆಯುವ ವೇಳೆ ಎರಡು ರಾಜ್ಯಗಳ ತಂಡದ ಆಟಗಾರರು ಪರಸ್ಪರ ಕೈ ಕೈ ಮಿಲಾಯಿಸಿದ ಘಟನೆ ಬಗ್ಗೆ ವರದಿಯಾಗಿದೆ.

ಇಲ್ಲಿನ ಧನ್ದಾಬ್‌ನ ಬಳಿ ಇರುವ ಇಂಡಿಯನ್ ಶಾಲೆಯ ಮಿನಿಸ್ ಕ್ರೀಡಾಂಗಣದಲ್ಲಿ ಆಂಧ್ರಪ್ರದೇಶ ಹಾಗೂ ಜಾರ್ಖಂಡ್ ತಂಡಗಳ ನಡುವೆ ಮಂಗಳವಾರ ಪಂದ್ಯ ನಡೆಯುವ ವೇಳೆ ಈ ಘಟನೆ ಜರುಗಿದೆ.

ಪಾಯಿಂಟ್ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ತಂಡದ ಆಟಗಾರರ ಮಧ್ಯೆ ನಡೆದ ಮಾತಿನ ಚಕಮಕಿ ಈ ಘಟನೆಗೆ ಕಾರಣ ಎನ್ನಲಾಗಿದೆ. ಕೊನೆಗೆ ಒಂದು ಹಂತದಲ್ಲಿ ಉಭಯ ತಂಡದವರೂ ಕೈ ಕೈ ಮಿಲಾಯಿಸಿದ್ದರಿಂದ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಮಧ್ಯೆ ಪ್ರವೇಶಿಸಿದ ಮ್ಯಾಚ್ ರೆಫರಿ ಹಾಗೂ ಇತರ ಸಿಬ್ಬಂದಿ ವಾತಾವರಣವನ್ನು ತಿಳಿಗೊಳಿಸಿದರು. ಪಂದ್ಯವನ್ನು ಮುತ್ತೆ ಮುಂದೂಡಿದರು.

ಅಥ್ಲೀಟ್‌ಗಳ ನಡುವೆ ಘರ್ಷಣೆ: ಸೋಮವಾರ ರಾತ್ರಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ನಡೆದ ಇನ್ನೊಂದು ಘಟನೆಯಲ್ಲಿ ಪಾನಮತ್ತರಾಗಿದ್ದ ಇಬ್ಬರು ಅಥ್ಲೀಟ್‌ಗಳು ಘರ್ಷಣೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ಖೇಲ್ ಗೌನ್ ಕ್ರೀಡಾ ಗ್ರಾಮದಲ್ಲಿ ಸೋಮವಾರ ರಾತ್ರಿ 10.45ರ ಸುಮಾರಿಗೆ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಈ ಘಟನೆ ಜರುಗಿದೆ. ಪಾನಮತ್ತರಾಗಿದ್ದ ಸರ್ವಿಸಸ್‌ನ ಹಾಗೂ ಜಾರ್ಖಂಡ್‌ನ ಇಬ್ಬರೂ ಅಥ್ಲೀಟ್‌ಗಳು ಅನುಚಿತವಾಗಿ ವರ್ತಿಸಿದ್ದೆ ಘರ್ಷಣೆಗೆ ಕಾರಣ ಎಂದು ತಿಳಿದು ಬಂದಿದೆ.

ಗುದ್ದಾಟ ನಡೆದಾಗ ಇಬ್ಬರೂ ಆಥ್ಲೀಟ್‌ಗಳ ಮಧ್ಯೆ ಒಪ್ಪಂದಕ್ಕೆ ಮುಂದಾಗುವಂತೆ ಸೂಚಿಸಿದರೂ, ಆ ಅಥ್ಲೀಟ್‌ಗಳು ಸಂಧಾನಕ್ಕೆ ಒಪ್ಪಲಿಲ್ಲ. ಆದ್ದರಿಂದ ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು ಎಂದು ತಿಳಿದು ಬಂದಿದೆ. ಆದರೆ ಈ ವಿಷಯವನ್ನು ಅಲ್ಲಗೆಳೆದಿರುವ ಜಾರ್ಖಂಡ್ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಆರ್.ಕೆ. ಆನಂದ್, ಯಾರಿಗೂ ಯಾವುದೇ ತರಹದ ಗಾಯಗಳಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಅಥ್ಲೀಟ್‌ಗಳು ಕ್ರೀಡಾಗ್ರಾಮಕ್ಕೆ ಮರಳಿದ್ದಾರೆ’ ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.