ಬೆಂಗಳೂರು: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿದ ರಾಜ್ಯದ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಸೋಮವಾರ ನಗದು ಪುರಸ್ಕಾರ ನೀಡಲಾಯಿತು.
ಯವನಿಕಾ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ 2009, 10 ಮತ್ತು 11ನೇ ಸಾಲಿನಲ್ಲಿ ಸಾಧನೆ ಮಾಡಿದ ರಾಜ್ಯದ ಕ್ರೀಡಾ ಪಟುಗಳಿಗೆ ಬಹುಮಾನ ವಿತರಿಸಲಾಯಿತು.
ಅಥ್ಲೆಟಿಕ್ಸ್್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ಬಾಲ್, ಚೆಸ್. ಬಿಲಿಯರ್ಡ್ಸ್್, ಸೈಕ್ಲಿಂಗ್, ಫುಟ್ಬಾಲ್, ಜಿಮ್ನಾಷ್ಟಿಕ್, ಟೆನಿಸ್್, ಶೂಟಿಂಗ್, ವಾಲಿಬಾಲ್, ಈಜು, ಮತ್ತು ರೋಯಿಂಗ್ ಸೇರಿದಂತೆ ಇತರ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಬಹುಮಾನ ನೀಡಲಾಯಿತು. ಚಿನ್ನ (ರೂ. 1 ಲಕ್ಷ), ಬೆಳ್ಳಿ (ರೂ. 50 ಸಾವಿರ), ಕಂಚು ಗೆದ್ದವರಿಗೆ (ರೂ. 25 ಸಾವಿರ) ಬಹುಮಾನ ಲಭಿಸಿತು.
ಪುಣೆಯಲ್ಲಿ ಹೋದ ವರ್ಷ ನಡೆದ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ 4X400ಮೀ. ರಿಲೇಯಲ್ಲಿ ಮೊದಲ ಸ್ಥಾನ ಪಡೆದ ತಂಡದಲ್ಲಿದ್ದ ವೇಗದ ಓಟಗಾರ್ತಿ ಎಂ.ಆರ್. ಪೂವಮ್ಮ (ರೂ. 6 ಲಕ್ಷ ಬಹುಮಾನ), ಡಿಸ್ಕಸ್ ಥ್ರೋ ಸ್ಪರ್ಧಿ ವಿಕಾಸ್ಗೌಡ (ರೂ. 4 ಲಕ್ಷ), ಕಬಡ್ಡಿ ಆಟಗಾರ್ತಿ ಮಮತಾ ಪೂಜಾರಿ (ರೂ. 5 ಲಕ್ಷ) ಅವರಿಗೆ ಬಹುಮಾನ ಲಭಿಸಿತು. ಆದರೆ, ದೇಶದ ವಿವಿಧ ಕಡೆ ತರಬೇತಿ ಶಿಬಿರಗಳಲ್ಲಿರುವ ಈ ಕ್ರೀಡಾಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
ಬಹುಮಾನ ವಿತರಿಸಿ ಮಾತನಾಡಿದ ಕ್ರೀಡಾ ಸಚಿವ ಅಭಯ್ ಚಂದ್ರ ಜೈನ್ ಅವರು ‘ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಬೆಂಬಲ ನೀಡಲಾಗುವುದು. ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಬೇಕು’ ಎಂದು ನುಡಿದರು.
ಹಾಕಿ ಆಟಗಾರರಿಗೆ ಬಹುಮಾನ ಇಲ್ಲ: ಹಾಕಿ ಯಲ್ಲಿ ಸಾಧನೆ ಮಾಡಿದ ಕ್ರೀಡಾ ಪಟುಗಳಿಗೆ ಬಹುಮಾನ ನೀಡಲಿಲ್ಲ. ಈ ಬಗ್ಗೆ ಸಚಿವರನ್ನು ಪ್ರಶ್ನಿಸಿದಾಗ, ‘ಈ ಕ್ರೀಡೆಯಲ್ಲಿ ಸಾಧನೆ ಮಾಡಿದ ಆಟಗಾರರ ಪಟ್ಟಿಯನ್ನು ಶೀಘ್ರ ದಲ್ಲಿಯೇ ತಯಾರಿಸಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ.’ ಎಂದು ಪ್ರತಿಕ್ರಿಯಿಸಿದರು. ಒಟ್ಟು 137 ಕ್ರೀಡಾಪಟುಗಳಿಗೆ ಬಹುಮಾನ ಪ್ರದಾನ ಮಾಡಲಾಯಿತು.
‘ಸೂಕ್ತ ಸಮಯದಲ್ಲಿ ಬಹುಮಾನ ಲಭಿಸಿದೆ’
‘ಈ ವರ್ಷ ಏಷ್ಯನ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟಗಳಂಥ ಮಹತ್ವದ ಚಾಂಪಿಯನ್ಷಿಪ್ಗಳಿವೆ. ಅದಕ್ಕೆ ಸಜ್ಜಾಗಲು ಈ ಬಹುಮಾನ ನೆರವಾಗಲಿದೆ. ಸೂಕ್ತ ಸಮಯದಲ್ಲಿ ಬಹುಮಾನ ಲಭಿಸಿದೆ’ ಎಂದು ಹೈಜಂಪ್ ಸ್ಪರ್ಧಿ ಸಹನಾ ಕುಮಾರಿ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.
2011ರಲ್ಲಿ ನಡೆದ 51ನೇ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಸಹನಾ ಚಿನ್ನದ ಪದಕ ಜಯಿಸಿದ್ದರು. ಅದಕ್ಕಾಗಿ ಅವರಿಗೆ ರೂ. 1 ಲಕ್ಷ ಬಹುಮಾನ ನೀಡಲಾಯಿತು.
ಈ ಚಾಂಪಿಯನ್ಷಿಪ್ಗಳಿಗೆ ಈಗಾಗಲೇ ಅಭ್ಯಾಸ ಆರಂಭಿಸಿದ್ದೇನೆ. ಉತ್ತಮ ಪ್ರದರ್ಶನ ತೋರುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸೈಕಲ್ ವಿತರಣೆ
ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ 25 ಸೈಕ್ಲಿಸ್ಟ್ಗಳಿಗೆ ಸೈಕಲ್ ನೀಡಲಾಯಿತು.
ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯ ಮಾಳಪ್ಪ ಮುತ್ತಣ್ಣನವರ್್, ಕೃಷ್ಣ ನಾಯ್ಕೋಡಿ ಲಕ್ಷ್ಮಣ್ ಕುರಣಿ, ಪೈಗಂಬರ್ ನದಾಫ್ ಯಲ್ಲಪ್ಪ ಮಾಳಪ್ಪ, ಸಿದ್ದಪ್ಪ ಸಿ. ಕುರಣಿ ಅವರಿಗೆ ಸಚಿವರು ಸೈಕಲ್ ನೀಡಿದರು. ವಿಜಾಪುರ ಕ್ರೀಡಾ ವಸತಿ ನಿಲಯದ ಹತ್ತು ಮತ್ತು ಬಾಗಲಕೋಟೆ ಕ್ರೀಡಾ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಮೂವರು ಸೈಕ್ಲಿಸ್ಟ್ಗಳಿಗೆ ಸೈಕಲ್ ಕೊಡಲಾಯಿತು.
ಹೋದ ವರ್ಷ ನಡೆದ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡಿದ್ದ ಬಾಗಲಕೋಟೆ ಕ್ರೀಡಾಶಾಲೆಯ ಯಂಕಣ್ಣ ಕೆಂಗಲಗುತ್ತಿ, ದಾನಮ್ಮ ಚಿಚಕಂಡಿ ಮತ್ತು ದಾನಮ್ಮ ಗುರವ, 2010–11, 2011–12 ಮತ್ತು 2012–13ರಲ್ಲಿ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಬಂಗಾರ ಮತ್ತು ರಾಜ್ಯ ಚಾಂಪಿಯನ್ಷಿಪ್ನಲ್ಲಿ ವೈಯಕ್ತಿಕ ಪ್ರಶಸ್ತಿ ಪಡೆದಿದ್ದ ಶೈಲಾ ಮಠ್ಯಾಳ ಅವರಿಗೂ ಸೈಕಲ್ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.