ADVERTISEMENT

ಕ್ವಾರ್ಟರ್‌ಗೆ ಅಪೂರ್ವಾ, ನಿಕಿಟಾ

ದಾವಣಗೆರೆಯಲ್ಲಿ 50ಕೆ ಟೆನಿಸ್‌ ಟೂರ್ನಿ: ಕರ್ನಾಟಕ ಆಟಗಾರ್ತಿಯರ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 20:26 IST
Last Updated 22 ಮೇ 2018, 20:26 IST
ಮಹಿಳೆಯರ 50ಕೆ ಟೆನಿಸ್‌ ಟೂರ್ನಿಯಲ್ಲಿ ರಾಜ್ಯದ ನಿಕಿಟಾ ಪಿಂಟೊ (ಎಡ) ಹಾಗೂ ಎಸ್‌. ಅಪೂರ್ವಾ ಅವರು ಚೆಂಡನ್ನು ರಿಟರ್ನ್‌ ಮಾಡಿದರು.  ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ
ಮಹಿಳೆಯರ 50ಕೆ ಟೆನಿಸ್‌ ಟೂರ್ನಿಯಲ್ಲಿ ರಾಜ್ಯದ ನಿಕಿಟಾ ಪಿಂಟೊ (ಎಡ) ಹಾಗೂ ಎಸ್‌. ಅಪೂರ್ವಾ ಅವರು ಚೆಂಡನ್ನು ರಿಟರ್ನ್‌ ಮಾಡಿದರು. ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ   

ದಾವಣಗೆರೆ: ಅಗ್ರ ಶ್ರೇಯಾಂಕದ ಆಟಗಾರ್ತಿ, ಕರ್ನಾಟಕದ ಎಸ್‌.ಬಿ. ಅಪೂರ್ವಾ 6–0, 6–1ರಲ್ಲಿ ತೆಲಂಗಾಣದ ಅಮೂಲ್ಯಾ ಪೆನಿಕಾಲಪಟ್ಟಿ ಅವರನ್ನು ಸೋಲಿಸುವ ಮೂಲಕ ಮಂಗಳವಾರ ಮಹಿಳೆಯರ 50ಕೆ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್ಸ್ ಪ್ರವೇಶಿಸಿದರು.

ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಆಶ್ರಯದಲ್ಲಿ ಜಿಲ್ಲಾ ಟೆನಿಸ್‌ ಸಂಸ್ಥೆ ಹಮ್ಮಿಕೊಂಡಿರುವ ಟೂರ್ನಿಯ ಎರಡನೇ ದಿನದ ಪಂದ್ಯದಲ್ಲಿ ಅಪೂರ್ವಾ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಚೆಂಡನ್ನು ಉತ್ತಮವಾಗಿ ಪ್ಲೇಸ್‌ಮೆಂಟ್‌ ಮಾಡುವ ಮೂಲಕ ಮೊದಲ ಸೆಟ್‌ನಲ್ಲಿ ಎದುರಾಳಿಗೆ ಒಂದೂ ಪಾಯಿಂಟ್‌ ನೀಡದೆ ಬೆವರಿಳಿಸಿದರು. ಎದುರಾಳಿಗೆ ಯಾವುದೇ ಅವಕಾಶ ನೀಡದೆ ಎರಡನೇ ಸೆಟ್‌ ಅನ್ನು ಸುಲಭವಾಗಿ ತಮ್ಮದಾಗಿ
ಸಿಕೊಂಡರು.

ಎರಡನೇ ಶ್ರೇಯಾಂಕದ ಆಟ ಗಾರ್ತಿ, ಕರ್ನಾಟಕದ ನಿಕಿಟಾ ಪಿಂಟೊ 6–3, 6–2ರಲ್ಲಿ ನೇರ ಸೆಟ್‌ಗಳಲ್ಲಿ ಮಹಾರಾಷ್ಟ್ರದ ಮೃನ್ಮಯಿ ಭಾಗ್ವತ್‌ ಅವರನ್ನು ಮಣಿಸಿ ಕ್ವಾರ್ಟರ್‌ ಫೈನಲ್ ತಲುಪಿದರು. ಮೊದಲ ಸೆಟ್‌ನಲ್ಲಿ ಎರಡು ಬ್ರೇಕ್‌ ಪಾಯಿಂಟ್‌ ಹಾಗೂ ಎರಡನೇ ಸೆಟ್‌ನಲ್ಲಿ ಒಂದು ಬ್ರೇಕ್‌ ಪಾಯಿಂಟ್‌ ಗಳಿಸಿ ಗೆದ್ದರು.

ADVERTISEMENT

ಪುರುಷರ ವಿಭಾಗದಲ್ಲಿ ಅಗ್ರಶ್ರೇಯಾಂಕದ ಆಟಗಾರ, ಕರ್ನಾಟಕದ ಶಾಹುಲ್‌ ಅನ್ವರ್‌ 6–2, 6–1ರಲ್ಲಿ ತಮಿಳುನಾಡಿನ ದೇವ್‌ ಸಿನ್ಹಾ ಅವರನ್ನೂ; ದ್ವಿತೀಯ ಶ್ರೇಯಾಂಕದ ಆಟಗಾರ ಅಲೋಕ್‌ ಆರಾಧ್ಯ 6–1, 6–1ರಲ್ಲಿ ಮಹಾರಾಷ್ಟ್ರದ ಹಿತೇಶ್‌ ಶರ್ಮಾ ವಿರುದ್ಧ ಜಯಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಆತಿಥೇಯರಾದ ಅಮರ್‌ ಟಿ. ಧರಿಯಣ್ಣವರ ಮತ್ತು ದರ್ಶನ್‌ ಶ್ರೀನಿವಾಸ್‌ ನಡುವಿನ ಪಂದ್ಯ ರೋಚಕವಾಗಿತ್ತು. ಸುಮಾರು ಎರಡು ತಾಸು ನಡೆದ ಪಂದ್ಯದಲ್ಲಿ ಇಬ್ಬರೂ ಆಟಗಾರರು ಸಮಬಲ ಪ್ರದರ್ಶಿಸಿದರೂ ಅಂತಿಮವಾಗಿ ಅಮರ್‌ ಅವರು 5–7, 6–4, 6–4ರಲ್ಲಿ ಜಯಿಸಿದರು.

ಮಹಿಳೆಯರ ವಿಭಾಗ: ರಾಜ್ಯದ ಖುಷಿ ಸಂತೋಷ ಖಂಡೋಜಿ 6–0, 6–1ರಲ್ಲಿ ರಾಜ್ಯದ ಸಿಮ್ರನ್‌ ಸೋಮಯ್ಯ ಅವರನ್ನು; ತಮಿಳುನಾಡಿನ ಪ್ರಂಜಿಶ್‌ ವೈಶಾಲಿ 6–0, 6–1ರಲ್ಲಿ ರಾಜ್ಯದ ಭಾವನಾ ಎನ್‌. ಕುಮಾರ್‌ ಅವರನ್ನು; ಆಂಧ್ರಪ್ರದೇಶದ ನಿಕಿತಾ ತೇರದಾಳ 6–2, 6–3ರಲ್ಲಿ ರಾಜ್ಯದ ಪ್ರಿಯಾ ನಾಯಕ ಅವರನ್ನು; ತೆಲಂಗಾಣದ ಬಿಪಾಶಾ ಎಂ. 5–7, 7–6, 6–3ರಲ್ಲಿ ಮಹಾರಾಷ್ಟ್ರದ ಐಶ್ವರ್ಯ ಅಂದಾಳ್ಕರ್‌ ಅವರನ್ನು ಮಣಿಸಿದರು.

ಪುರುಷರ ಡಬಲ್ಸ್‌: ಆತಿಥೇಯರಾದ ಮನಸ್‌ ಗಿರೀಶ್‌ ದೀಪ್‌ಶೇಟ್‌, ದೇವ್‌ ಸಿನ್ಹಾ 6–1, 7–5ರಲ್ಲಿ ರಾಜ್ಯದ ಧೀಮಂತ್‌ ಮುದುಗಲ್‌–ಮಹಾ
ರಾಷ್ಟ್ರದ ಕಪೀಶ್‌ ಖಂಡಗೆ ಅವರನ್ನು; ರಾಜ್ಯದ ಎಂ. ಕೃತಿಕ್‌–ವಿನಯ್‌ ಟಿ. 5–7, 6–3, 10–5ರಲ್ಲಿ ರಾಜ್ಯದ ಮಂಜು
ನಾಥ್‌ ಪಲ್ಲೇದ–ಆನಂದ ಕೆ. ಅವರನ್ನು; ರಾಜ್ಯದ ಎ. ದೀಪಕ್‌–ಮಹಾರಾಷ್ಟ್ರದ ಸಾಹಿಲ್‌ ಧನವಾಣಿ 6–2, 6–1ರಲ್ಲಿ ರಾಜ್ಯದ ಕೆ.ಎಸ್‌. ನಾಣಯ್ಯ–ನಿತೀಶ್‌ ನವೀನ್‌ ಅವರನ್ನು ಮಣಿಸಿದರು.

ತಮಿಳುನಾಡಿನ ಹೇಮಂತ ಕುಮಾರ್‌–ರೋಹಿತ್‌ ಕೃಷ್ಣ 6–0, 6–2ರಲ್ಲಿ ರಾಜ್ಯದ ರಾಮಪ್ರಸಾದ್‌ ಕುಲಕರ್ಣಿ–ವಿನಾಯಕ ಕುಂಬಾರ ವಿರುದ್ಧ; ಮಹಾರಾಷ್ಟ್ರದ ಕೈವಲ್ಯ ವಾಮನ್‌ರಾವ್‌–ತಮಿಳುನಾಡಿನ ವಿಮಲ್‌ರಾಜ್‌ 6–2, 6–4ರಲ್ಲಿ ರಾಜ್ಯದ ಅಬೋಧ್‌–ಒಡಿಶಾದ ಆದಿತ್ಯ ಎದುರು; ತಮಿಳುನಾಡಿನ ತರುಣ್‌ ಕುಮಾರ್‌ವೇಲ್‌–ಲಕ್ಷ್ಮಣ್‌ ರಾಜ್‌ಗೆ 6–1, 3–6, 10–7ರಲ್ಲಿ ರಾಜ್ಯದ ಅಮೃತ್‌ ಧರಿಯಣ್ಣವರ್‌–ಶಿವರಾಜ್‌ ಪಾಟೀಲ ವಿರುದ್ಧ ಗೆದ್ದರು.

ಫಲಿತಾಂಶ: ಪುರುಷರ ವಿಭಾಗ: ತೆಲಂಗಾಣದ ಹೇಮಂತ ಕುಮಾರ್‌ 6–1, 6–1ರಲ್ಲಿ ರಾಜ್ಯದ ವಿನಾಯಕ ಕುಂಬಾರ್‌ ವಿರುದ್ಧ; ಒಡಿಶಾದ ಆದಿತ್ಯ ಸಾತಪತಿ 6–1, 6–1ರಲ್ಲಿ ರಾಜ್ಯದ ಧೀಮಂತ ಮೂಡಬಾಗಿಲ ಎದುರು; ತೆಲಂಗಾಣದ ರೋಹಿತ್‌ ಕೃಷ್ಣ 7–5, 6–0ರಲ್ಲಿ ರಾಜ್ಯದ ರಿಭವ್‌ ರವಿಕಿರಣ್‌ ವಿರುದ್ಧ; ತಮಿಳುನಾಡಿನ ವಿಮಲ್‌ರಾಜ್‌ ಜಯಚಂದ್ರನ್‌ 7–6, 7–5ರಲ್ಲಿ ಆಂಧ್ರಪ್ರದೇಶದ ಉಮೇರ್‌ ಶೇಖ್‌ ಎದುರು; ಮಹಾರಾಷ್ಟ್ರದ ಕೈವಲ್ಯ ವಾಮನ್‌ರಾವ್‌ಗೆ 6–4, 6–3ರಲ್ಲಿ ರಾಜ್ಯದ ಟಿ. ವಿನಾಯಕ ಕುಮಾರ್‌ ವಿರುದ್ಧ ಜಯಿಸಿದರು.

ಸಹೋದರಿಯರಿಗೆ ಗೆಲುವು

ತಮಿಳುನಾಡಿನ ಅವಳಿ ಸಹೋದರಿಯರಾದ ಲಾವಣ್ಯ ಶ್ರೀಕೃಷ್ಣನ್‌ ಹಾಗೂ ಚಾರಣ್ಯ ಶ್ರೀಕೃಷ್ಣನ್‌ ಅವರು ಮಂಗಳವಾರ ತಮ್ಮ ಎದುರಾಳಿಗಳನ್ನು ಮಣಿಸಿ ಕ್ವಾರ್ಟರ್‌ ಫೈನಲ್ಸ್ ಪ್ರವೇಶಿಸಿದರು.

ಲಾವಣ್ಯ 6–4, 2–6, 6–4ರಲ್ಲಿ ತೆಲಂಗಾಣದ ಸೋನಾಲಿ ಜೈಸ್ವಾಲ್‌ ಅವರನ್ನು ಹಾಗೂ ಚಾರಣ್ಯ 6–2, 4–6, 6–1ರಲ್ಲಿ ತಮ್ಮದೇ ರಾಜ್ಯದ ಚಾಂದನಿ ಮುರಳಿ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.