ADVERTISEMENT

ಗಾಲ್ಫ್: ಚಿಕ್ಕರಂಗಪ್ಪ, ಖಾಲಿನ್ ಜೋಶಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2011, 19:00 IST
Last Updated 26 ಆಗಸ್ಟ್ 2011, 19:00 IST
ಗಾಲ್ಫ್: ಚಿಕ್ಕರಂಗಪ್ಪ, ಖಾಲಿನ್ ಜೋಶಿಗೆ ಅಭಿನಂದನೆ
ಗಾಲ್ಫ್: ಚಿಕ್ಕರಂಗಪ್ಪ, ಖಾಲಿನ್ ಜೋಶಿಗೆ ಅಭಿನಂದನೆ   

ಬೆಂಗಳೂರು: `ಪ್ರತಿ ಸ್ಪರ್ಧೆಗೂ ಸಾಕಷ್ಟು ಕಷ್ಟಗಳ ನಡುವೆ ಕಠಿಣ ಅಭ್ಯಾಸ ನಡೆಸಿದೆ. ಗಾಲ್ಫರ್ ಆಗಬೇಕೆಂಬ ಕನಸು ಕಂಡಿದ್ದೆ. ಇದರಲ್ಲಿಯೇ ಸಾಧನೆ ಮಾಡಲು ನನಗೆ ಅವಕಾಶ ಲಭಿಸಿದೆ. ಯುವ ಸ್ಪರ್ಧಿಗಳಿಗೆ ಗೌರವ ನೀಡಿದ್ದು ಖುಷಿ ನೀಡಿದೆ~

ಹೀಗೆ ಹೇಳಿದ್ದು ಪ್ರತಿಭಾನ್ವಿತ ಗಾಲ್ಫರ್ ಎಸ್. ಚಿಕ್ಕರಂಗಪ್ಪ, ಇದಕ್ಕೆ ದನಿಗೂಡಿಸಿದ್ದು ಖಾಲೀನ್ ಜೋಶಿ.
ಟೊಯೋಟಾ ಮೋಟಾರ್ ಲಿಮಿಟೆಡ್ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಇಬ್ಬರೂ ಪ್ರತಿಭಾನ್ವಿತ ಗಾಲ್ಫರ್‌ಗಳಿಗೆ ಸನ್ಮಾನಿಸಲಾಯಿತು.

`ದೆಹಲಿಯಲ್ಲಿ ಸಾಕಷ್ಟು ಬಿಸಿಲು ಇತ್ತು. ಆದ್ದರಿಂದ ನೊಮುರಾ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಾಗಲಿಲ್ಲ. ಚಿನ್ನ ಗೆಲ್ಲಬೇಕೆಂಬ ಆಸೆ ಈಡೇರಲಿಲ್ಲ. ಯುವ ಆಟಗಾರರಿಗೆ ಪ್ರೋತ್ಸಾಹಿಸುವುದರಿಂದ ಇನ್ನೂ ಹೆಚ್ಚು ಸಾಧನೆ ಮಾಡಬೇಕೆನಿಸುತ್ತದೆ~ ಎಂದು ಚಿಕ್ಕರಂಗಪ್ಪ ಹೇಳಿದರು. ನೊಮುರಾ ಕಪ್ ಏಷ್ಯಾ ಪೆಸಿಫಿಕ್  ಟೂರ್ನಿಯಲ್ಲಿ ಭಾರತ  ಗಾಲ್ಫ್ ತಂಡ 18 ವರ್ಷಗಳ ಬಳಿಕ ಕಂಚಿನ ಪದಕ ಜಯಿಸಿತ್ತು.

ಸೆ. 1ರಿಂದ `ಟೊಯೋಟಾ ಗಾಲ್ಫ್  ಉತ್ಸವ~

 ಉದ್ಯಾನ ನಗರಿಯ ಕರ್ನಾಟಕ ಗಾಲ್ಫ್ ಸಂಸ್ಥೆಯ ಕೋರ್ಸ್‌ನಲ್ಲಿ ಸೆ. 1ರಿಂದ 4ರ ವರೆಗೆ ನಡೆಯುವ  `ಟೊಯೋಟಾ ಗಾಲ್ಫ್  ಉತ್ಸವ~ದ ಮೂರನೇ ಆವೃತ್ತಿಯಲ್ಲಿ ದೇಶದ ವಿವಿಧ ಭಾಗಗಳ 400 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಟ್, ಕರ್ನಾಟಕ ಗಾಲ್ಫ್ ಸಂಸ್ಥೆ (ಕೆಜಿಎ), ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಕಂಪೆನಿಗಳ ಸಹಭಾಗಿತ್ವದದಲ್ಲಿ ಈ ಉತ್ಸವ ನಡೆಯಲಿದೆ. ಈ ವಿಷಯವನ್ನು ಟೋಯೊಟಾ ಮೋಟರ್ಸ್‌ನ ವಾಣಿಜ್ಯ ವಿಭಾಗದ ನಿರ್ವಹಣಾ ಉಪ ನಿರ್ದೇಶಕ ಶೇಖರ್ ವಿಶ್ವನಾಥನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಕೆಜಿಎ ಅಧ್ಯಕ್ಷ ಕೆ. ಚಂದ್ರ ಪ್ರಕಾಶ್, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಸಿ. ಮುನಿಯಪ್ಪ, ಋಷಿ ನಾರಾಯಣ ಗಾಲ್ಫ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ರಿಷಿ ನಾರಾಯಣ, ಮಂತ್ರಿ ಡೆವಲಪರ್ಸ್‌ನ ಸ್ನೇಹಾಲ್ ಮಂತ್ರಿ ಹಾಗೂ ಪಾರ್ಕ್ ಪ್ಲಾಜಾದ ಅಸ್ಟೀನ್ ಕೋಚ್ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.