ADVERTISEMENT

ಚಾಂಪಿಯನ್ನರಿಗೆ ಗಾಯದ ಸಂಕಷ್ಟ

ನೈಟ್ ರೈಡರ್ಸ್-ಕಿಂಗ್ಸ್ ಇಲೆವೆನ್ ನಡುವೆ ಇಂದು ಹಣಾಹಣಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST

ಕೋಲ್ಕತ್ತ (ಪಿಟಿಐ/ಐಎಎನ್‌ಎಸ್): ಪ್ರಮುಖ ಆಟಗಾರರಿಗೆ ಗಾಯದ ಸಂಕಷ್ಟ ಹಾಗೂ ಸೋಲಿನ ನಿರಾಸೆಯೊಂದಿಗೆ ಪರದಾಡುತ್ತಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಹಾಲಿ ಚಾಂಪಿಯನ್ ನೈಟ್ ರೈಡರ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಪೈಪೋಟಿ ನಡೆಸಲಿದೆ.

ಈಡನ್ ಗಾರ್ಡನ್ಸ್ ಕ್ರೀಡಾಂಗಣ ದಲ್ಲಿ ಈ ಪಂದ್ಯ ನಡೆಯಲಿದೆ. ಗೌತಮ್ ಗಂಭೀರ್ ನೇತೃತ್ವದ ನೈಟ್ ರೈಡರ್ಸ್ ಆರನೇ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದರೂ, ನಂತರದ ಪಂದ್ಯಗಳಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡುವಲ್ಲಿ ವಿಫಲವಾಗಿದೆ.

ಆಲ್ ರೌಂಡರ್ ಜಾಕ್ ಕಾಲಿಸ್ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಬಲಗಾಲಿನ ಮೊಣಕಾಲು ನೋವಿಗೆ ತುತ್ತಾಗಿದ್ದಾರೆ.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮನೋಜ್ ತಿವಾರಿ, ಆಲ್‌ರೌಂಡರ್ ಲಕ್ಷ್ಮಿ ರತನ್ ಶುಕ್ಲಾ ಸಹ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. 

ವಿಶ್ವಾಸದಲ್ಲಿ ಪಂಜಾಬ್: ತನ್ನ ಹಿಂದಿನ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಎದುರು ಐದು ವಿಕೆಟ್ ಗೆಲುವು ಪಡೆದಿರುವ ಕಿಂಗ್ಸ್ ಇಲೆವೆನ್ ವಿಶ್ವಾಸದಿಂದ ಬೀಗುತ್ತಿದೆ. ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಏಳು ಪಂದ್ಯಗಳನ್ನಾಡಿದ್ದು ನಾಲ್ಕರಲ್ಲಿ ವಿಜಯ ಸಾಧಿಸಿ, ಎದುರಾಳಿ ನೈಟ್ ರೈಡರ್ಸ್‌ಗಿಂತಲೂ ಮೇಲಿನ ಸ್ಥಾನದಲ್ಲಿದೆ.

ಈ ತಂಡದ ಗೆಲುವಿನ  ಓಟ ಹೀಗೆಯೇ ಮುಂದುವರಿಯಬೇಕಾದರೆ ನಾಯಕ ಗಿಲ್‌ಕ್ರಿಸ್ಟ್ ಉತ್ತಮವಾಗಿ ಬ್ಯಾಟ್ ಮಾಡಬೇಕಿದೆ.
ಪಂದ್ಯ ಆರಂಭ: ರಾತ್ರಿ 8ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.