ಚೆನ್ನೈ: ಲೀಗ್ ಹಾಗೂ ಸೆಮಿಫೈನಲ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರಿ ಭರವಸೆ ಮೂಡಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಫೈನಲ್ನಲ್ಲಿ ಎಡವಿ ಬಿದ್ದಿದೆ. ಕಡಿಮೆ ಮೊತ್ತದ ಗುರಿ ಮುಟ್ಟಲೂ ಈ ತಂಡಕ್ಕೆ ಸಾಧ್ಯವಾಗಲಿಲ್ಲ.
ಆದರೆ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಸಂಭ್ರಮದ ಹೊನಲು ಹರಿಸಿದ್ದು ಮುಂಬೈ ಇಂಡಿಯನ್ಸ್. ಕಾರಣ ಈ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿತು.
ಟೂರ್ನಿಯ ಫೈನಲ್ನಲ್ಲಿ ಮುಂಬೈ ನೀಡಿದ 140 ರನ್ಗಳ ಗುರಿಗೆ ಉತ್ತರವಾಗಿ ರಾಯಲ್ ಚಾಲೆಂಜರ್ಸ್ 19.2 ಓವರ್ಗಳಲ್ಲಿ 108 ರನ್ಗಳಿಗೆ ತತ್ತರಿಸಿ ಹೋಯಿತು. ಆರ್ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಎನಿಸಿದ್ದ ಕ್ರಿಸ್ ಗೇಲ್ (5) ಹಾಗೂ ವಿರಾಟ್ ಕೊಹ್ಲಿ (11) ವೈಫಲ್ಯ ಕಂಡಿದ್ದು ಈ ಸೋಲಿಗೆ ಪ್ರಮುಖ ಕಾರಣ.
ಮುಂಬೈ ಇಂಡಿಯನ್ಸ್ 31 ರನ್ಗಳ ಜಯಭೇರಿ ಮೊಳಗಿಸಲು ಹರಭಜನ್ ಸಿಂಗ್ (20ಕ್ಕೆ3) ಅವರ ಬೌಲಿಂಗ್ ಕೈಚಳಕ ಮುಖ್ಯ ಪಾತ್ರ ವಹಿಸಿತು. ಗೇಲ್ ಹಾಗೂ ಕೊಹ್ಲಿ ಅವರ ವಿಕೆಟ್ ಕಬಳಿಸಿದ ಭಜ್ಜಿ ನಾಯಕರಾಗಿ ಯಶಸ್ಸು ಕಂಡರು. ಸಚಿನ್ ತೆಂಡೂಲ್ಕರ್ ಗಾಯಗೊಂಡು ಈ ಟೂರ್ನಿಯಿಂದ ಹೊರಗುಳಿದಿದ್ದ ಕಾರಣ ಹರಭಜನ್ ಅವರಿಗೆ ತಂಡದ ಸಾರಥ್ಯ ವಹಿಸಲಾಗಿತ್ತು. ಮುಂಬೈ ರೂ11.6 ಕೋಟಿ ಬಹುಮಾನ ಮೊತ್ತ ಜೇಬಿಗಳಿಸಿತು. ರನ್ನರ್ ಅಪ್ ಬೆಂಳೂರು ತಂಡಕ್ಕೆ ರೂ 6 ಕೋಟಿ ಲಭಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.