ಗೋಲ್ಡ್ ಕೋಸ್ಟ್: ಅವಕಾಶಗಳನ್ನು ಬಳಸಿಕೊಳ್ಳಲು ವಿಫಲವಾದ ಭಾರತ ತಂಡ ನ್ಯೂಜಿಲೆಂಡ್ಗೆ ಮಣಿದು ಕಾಮನ್ವೆಲ್ತ್ ಕೂಟದ ಹಾಕಿಯಲ್ಲಿ ಚಿನ್ನದ ಆಸೆ ಕೈಚೆಲ್ಲಿತು.
ವಿಶ್ವ ಕ್ರಮಾಂಕದಲ್ಲಿ ತನಗಿಂತ ಕೆಳಗಿನ ಸ್ಥಾನ ಹೊಂದಿರುವ ನ್ಯೂಜಿ ಲೆಂಡ್ ವಿರುದ್ಧ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 2–3ರಿಂದ ಸೋತಿತು.
ಒಟ್ಟು ಒಂಬತ್ತು ಪೆನಾಲ್ಟಿ ಕಾರ್ನರ್ ಅವಕಾಶಗಳ ಪೈಕಿ ಎಂಟನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಮನ್ಪ್ರೀತ್ ಸಿಂಗ್ ಬಳಗ ವಿಫಲ ವಾಯಿತು. ಭಾರತದ ರಕ್ಷಣಾ ವಿಭಾಗದ ವೈಫಲ್ಯವೂ ಸೋಲಿಗೆ ಪ್ರಮುಖ ಕಾರಣವಾಯಿತು. ಕಳೆದ ಎರಡು ಕೂಟಗಳಲ್ಲಿ ಬೆಳ್ಳಿ ಗೆದ್ದಿದ್ದ ಭಾರತ ತಂಡ ಈ ಬಾರಿ ಕಂಚಿನ ಪದಕಕ್ಕಾಗಿ ಸೆಣಸಲಿದೆ.
ಹ್ಯೂಗೊ ಇಂಗ್ಲಿಸ್, ಸ್ಟೀಫನ್ ಜೆನಿಸ್ ಮತ್ತು ಮಾರ್ಕಸ್ ಚೈಲ್ಡ್ ನ್ಯೂಜಿಲೆಂಡ್ ಪರ ಗೋಲು ಗಳಿಸಿದರೆ ಭಾರತಕ್ಕೆ ಎರಡೂ ಗೋಲುಗಳನ್ನು ಹರ್ಮನ್ ಪ್ರೀತ್ ಸಿಂಗ್ ಗಳಿಸಿಕೊಟ್ಟರು.
ನ್ಯೂಜಿಲೆಂಡ್ನ ರಕ್ಷಣಾ ಗೋಡೆ ಕೆಡವಲು ನಿರಂತರ ಪ್ರಯತ್ನ ನಡೆಸಿದ ಭಾರತ ಯಶಸ್ಸು ಕಾಣಲಿಲ್ಲ. ನ್ಯೂಜಿಲೆಂಡ್ ಮೊದಲ ಎರಡು
ಕ್ವಾರ್ಟರ್ಗಳಲ್ಲಿ ಎರಡು ಗೋಲು ಗಳಿಸಿತ್ತು. ಎರಡನೇ ಕ್ವಾರ್ಟರ್ನಲ್ಲಿ ಒಂದು ಪೆನಾಲ್ಟಿ ಕಾರ್ನರ್ ಆ ತಂಡಕ್ಕೆ ಲಭಿಸಿತ್ತು. ಆದರೆ ಗೋಲ್ಕೀಪರ್ ಶ್ರೀಜೇಶ್ ಅದನ್ನು ವಿಫಲಗೊಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.