ADVERTISEMENT

ಜಂಗೀ ಕುಸ್ತಿ ಪಂದ್ಯಾವಳಿ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ಚಿಕ್ಕೋಡಿ:ಅಂತರರಾಷ್ಟ್ರೀಯ ಖ್ಯಾತಿಯ ಕುಸ್ತಿಪಟುಗಳ ಜಂಗೀ ಕುಸ್ತಿ ಪಂದ್ಯಾವಳಿಗೆ ಯಕ್ಸಂಬಾದಲ್ಲಿ ಅಖಾಡಾ ಸಜ್ಜುಗೊಂಡಿದ್ದು, ಈ ಕುಸ್ತಿ ಶುಕ್ರವಾರ ಆರಂಭವಾಗಲಿದೆ.

ತಾಲ್ಲೂಕಿನ ಸುಕ್ಷೇತ್ರ ಯಕ್ಸಂಬಾ ಗ್ರಾಮದ ಬೀರದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶಾಸಕ ಪ್ರಕಾಶ ಹುಕ್ಕೇರಿ ಅವರ ನೇತೃತ್ವದಲ್ಲಿ  ಈ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.

ಜನರ ಕುತೂಹಲ ಕೆರಳಿಸಿರುವ ಕುಸ್ತಿ ಕಾಳಗ ಇಂದು ಮಧ್ಯಾಹ್ನ 3 ಗಂಟೆಗೆ ಮಲಿಕವಾಡ ಬಳಿಯ ಶರ್ಯತ್ತು ಮೈದಾನದಲ್ಲಿ ನಡೆಯಲಿದೆ.

ಪ್ರಥಮ ಕ್ರಮಾಂಕದ ಮಲ್ಲಯುದ್ಧ ಹರಿಯಾಣಾದ `ಭಾರತ ಕೇಸರಿ~ ಹಿತೇಶಕುಮಾರ ಮತ್ತು ಪಂಜಾಬಿನ `ಭಾರತ ಕೇಸರಿ~ ಕಿಶನ್‌ಕುಮಾರ ಅವರ ನಡುವೆ ನಡೆಯಲಿದೆ. ದ್ವಿತೀಯ ಕ್ರಮಾಂಕದ ಕುಸ್ತಿ ಪಂಜಾಬಿನ ರುಬಲಜೀತಸಿಂಗ್ ಮತ್ತು ಹರಿಯಾಣಾದ ಸತ್ಯೇಂದ್ರ ಅವರ ಮಧ್ಯೆ ಹಾಗೂ ತೃತೀಯ ಕ್ರಮಾಂಕದಲ್ಲಿ ಮಹಾರಾಷ್ಟ್ರದ ಚಂದ್ರಹಾಸ ಪಾಟೀಲ ಮತ್ತು ಪಂಜಾಬಿನ ಯುದ್ಧವೀರ್ ಅವರ ನಡುವೆ ನಡೆಯಲಿದೆ.

ಒಟ್ಟು 32 ಜೋಡಿ ಜಟ್ಟಿಗಳು ಸೆಣಸಾಟ ನಡೆಸಲಿದ್ದಾರೆ. ಪ್ರಥಮ ಬಹುಮಾನ ರೂ 3 ಲಕ್ಷ, ದ್ವಿತೀಯ ರೂ 2.50 ಲಕ್ಷ ಹಾಗೂ 3ನೇ ಬಹುಮಾನ ರೂ 2 ಲಕ್ಷ ನಿಗದಿಪಡಿಸಲಾಗಿದೆ.

`ಹಿಂದ್‌ಕೇಸರಿ~ಗಳಾದ ಯಕ್ಸಂಬಾದ ಶ್ರೀಪತಿ ಖಂಚನಾಳೆ, ಗಣಪತರಾವ್ ಆಂದಳಕರ, ದೀನಾನಾಥಸಿಂಗ್, ಇಸಾಕ್ ಶಿರಗುಪ್ಪಿ, ಅಪ್ಪಾ ಕರಜಗಿ, ಬಂಡುಅಣ್ಣಾ ಕುಡಚಿ ಮುಂತಾದವರು ಆಗಮಿಸಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.