ADVERTISEMENT

ಜಯದ ಶ್ರೇಯ ಬೌಲರ್‌ಗೆ ಸಲ್ಲಬೇಕು: ಸೆಹ್ವಾಗ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ಕೋಲ್ಕತ್ತ (ಪಿಟಿಐ): `ನಮ್ಮ ತಂಡದ ಬೌಲರ್‌ಗಳ ಉತ್ತಮ ಪ್ರದರ್ಶನದ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಗುರುವಾರದ ಪಂದ್ಯದಲ್ಲಿ ಗೆಲುವು ಸಾಧ್ಯವಾಯಿತು. ಈ ಗೆಲುವಿನ ಶ್ರೇಯ ಬೌಲರ್‌ಗಳಿಗೆ ಸಲ್ಲಬೇಕು~ ಎಂದು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕ ವೀರೇಂದ್ರ ಸೆಹ್ವಾಗ್ ಹೇಳಿದರು.

 `ಮಾರ್ನ್ ಮಾರ್ಕೆಲ್ (18ಕ್ಕೆ3), ಉಮೇಶ್ ಯಾದವ್ (9ಕ್ಕೆ2) ತಂಡದ ಬೌಲಿಂಗ್ ಶಕ್ತಿಗೆ ಬಲ ತುಂಬಿದರು. ಆರಂಭದಲ್ಲಿ ಮಳೆ ಬಂದ ಕಾರಣ ಟಾಸ್ ಗೆದ್ದರೂ, ಫೀಲ್ಡಿಂಗ್ ಆಯ್ದುಕೊಂಡೆವು. ನನ್ನ ನಿರ್ಧಾರ ಸರಿಯಾಗಿತ್ತು~ ಎಂದು ವೀರೂ ನುಡಿದರು.

 ಮಳೆ ಬಂದ ಕಾರಣ ತಲಾ 12 ಓವರ್‌ಗಳನ್ನು ನಿಗದಿ ಮಾಡಲಾಗಿತ್ತು. ಕೋಲ್ಕತ್ತ 9 ವಿಕೆಟ್ ಕಳೆದುಕೊಂಡು 97 ರನ್‌ಗಳನ್ನು ಗಳಿಸಿತ್ತು.   ಡೆಲ್ಲಿ ತಂಡ 11.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಈ ಗುರಿ ಮುಟ್ಟಿತ್ತು.

ಗಂಭೀರ್ ಅಸಮಾಧಾನ: ಆರಂಭಿಕ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನದ ಬಗ್ಗೆ ಕೋಲ್ಕತ್ತ ತಂಡದ ನಾಯಕ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
  
 `ನಮ್ಮ ತಂಡ 20 ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬೇಗನೇ ವಿಕೆಟ್ ಕಳೆದುಕೊಂಡ ಕಾರಣ, ಎದುರಾಳಿ ತಂಡ ಹಿಡಿತ ಸಾಧಿಸಿತು. ಮಾರ್ಕೆಲ್ ಬೌಲಿಂಗ್‌ನಲ್ಲಿ ಮಿಂಚಿದರೆ, ಇರ್ಫಾನ್ ಪಠಾಣ್ (ಔಟಾಗದೇ 42) ಬ್ಯಾಟಿಂಗ್‌ನಲ್ಲಿ ಗಮನ ಸೆಳೆದರು~ ಎಂದು ಗಂಭೀರ್ ಶ್ಲಾಘಿಸಿದರು. 

 `ಈ ಋತುವಿನ ಮೊದಲ ಪಂದ್ಯದಲ್ಲಿಯೇ ಉತ್ತಮ ಪ್ರದರ್ಶನ ನೀಡಿದ್ದು ಖಷಿ ನೀಡಿದೆ ಎಂದು `ಪಂದ್ಯ ಶ್ರೇಷ್ಠ~ ಗೌರವ ಪಡೆದ ಡೆಲ್ಲಿ ತಂಡದ ಇರ್ಫಾನ್ ಹೇಳಿದರು.    ಮೂರನೇ ಕ್ರಮಾಂಕದಲ್ಲಿ   ಬ್ಯಾಟಿಂಗ್‌ಗೆ ಕಳುಹಿಸಿದ್ದಕ್ಕೆ ನನಗೆ ಸಂತಸವಾಗಿದೆ. ಅದಕ್ಕಾಗಿ ನಾಯಕ ಸೆಹ್ವಾಗ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.