ಬೆಂಗಳೂರು: ಬಳ್ಳಾರಿಯ ಜಿಂದಾಲ್ ಸ್ಟೀಲ್ ವರ್ಕ್ಸ್ (ಜೆಎಸ್ಡಬ್ಲ್ಯು) ತಂಡವು ಕರ್ನಾಟಕ ವಾಲಿಬಾಲ್ ಸಂಸ್ಥೆ (ಕೆವಿಎ) ಆಶ್ರಯದ ಕರ್ನಾಟಕ ವಾಲಿಬಾಲ್ ಲೀಗ್ (ಕೆವಿಎಲ್) ಟೂರ್ನಿಯಲ್ಲಿ ಜಯ ಪಡೆದಿದೆ.
ಕಂಠೀರವ ಒಳಾಂಗಣ ಕ್ರೀಡಾಂಗಣ ದಲ್ಲಿ ಶನಿವಾರ ನಡೆದ ದಿನದ ಮೊದಲ ಪಂದ್ಯದಲ್ಲಿ ಜೆಎಸ್ಡಬ್ಲ್ಯು 25–19, 25–20, 25–27, 25–19ರಲ್ಲಿ ಬಿಎಸ್ಎನ್ಎಲ್ ತಂಡವನ್ನು ಮಣಿಸಿತು.
86 ನಿಮಿಷಗಳಿಂದ ಕೂಡಿದ್ದ ಪೈಪೋಟಿ ಯಲ್ಲಿ ಪೂರ್ಣ ಪ್ರಭುತ್ವ ಮೆರೆದ ಜೆಎಸ್ಡಬ್ಲ್ಯು ಗೆಲುವು ತನ್ನದಾಗಿಸಿಕೊ ಂಡಿತು. ಈ ತಂಡದ ಗುರ್ಜಿಂದರ್ ಸಿಂಗ್, ಜಗದೀಶ್, ದೀಪೇಶ್ ಸಿನ್ಹಾ ಮತ್ತು ಪ್ರಮೋದ್ ಅಮೋಘ ಆಟವಾಡಿ ತಂಡಕ್ಕೆ ಜಯ ತಂದುಕೊಡುವಲ್ಲಿ ಸಫಲರಾದರು.
ಬಿಎಸ್ಎನ್ಎಲ್ ತಂಡದ ಟಿ.ಡಿ. ರವಿಕುಮಾರ್, ಸತೀಶ್ ಮತ್ತು ಮಂಜುನಾಥ್ ಸೋಲಿನ ನಡುವೆಯೂ ಉತ್ತಮ ಆಟ ತೋರಿದರು.
ಕೆವಿಸಿಗೆ ರೋಚಕ ಗೆಲುವು: ದಿನದ ಎರಡನೇ ಪಂದ್ಯದಲ್ಲಿ ಕರ್ನಾಟಕ ವಾಲಿಬಾಲ್ ಕ್ಲಬ್ (ಕೆವಿಸಿ) ತಂಡ 25–20, 25–21, 16–25, 20–25 ಮತ್ತು 18–16ರಲ್ಲಿ ಡಿವೈಇಎಸ್ ತಂಡವನ್ನು ಪರಾಭವಗೊಳಿಸಿತು.
ಈ ರೋಚಕ ಹೋರಾಟ 100 ನಿಮಿಷಗಳ ಕಾಲ ನಡೆಯಿತು. ಕೆವಿಸಿ ಮೊದಲ ಎರಡು ಸೆಟ್ ಗೆದ್ದು ಮುನ್ನಡೆ ಪಡೆದಿತ್ತು. ನಂತರ ಆಕ್ರಮಣಕಾರಿ ಆಟ ಆಡಿದ ಡಿವೈಇಎಸ್ ತಂಡದ ಆಟಗಾರರು ಮುಂದಿನ ಎರಡೂ ಸೆಟ್ ಗೆದ್ದು ಸಮಬಲಕ್ಕೆ ಕಾರಣರಾದರು. ಆದರೆ ನಿರ್ಣಾಯಕ ಸೆಟ್ನಲ್ಲಿ ಯಾವುದೇ ತಪ್ಪಿಗೆ ಅವಕಾಶ ನೀಡದೆ ದಿಟ್ಟ ಆಟ ತೋರಿದ ಕೆವಿಸಿ ಪಂದ್ಯ ಗೆದ್ದು ಬೀಗಿತು. ವಿಜಯಿ ತಂಡದ ಅಶೋಕ್, ಸನೋಜ್, ರವಿಂದ್ರ ಮತ್ತು ಪಿ.ಸಿ. ಸತ್ಯ ಬಲಿಷ್ಠ ಸ್ಮ್ಯಾಶ್ ಮತ್ತು ರಿಟರ್ನ್ಗಳ ಮೂಲ ನೆರೆದಿದ್ದ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದರು.
ಎಂಇಜಿ ಮಣಿಸಿದ ಪೋಸ್ಟಲ್: ದಿನದ ಅಂತಿಮ ಪಂದ್ಯದಲ್ಲಿ ಪೋಸ್ಟಲ್ ತಂಡ 25–21, 26–24, 25–19ರಲ್ಲಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ಎದುರು ನಿರಾಯಾಸವಾಗಿ ಜಯ ಪಡೆಯಿತು. ಪಂದ್ಯದ ಮೂರೂ ಸೆಟ್ಗಳಲ್ಲಿ ಪಾರಮ್ಯ ಮೆರೆದ ಪೋಸ್ಟಲ್ ಅರ್ಹ ಜಯ ತನ್ನದಾಗಿಸಿಕೊಂಡಿತು. ತಂಡದ ಪರ ಎ. ಕಾರ್ತಿಕ್, ಸೆಂಥಿಲ್ ಮತ್ತು ಯಶವಂತ್ ತೋರಿದ ಆಟ ಪ್ರೇಕ್ಷಕರ ಮನಸೂರೆಗೊಳ್ಳುವಂತಿತ್ತು. ಎಂಇಜಿ ತಂಡದ ಭರತ್, ವಿನೋದ್ ಮತ್ತು ದಿಬಿನ್ ಸೋಲಿನ ನಡುವೆಯೂ ಮೆಚ್ಚುವಂತ ಆಟ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.