ನವದೆಹಲಿ : ಆಸ್ಟ್ರೇಲಿಯಾ ಪ್ರವಾಸದ ವೇಳೆ ಹೊನಲು ಬೆಳಕಿನಲ್ಲಿ ಟೆಸ್ಟ್ ಪಂದ್ಯವೊಂದನ್ನು ಆಡಲು ನಿರಾಕರಿಸಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನಿರ್ಧಾರದ ಬಗ್ಗೆ ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಇಯಾನ್ ಚಾಪೆಲ್ ಬೇಸರ ವ್ಯಕ್ತಪಡಿಸಿದ್ದಾರೆ.
‘ಬಿಸಿಸಿಐ ನಿರ್ಧಾರದಿಂದ ತುಂಬಾ ಬೇಸರವಾಗಿದೆ. ಅಡಿಲೇಡ್ ಅಂಗಳದಲ್ಲಿ ಈ ಹಿಂದೆ ಹೊನಲು ಬೆಳಕಿನಲ್ಲಿ ಹಲವು ಟೆಸ್ಟ್ ಪಂದ್ಯಗಳು ನಡೆದಿವೆ. ಹೀಗಾಗಿ ಈ ವರ್ಷಾಂತ್ಯದಲ್ಲಿ ನಡೆಯುವ ಭಾರತದ ಎದುರಿನ ಸರಣಿಯ ಮೊದಲ ಪಂದ್ಯವನ್ನು ಹೊನಲು ಬೆಳಕಿನಲ್ಲಿ ಆಯೋಜಿಸಲು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ನಿರ್ಧರಿಸಿತ್ತು. ಆದರೆ ಬಿಸಿಸಿಐ ಇದಕ್ಕೆ ಅಸಮ್ಮತಿ ಸೂಚಿಸಿರುವುದು ಬೇಸರ ತರಿಸಿದೆ’ ಎಂದು ಚಾಪೆಲ್ ಹೇಳಿದ್ದಾರೆ.
ಸಾಂಪ್ರದಾಯಿಕ ಶೈಲಿ ಬಿಟ್ಟು ಗುಲಾಬಿ ವರ್ಣದ ಚೆಂಡಿನಲ್ಲಿ ಟೆಸ್ಟ್ ಪಂದ್ಯ ಆಡಲು ಭಾರತ ತಂಡ ಇಷ್ಟಪಡುವುದಿಲ್ಲ ಎಂದು ಬಿಸಿಸಿಐ ಇತ್ತೀಚೆಗೆ ಸಿಎಗೆ ತಿಳಿಸಿತ್ತು.
‘ಟ್ವೆಂಟಿ–20 ಮಾದರಿ ಈಗ ಹೆಚ್ಚು ಜನಪ್ರಿಯವಾಗುತ್ತಿದೆ. ಹೀಗಾಗಿ ಟೆಸ್ಟ್ ಕ್ರಿಕೆಟ್ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಹೊನಲು ಬೆಳಕಿನಲ್ಲಿ ಸಾಧ್ಯವಾದಷ್ಟು ಹೆಚ್ಚು ಪಂದ್ಯಗಳನ್ನು ನಡೆಸಬೇಕು. ಇದರಿಂದ ಕ್ರೀಡಾಂಗಣಕ್ಕೆ ಬಂದು ಪಂದ್ಯಗಳನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಹೆಚ್ಚಲಿದೆ’ ಎಂದು ಚಾಪೆಲ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.