ADVERTISEMENT

ನಿಧಿ ಸಂಗ್ರಹಿಸಲು ಮುರುಳೀಧರನ್ ಪ್ರವಾಸ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2011, 10:15 IST
Last Updated 28 ಮಾರ್ಚ್ 2011, 10:15 IST
ನಿಧಿ ಸಂಗ್ರಹಿಸಲು ಮುರುಳೀಧರನ್ ಪ್ರವಾಸ
ನಿಧಿ ಸಂಗ್ರಹಿಸಲು ಮುರುಳೀಧರನ್ ಪ್ರವಾಸ   

ಕೊಲಂಬೊ (ಪಿಟಿಐ): ದೇಶದಲ್ಲಿನ ಯುದ್ದ ನಿರಾಶ್ರಿತರಿಗೆ ಕ್ರೀಡಾ ಸಂಕೀರ್ಣ ನಿರ್ಮಿಸುವ ಉದ್ದೇಶ ಹೊಂದಿರುವ ಶ್ರೀಲಂಕಾ ಕ್ರಿಕೆಟ್‌ನ  ದಂತಕಥೆ ಮುತ್ತಯ್ಯ ಮುರುಳೀಧರನ್ ವಿಶ್ವದಾದ್ಯಂತ ಸಂಚರಿಸಿ ನಿಧಿ ಸಂಗ್ರಹಿಸಲು ಚಿಂತನೆ ನಡೆಸಿದ್ದಾರೆ.

ಟೆಸ್ಟ್‌ನಲ್ಲಿ 800 ವಿಕೆಟ್ ಹಾಗೂ ಏಕದಿನ ಪಂದ್ಯಗಳಲ್ಲಿ 538 ವಿಕೆಟ್ ಗಳಿಸಿ ವಿಶ್ವದಾಖಲೆ ಸ್ಥಾಪಿಸಿರುವ ಮುರುಳೀಧರನ್‌ಗೆ ಶ್ರೀಲಂಕಾದ ಉತ್ತರ ಭಾಗದ ಯುದ್ಧ ವಲಯದಲ್ಲಿ ಸಾವಿರಾರು ಮಕ್ಕಳಿಗಾಗಿ ಹೊಸ ಬದುಕು ಕಟ್ಟುವ ಆಸೆ ಮೂಡಿದೆ.

‘ಆರ್ಥಿಕವಾಗಿ ನಮ್ಮದು ಹಿಂದುಳಿದ ದೇಶವಾಗಿರಬಹುದು. ಆದರೆ ನಿರಾಶ್ರಿತತರಿಗೆ ಬದುಕು ಕಟ್ಟಿಕೊಡುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಇದೇ ಉದ್ದೇಶವನ್ನಿಟ್ಟುಕೊಂಡು ವಿದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತನಾಡಿ ಅಗತ್ಯವಿರುವ ನಿಧಿಯನ್ನು ಸಂಗ್ರಹಿಸುವ ಉದ್ದೇಶ ನನ್ನದು’ ಎಂದು ಮುರುಳಿ ಹೇಳಿದ್ದಾರೆ.

ಮುರುಳೀಧರನ್ ತಮ್ಮ  ದತ್ತಿ ಪ್ರತಿಷ್ಠಾನದ ವತಿಯಿಂದ ಇದೇ ಮಾದರಿಯ ಮಿಲಿಯನ್ ಡಾಲರ್‌ನ ಎರಡನೇಯ ಯೋಜನೆಯನ್ನು ಸುನಾಮಿಯಿಂದ ತತ್ತರಿಸಿದ ದಕ್ಷಿಣ ಕರಾವಳಿಯ ಸಿನಿಗಾಮಾ ಗ್ರಾಮದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದಾರೆ.

 ಕೊಲಂಬೊದ ಉತ್ತರಕ್ಕೆ 300 ಕಿ.ಮೀ ದೂರದಲ್ಲಿರುವ ಮನಕುಲಂನಲ್ಲಿ ಒಂದು ಕ್ರೀಡಾ ಕೇಂದ್ರ, ಒಂದು ಶಾಲೆ, ಇಂಗ್ಲೀಷ್ ಮತ್ತು ಐಟಿ ತರಬೇತಿ ಕೇಂದ್ರ ಹಾಗೂ ವೃದ್ದಾಶ್ರಮವನ್ನು ನಿರ್ಮಿಸಲು ಮುರಳೀಧರನ್ ಉದ್ದೇಶಿಸಿದ್ದಾರೆ. ಇದಕ್ಕಾಗಿ ಅವರು ಕ್ರೀಕೆಟ್ ಆಟಗಾರರನ್ನು ಸಂಪರ್ಕಿಸಿ ಸಹಾಯ ಯಾಚಿಸಿರುವುದಾಗಿ ತಿಳಿಸಿದ್ದಾರೆ.
ಕ್ರಿಕೆಟ್ ಏಕತೆಯ ಸಮುದಾಯವಾಗಿದ್ದು, ಕ್ರೀಡೆಯ ಮೂಲಕ ನಾವು ನಮಗಿಂತಲೂ ಕೆಳವರ್ಗದ ಜನರ ಜೀವನ ಮಟ್ಟ ಸುಧಾರಿಸಲು ಚಿಕ್ಕ ಸಹಾಯ ಮಾಡುತ್ತಿರುವುದಾಗಿ 38 ವಯಸ್ಸಿನ ಮುರುಳಿ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.