ನವದೆಹಲಿ (ಪಿಟಿಐ): ಐಪಿಎಲ್ ಕಳ್ಳಾದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ವೇಗಿ ಶ್ರೀಶಾಂತ್ ಮೇಲಿನ ಆಜೀವ ನಿಷೇಧವನ್ನು `ವಿಲಕ್ಷಣ' ಎಂದು ಟೀಕಿಸಿರುವ ಅವರ ವಕೀಲರಾದ ರೆಬೆಕಾ ಜಾನ್, ಇದು `ಸಹಜ ನ್ಯಾಯ ತತ್ವಕ್ಕೆ ಸಂಪೂರ್ಣ ವಿರುದ್ಧ'ವಾಗಿದೆ' ಎಂದು ಹೇಳಿದ್ದಾರೆ. ಅಲ್ಲದೇ ಭಾರತ ಕ್ರಿಕೆಟ್ ನಿಯಂತ್ರಣ ಸಂಸ್ಥೆಯ (ಬಿಸಿಸಿಐ) ಈ ನಿರ್ಧಾರವನ್ನು ಶ್ರೀಶಾಂತ್ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ ಎಂದೂ ಅವರು ನುಡಿದ್ದಾರೆ.
ಐಪಿಎಲ್ ಕಳ್ಳಾಟ ಪ್ರಕರಣ ಸಂಬಂಧ ಮಂಡಳಿಯ ಭ್ರಷ್ಟಾಚಾರ ವಿರೋಧಿ ಹಾಗೂ ಭದ್ರತಾ ಘಟಕದ ಮುಖ್ಯಸ್ಥ ರವಿ ಸವಾನಿ ನಡೆಸಿದ ಆಂತರಿಕ ತನಿಖೆಯಲ್ಲಿ ಶ್ರೀಶಾಂತ್ ತಪ್ಪಿತಸ್ಥ ಎಂದು ಸಾಬೀತಾದ್ದರಿಂದ ಬಿಸಿಸಿಐ ಅವರ ಮೇಲೆ ಆಜೀವ ನಿಷೇಧ ಹೇರಿದೆ.
`ಬಿಸಿಸಿಐ ನಿರ್ಧಾರ ಸಂಪೂರ್ಣವಾಗಿ ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾದದ್ದು' ಎಂದು ಜಾನ್ `ಇಎಸ್ಪಿಎನ್ ಕ್ರಿಕ್ಇನ್ಫೋ'ಗೆ ತಿಳಿಸಿದ್ದಾರೆ.
`ದೆಹಲಿ ಪೊಲೀಸರ ಜೊತೆಗಿನ ವೈಯಕ್ತಿಕ ಸಂವಾದ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ಅವರು ಸಲ್ಲಿಸಿದ್ದ ಚಾರ್ಜ್ಶೀಟ್ನಿಂದ ಪಡೆದ ಮಾಹಿತಿ ಆಧರಿಸಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ಹಾಗೇ ಮಾಡಬೇಕಿದ್ದಲ್ಲಿ ನ್ಯಾಯಾಲಯದ ಕಾನೂನು ಪ್ರಕ್ರಿಯೆಗಳು ಪೂರ್ಣಗೊಳ್ಳುವ ತನಕ ಕಾಯಬೇಕಿತ್ತು' ಎಂದೂ ರಿಬೆಕಾ ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಲದೇ, `ತಮ್ಮ ಮುಂದೆ ಶ್ರೀಶಾಂತ್ ಹಾಗೂ ಕ್ರಿಕೆಟ್ ವಲಯದ ಇತರ ಸದಸ್ಯರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಿದ್ದ ದೆಹಲಿ ಪೊಲೀಸರೊಂದಿಗಿನ ಸಂಭಾಷಣೆಗಳನ್ನಷ್ಟೇ ಅವರು ತೆಗೆದುಕೊಂಡಿದ್ದಾರೆ. ಇದು ಕಡಿಮೆ ಸತ್ವ ಹೊಂದಿರುವ ಅಥವಾ ನಿಃಸತ್ವವಾದ ಜಾಳು ವರದಿ' ಎಂದು ಅವರು ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.