ADVERTISEMENT

ನೊಂದ ಮಕ್ಕಳಿಗೆ ಕ್ರಿಕೆಟ್ ನೋಡಿದ ಆನಂದ...!

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 18:20 IST
Last Updated 23 ಫೆಬ್ರುವರಿ 2011, 18:20 IST

ಹಂಬಂಟೋಟಾ (ಪಿಟಿಐ): ಆ ಮಕ್ಕಳ ಮುಖದಲ್ಲಿ ಮಂದಹಾಸದ ಮಿಂಚು. ಕ್ರೀಡಾಂಗಣದಲ್ಲಿ ಕುಳಿತು ಕ್ರಿಕೆಟ್ ಆಟವನ್ನು ತೀರ ಹತ್ತಿರದಿಂದ ನೋಡುವ ಅವಕಾಶ ಸಿಕ್ಕ ಸಂಭ್ರಮ. ತಮ್ಮ ಬದುಕಿನಲ್ಲಿನ ದುರಂತದ ನೋವು ಮರೆತು ಆ ಪುಟಾಣಿಗಳು ಸಂತಸದ ಅಲೆಯ ಮೇಲೆ ತೇಲಿದರು.

ಸುನಾಮಿ ಅಲೆಯಲ್ಲಿ ತಮ್ಮವರನ್ನು ಕಳೆದುಕೊಂಡು ನೊಂದ ಮಕ್ಕಳಿಗೆ ಕ್ರಿಕೆಟ್ ಪಂದ್ಯವನ್ನು ಉಚಿತವಾಗಿ ನೋಡಲು ಶ್ರೀಲಂಕಾ ಕ್ರಿಕೆಟ್  ಅವಕಾಶ ಮಾಡಿಕೊಟ್ಟಿತು. ಬುಧವಾರ ಇಲ್ಲಿ ನಡೆದ ಪಾಕಿಸ್ತಾನ ಹಾಗೂ ಕೀನ್ಯಾ ತಂಡಗಳ ನಡುವಣ ವಿಶ್ವಕಪ್ ಪಂದ್ಯವನ್ನು ನೋಡಲು ಬಂದಿದ್ದ ಪ್ರೇಕ್ಷಕರಲ್ಲಿ ಸುನಾಮಿ ಅಟ್ಟಹಾಸದಲ್ಲಿ ಆಘಾತಕಾರಿ ಪೆಟ್ಟು ತಿಂದ ಹಂಬಂಟೋಟಾ ನಗರದಲ್ಲಿ ನೆಲೆಸಿರುವ ಕುಟುಂಬಗಳ ಮಕ್ಕಳು.

ಸುಮಾರು ಮೂರು ಸಾವಿರ ಮಕ್ಕಳು ಕ್ರೀಡಾಂಗಣಕ್ಕೆ ಬಂದು ಪಾಕ್ ಮತ್ತು ಕೀನ್ಯಾ ನಡುವಣ ಹಣಾಹಣಿಗೆ ಸಾಕ್ಷಿಯಾದರು. 35,000 ಆಸನಗಳ ವ್ಯವಸ್ಥೆ ಇರುವ ಇಲ್ಲಿ ಹತ್ತು ಸಾವಿರಕ್ಕೂ ಕಡಿಮೆ ಕ್ರಿಕೆಟ್ ಪ್ರೇಮಿಗಳು ಕಾಣಿಸಿದರು.
ಅವರಲ್ಲಿ ಹೆಚ್ಚಿನವರು ಮಕ್ಕಳು. 25 ವಿವಿಧ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಈ ಮಕ್ಕಳಿಗೆ ಉಚಿತವಾಗಿ ಕ್ರೀಡಾಂಗಣ ಪ್ರವೇಶದ ಅವಕಾಶ ನೀಡಿದ್ದು ಮಾತ್ರವಲ್ಲ, ಊಟದ ವ್ಯವಸ್ಥೆಯನ್ನೂ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.